ನಮಸ್ಕಾರದ ಭಂಗಿ ಮೂಲಕ ಹೊಸ ಅಸ್ತ್ರ ಬಿಟ್ಟ ನರೇಂದ್ರ ಮೋದಿ!
Recommended Video

"ನಮ್ಮ ಮನೆಯ ದುರಸ್ತಿ ಮಾಡುವಾಗ ಸಮಸ್ಯೆ ಎದುರಿಸುತ್ತೀವಲ್ವಾ? ಇದೀಗ ಇಡೀ ದೇಶದ ದುರಸ್ತಿ ಆಗುತ್ತಿದೆ. ಆದ್ದರಿಂದ ದಯವಿಟ್ಟು ಸಹಿಸಿಕೊಳ್ಳಿ ಮತ್ತು ಬಿಜೆಪಿಯನ್ನು ಬೆಂಬಲಿಸಿ" ಎಂಬ ಒಕ್ಕಣೆಯೊಂದಿಗೆ ಕೈ ಮುಗಿದು ನಿಂತಿರುವ ಮೋದಿ ಪೋಸ್ಟರ್ ಬಿಜೆಪಿಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮೋದಿ ಪೋಸ್ಟರ್ ಗಳನ್ನು ನೋಡಿದರೆ ಬದಲಾವಣೆ ಸ್ಪಷ್ಟವಾಗಿ ಗೋಚರಿಸುತ್ತದೆ. ಕೈ ಮುಗಿದು, ವಿಧೇಯತೆಯಿಂದ ನಿಂತಿರುವ ಮೋದಿ ಅವರ ಭಂಗಿಯನ್ನು ಫೋಟೋಗಳಲ್ಲಿ ನೋಡಿದರೆ, ಮೊದಲ ಸಲಕ್ಕೆ ಹೀಗೆ ಕಾಣಿಸಿಕೊಂಡಂತೆ ಅನಿಸುತ್ತದೆ.
ಕೆಲವೇ ತಿಂಗಳ ಹಿಂದಿನವರೆಗೆ ಗುಜರಾತ್ ಚುನಾವಣೆಯು ಮೋದಿ ಪಾಲಿನ ಸುಲಭ ತುತ್ತು ಅಂತಲೇ ಬಿಂಬಿತವಾಗಿತ್ತು. ಆದರೆ ಕೆಲ ವಾರಗಳಲ್ಲೇ ಬದಲಾದ ಪರಿಸ್ಥಿತಿಗಳಿಂದ ಈ ಚುನಾವಣೆ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳಲೇ ಬೇಕಾಗಿದೆ. ಇದು ಕೇವಲ ಮಾಧ್ಯಮಗಳ ವಿಶ್ಲೇಷಣೆ ಅಂತ ತೆಗೆದುಹಾಕುವಂತಿಲ್ಲ.
ಆದ್ದರಿಂದಲೆ ಏನೋ ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರವನ್ನು ಪ್ರಧಾನಿ ನರೇಂದ್ರ ಮೋದಿ ಭಾರೀ ಆಕ್ರಮಣಕಾರಿಯಾಗಿ ಸೋಮವಾರ ಆರಂಭಿಸಿದ್ದಾರೆ. ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ದೊಡ್ಡ ಸವಾಲೊಂದು ಚುನಾವಣೆ ರೂಪದಲ್ಲಿ ಅವರೆದುರಿಗೆ ಇದೆ.

ಮೋದಿ ಆಡಳಿತ ವೈಖರಿ ಬೇರೆ
ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕೊಟ್ಟ ಆಡಳಿತ ವೈಖರಿ ಬೇರೆ, ಈಗ ಇರುವ ರೀತಿಯೇ ಬೇರೆ ಎಂಬುದು ಸತ್ಯ. ಜತೆಗೆ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಒಂದು ಕಡೆ. ಆದರೆ ಜನರು ಸಮಸ್ಯೆಗಳನ್ನು ಎದುರಿಸುತ್ತಿರುವುದು ಕೂಡ ಸತ್ಯ ಎಂಬುದು ಅರಿವಿಗೆ ಬಂದಿದೆ.

ಫಲಿತಾಂಶದಲ್ಲಿ ಏರುಪೇರಾದರೆ ಬೇರೆ ಸಂದೇಶ ರವಾನೆ
ನರೇಂದ್ರ ಮೋದಿ ಅವರಿಗೆ ಗುಜರಾತ್ ವಿಧಾನಸಭೆಯ ಫಲಿತಾಂಶದಲ್ಲಿ ಚೂರು ಏರುಪೇರಾದರೂ ಇಡೀ ದೇಶಕ್ಕೆ ಹೋಗುವ ಸಂದೇಶ ಏನು ಅಂತ ಗೊತ್ತಿದೆ. ಜನಸಾಮಾನ್ಯರು ಹಾಗೂ ನಿವೃತ್ತ ಅಧಿಕಾರಿಗಳಲ್ಲಿ ಬಿಜೆಪಿ ಬಗ್ಗೆ ಬದಲಾಗುತ್ತಿರುವ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇದ್ದರೆ ಅದು ಮೋದಿಗೆ ಮಾತ್ರ ಎಂಬುದೂ ಸತ್ಯ. ಅದಕ್ಕಾಗಿ ಇರುವ ಯಾವ ಅವಕಾಶವನ್ನೂ ಕಳೆದುಕೊಳ್ಳಲು ಅವರು ತಯಾರಿಲ್ಲ.

ಹಿಂದೂಗಳು ಸಾಲಿಡ್ಡಾಗಿ ಬಿಜೆಪಿ ಪರವಾಗಿ ನಿಲ್ಲೋದು ಅನುಮಾನ
ಕಳೆದ ಲೋಕಸಭಾ ಚುನಾವಣೆ ಆದ ನಂತರ ಹಿಂದೂ ಮತಗಳನ್ನು ಒಗ್ಗೂಡಿಸಲು ಗಮನಾರ್ಹವಾದಂಥ ಪ್ರಯತ್ನವನ್ನು ಬಿಜೆಪಿ ಮಾಡಿಲ್ಲ. ಇನ್ನು ಗುಜರಾತ್ ನಲ್ಲಿನ ಜಾತಿ ಸಮೀಕರಣದಲ್ಲೂ ಬದಲಾವಣೆ ಗೋಚರಿಸುತ್ತಿದೆ. ಈ ಹಿಂದಿನ ಚುನಾವಣೆಗಳಲ್ಲಿ ಹಿಂದೂಗಳ ಮತ ಸಾಲಿಡ್ಡಾಗಿ ಬಿಜೆಪಿಗೆ ಬೀಳುತ್ತಿತ್ತು. ಆದರೆ ಈ ಬಾರಿ ಅಂಥ ವಾತಾವರಣ ಕಾಣಿಸಿಕೊಳ್ಳುತ್ತಿಲ್ಲವಾದ್ದರಿಂದ ರಣಾಂಗಣಕ್ಕೆ ನುಗ್ಗಿರುವ ಮೋದಿ ಹೆಗಲಿಗೆ ಹೆಚ್ಚಿನ ಜವಾಬ್ದಾರಿ ಇದೆ.

ಸ್ಥಳೀಯ ಬಿಜೆಪಿ ನಾಯಕರ ಅಹಂಭಾವ
ಸ್ಥಳೀಯ ಬಿಜೆಪಿ ನಾಯಕರಲ್ಲಿ ಒಂದು ಬಗೆಯ ಅಹಂಭಾವ ಜನರಿಗೆ ಕಾಣುತ್ತಿದೆ. ಇದನ್ನು ಅಲ್ಲಿನ ಬಿಜೆಪಿ ನಾಯಕರೇ ಹೇಳುತ್ತಾರೆ. ಜನರ ಮನಸ್ಸಿನಲ್ಲಿನ ಆ ಭಾವನೆ ಹೋಗಲಾಡಿಸುವ ಸಲುವಾಗಿಯೇ ನರೇಂದ್ರ ಮೋದಿ ಕೈ ಮುಗಿದು ನಿಂತು ಮತ ಕೇಳುತ್ತಿರುವ ಫೋಟೋಗಳನ್ನು ಹಾಕಲಾಗುತ್ತಿದೆ.

ಅಪನಗದೀಕರಣ, ಜಿಎಸ್ ಟಿ ಜಾರಿ ಹೊಡೆತ
ಅಪನಗದೀಕರಣ ಹಾಗೂ ಜಿಎಸ್ ಟಿ ಜಾರಿಯಿಂದ ಉದ್ಯೋಗ ಸೃಷ್ಟಿ ಆಗಿಲ್ಲ. ಪಟ್ಟಣ ಪ್ರದೇಶಗಳಲ್ಲಿ ಜನರಿಗೆ ಆರ್ಥಿಕ ಹಿನ್ನಡೆ ಆಗಿದೆ. ಯಾವ ಟೀ ಅಂಗಡಿಗಳಿಂದ ಕಳೆದ ಲೋಕಸಭೆ ಚುನಾವಣೆಯ ಗೆಲುವಿನ ಚುಂಗು ಹಿಡಿದು ದೆಹಲಿವರೆಗೆ ಬಿಜೆಪಿ ತಲುಪಿತ್ತೋ ಅವೇ ಟೀ ಅಂಗಡಿಗಳಲ್ಲಿ ಜನ ತಮ್ಮ ಚಿಂತೆ ಹಾಗೂ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ.

ಮೋದಿ ಸಮ್ಮೋಹನ ಶಕ್ತಿ ಆಗಿನಷ್ಟಿಲ್ಲ
ಹಾಗಂತ ಇಡೀ ವಾತಾವರಣವೇ ಬಿಜೆಪಿಯ ವಿರುದ್ಧ ಇದೆಯಾ ಅಂದರೆ, ಖಂಡಿತಾ ಇಲ್ಲ. ಆದರೆ ಯಾವ ಮೋದಿಯ ವಿರುದ್ಧ ಮಾತನಾಡಿದರೆ ಅದು ಪಾಪ ಕಾರ್ಯ ಎಂಬಷ್ಟರ ಮಟ್ಟಿಗೆ ಜನರ ಮನಸ್ಥಿತಿ ಇತ್ತೋ ಅದೀಗ ಬದಲಾಗಿದೆ. ಗುಜರಾತ್ ನಲ್ಲೇ ಇದ್ದಷ್ಟು ಕಾಲ ಮೋದಿಯವರು ಉಳಿಸಿಕೊಂಡಿದ್ದ ಆ ಸಮ್ಮೋಹನ ಶಕ್ತಿ ಈಗ ಉಳಿದಿಲ್ಲ.

ತುಂಬ ಕಡಿಮೆ ಹಾಗೂ ತುಂಬ ತಡ
ಗುಜರಾತ್ ಜನರ ನಾಡಿಮಿಡಿತ ಅರಿಯಲು ಸಾಧ್ಯವಾಗದಷ್ಟು ಅನನುಭವಿ ಅಥವಾ ದಪ್ಪ ಚರ್ಮದ ರಾಜಕಾರಣಿಯಂತೂ ಮೋದಿ ಅಲ್ಲ. ಅದಕ್ಕಾಗಿಯೇ ಚುನಾವಣಾ ಪೂರ್ವದಲ್ಲಿಯೇ ಗುಜರಾತ್ ರಾಜ್ಯವನ್ನು ಗಮನದಲ್ಲಿಟ್ಟುಕೊಂಡೇ ಘೋಷಣೆಗಳನ್ನು ಮಾಡಿದರು. ಆದರೆ ಅಲ್ಲಿನ ಜನರಿಗೆ ಅದು ತುಂಬ ಕಡಿಮೆಯಂತೆಯೂ ತುಂಬ ತಡವಾದಂತೆಯೂ ಅನ್ನಿಸಿತು.

ಆತಂಕದ ಸಂಗತಿ
ಬಿಜೆಪಿ ಪಾಲಿಗೆ ನಗರ ಪ್ರದೇಶದ ಮತದಾರರು ದಶಕಗಳಿಂದಲೇ ಕೈ ಬಿಟ್ಟಿಲ್ಲ. ಒಂದು ನಿರ್ದಿಷ್ಟ ಪ್ರಮಾಣದ ಮತ ಗಳಿಕೆಯಿಂದಲೂ ಅದು ಕೆಳಗಿಳಿದಿಲ್ಲ. ಆದರೆ ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಬರಬಹುದಾದ ಮತ ಪ್ರಮಾಣದ ಬಗ್ಗೆ ನಿರೀಕ್ಷೆಗಳಿವೆಯಲ್ಲಾ, ಅದು ಬಿಜೆಪಿಗೆ ಆತಂಕಕಾರಿ ಸಂಗತಿ. ಸ್ವಲ್ಪ ಹೆಚ್ಚು-ಕಡಿಮೆಯಾದರೂ ಗುಜರಾತ್ ವಿಧಾನಸಭಾ ಚುನಾವಣೆ ದುಃಸ್ವಪ್ನವಾಗಿ ಬಿಡಬಹುದು. ಅಂಥ ಸನ್ನಿವೇಶವನ್ನು ತಡೆಯುವ ಕಾರಣದಿಂದಲೇ ಕತ್ತಿ ಝಳಪಿಸುತ್ತಾ ಗುಜರಾತ್ ರಣಾಂಗಣಕ್ಕೆ ಇಳಿದಿದ್ದಾರೆ ಚುನಾವಣೆ ರಣತಂತ್ರಗಳ ಜಟ್ಟಿ ನರೇಂದ್ರ ಮೋದಿ.












Click it and Unblock the Notifications