ವಿಸ್ತಾರಾ ವಿಮಾನ ಸಿಬ್ಬಂದಿಯ ಮೇಲೆ ಹಲ್ಲೆ: ಅರೆ ಬೆತ್ತಲೆಯಾಗಿ ಓಡಾಡಿದ ಮಹಿಳೆ!
ವಿಮಾನದಲ್ಲಿ ಪ್ರಯಾಣಿಕರ ಅಶಿಸ್ತಿನ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ವರದಿಯಾಗುತ್ತಿವೆ. ವಿಮಾನದಲ್ಲಿ ಪ್ರಯಾಣಿಕರೊಬ್ಬರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಮತ್ತೊಂದು ಪ್ರಕರಣ ದಾಖಲಾಗಿದೆ.
ಮುಂಬೈ ಜನವರಿ 31: ಅಬುಧಾಬಿಯಿಂದ ಮುಂಬೈಗೆ ತೆರಳುತ್ತಿದ್ದ ವಿಸ್ತಾರಾ ವಿಮಾನದಲ್ಲಿ ಸೋಮವಾರ ಗದ್ದಲ ಸೃಷ್ಟಿಸಿದ್ದಕ್ಕಾಗಿ ಇಟಾಲಿಯನ್ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯು ಎಕಾನಮಿ ಟಿಕೆಟ್ ಪಡೆದು ಬ್ಯುಸಿನೆಸ್ ಕ್ಲಾಸ್ನಲ್ಲಿ ಕುಳಿತುಕೊಳ್ಳಲು ಬಯಸಿದರು. ಇದನ್ನು ನಿರಾಕರಿಸಿದ್ದರಿಂದ ಕ್ಯಾಬಿನ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದರು. ತಮ್ಮ ಬಟ್ಟೆಗಳನ್ನು ಕಳಚಿ ಭಾಗಶಃ ಬೆತ್ತಲೆಯಾಗಿ ವಿಮಾನದಲ್ಲಿ ಓಡಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಿಂಸಾತ್ಮಕ ಮತ್ತು ಅಶಿಸ್ತಿನ ವರ್ತನೆಯಿಂದ ಇಟಲಿಯ ಪಾವೊಲಾ ಪೆರುಸಿಯೊ ಎಂಬ ಮಹಿಳೆಯ ಮೇಲೆ ಸಹಾರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಇಟಾಲಿಯನ್ ಮಹಿಳೆಗೆ ನೋಟಿಸ್ ನೀಡಿದ್ದಾರೆ. ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್ಒಪಿ) ಪ್ರಕಾರ ಘಟನೆಯನ್ನು ಸಂಬಂಧಿತ ಅಧಿಕಾರಿಗಳಿಗೆ ವರದಿ ಮಾಡಲಾಗಿದೆ ಎಂದು ವಿಸ್ತಾರಾ ವಕ್ತಾರರು ತಿಳಿಸಿದ್ದಾರೆ.

ಅರೆ ಬೆತ್ತಲೆಯಾಗಿ ಓಡಾಡಿದ ಪ್ರಯಾಣಿಕಳು!
ಈ ಬಗ್ಗೆ ಮಾಹಿತಿ ನೀಡಿದ ವಿಸ್ತಾರಾ ವಕ್ತಾರರು, 'ವಿಸ್ತಾರಾ ತನ್ನ ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆ, ಭದ್ರತೆ ಮತ್ತು ಘನತೆಗೆ ಅಪಾಯವನ್ನುಂಟು ಮಾಡುವ ಅಶಿಸ್ತಿನ ನಡವಳಿಕೆಯ ವಿರುದ್ಧ ದೃಢವಾಗಿ ನಿಂತಿದೆ. ಏರ್ಲೈನ್ನ ಪ್ರಕಾರ, ಪೈಲಟ್ ಇತರ ಗ್ರಾಹಕರಿಗೆ ಅವರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಭರವಸೆ ನೀಡಲು ನಿಯಮಿತ ಪ್ರಕಟಣೆಗಳನ್ನು ಮಾಡುತ್ತದೆ. ಹೀಗಾಗಿ ಪ್ರಯಾಣಿಕರಿಂದ ತೊಂದರೆಯಾದ ನಂತರ ತಕ್ಷಣ ಕ್ರಮ ತೆಗೆದುಕೊಳ್ಳಲು ಭದ್ರತಾ ಏಜೆನ್ಸಿಗಳಿಗೆ ತಿಳಿಸಲಾಯಿತು' ಎಂದಿದೆ.

ಪ್ರಯಾಣಿಕರ ವಿರುದ್ಧ ಕ್ರಮ
ಸೋಮವಾರ ಮುಂಜಾನೆ 2:03 ಕ್ಕೆ ಅಬುಧಾಬಿಯಿಂದ ವಿಮಾನ ಹಾರಾಟ ನಡೆಸಿತು. ಜನವರಿ 30, 2023 ರಂದು ಅಬುಧಾಬಿಯಿಂದ ಮುಂಬೈಗೆ ಕಾರ್ಯಾಚರಿಸುತ್ತಿರುವ ವಿಸ್ತಾರಾ ಫ್ಲೈಟ್ UK 256 ನಲ್ಲಿ ಅಶಿಸ್ತಿನ ಪ್ರಯಾಣಿಕರಿದ್ದರು. ಅವರ ಅಶಿಸ್ತಿನ ನಡವಳಿಕೆ ಮತ್ತು ಹಿಂಸಾತ್ಮಕ ನಡವಳಿಕೆಯನ್ನು ಗಮನದಲ್ಲಿಟ್ಟುಕೊಂಡು, ಕ್ಯಾಪ್ಟನ್ ಎಚ್ಚರಿಕೆಯನ್ನು ನೀಡಿದರು.ಇದರಿಂದ ಪ್ರಯಾಣಿಕರ ವಿರುದ್ಧ ಕ್ರಮಕ್ಕೆ ಸೂಚಿಸಲಾಯಿತು.
ಸೋಮವಾರ ಬೆಳಗ್ಗೆ ಮುಂಬೈಗೆ ಬಂದಿಳಿದ ನಂತರ ಏರ್ ವಿಸ್ತಾರಾ ಯುಕೆ 256 ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಿಂದ ದೂರು ಸ್ವೀಕರಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಮೂಲಗಳ ಪ್ರಕಾರ, ವಿಸ್ತಾರಾ ಸೂಕ್ತ ಮತ್ತು ತ್ವರಿತ ಕ್ರಮ ಕೈಗೊಂಡಿದೆ. ವಿಮಾನದಲ್ಲಿ ಹಲ್ಲೆ ಅಥವಾ ಅಶಿಸ್ತಿನ ವರ್ತನೆಗಳು ಕಂಡು ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಇದೇ ರೀತಿಯ ಗಣಟೆಗಳು ಬೆಳಕಿಗೆ ಬಂದಿವೆ.

ಜಾಮೀನು ಅರ್ಜಿಯ ತೀರ್ಪ ಇಂದು ವಿಚಾರಣೆ
ಡಿಸೆಂಬರ್ 6 ರಂದು ಪ್ಯಾರಿಸ್-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಪಾನಮತ್ತ ವ್ಯಕ್ತಿಯೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಹೊದಿಕೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಎನ್ನಲಾಗಿದೆ. ಬಳಿಕ ಪುರುಷ ಪ್ರಯಾಣಿಕ ಲಿಖಿತವಾಗಿ ಕ್ಷಮೆಯಾಚಿಸಿದ ಕಾರಣ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಪುರುಷ ಪ್ರಯಾಣಿಕನನ್ನು ಬಂಧಿಸಲಾಗಿದೆ. ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಉದ್ಯಮಿ ಶಂಕರ್ ಮಿಶ್ರಾ ಅವರ ಜಾಮೀನು ಅರ್ಜಿಯ ತೀರ್ಪನ್ನು ದೆಹಲಿ ನ್ಯಾಯಾಲಯ ಸೋಮವಾರ ಜನವರಿ 31ಕ್ಕೆ ಕಾಯ್ದಿರಿಸಿದೆ.

ಗಗನಸಖಿಗೆ ಕಿರುಕುಳ, ಕ್ಯಾಪ್ಟನ್ ಮೇಲೆ ಹಲ್ಲೆ
ಜನವರಿ 6ರಂದು ದೆಹಲಿಯಿಂದ ಪಾಟ್ನಾಗೆ ತೆರಳುತ್ತಿದ್ದ ಇಂಡಿಗೋ ಏರ್ಲೈನ್ಸ್ ವಿಮಾನದಲ್ಲಿ ಕುಡುಕರು ರೊಚ್ಚಿಗೆದ್ದ ವಿಡಿಯೋ ವೈರಲ್ ಆಗಿತ್ತು. ಗಗನಸಖಿಯೊಂದಿಗೆ ಅನುಚಿತ ವರ್ತನೆ ತೋರಿ, ಕ್ಯಾಪ್ಟನ್ ಮೇಲೆ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿತ್ತು. ಘಟನೆಯಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.












Click it and Unblock the Notifications