Breaking News: ತಕ್ಷಣದಿಂದಲೇ ಐಎಎಸ್ ಸೇವೆಯಿಂದ ಪೂಜಾ ಖೇಡ್ಕರ್ ಬಿಡುಗಡೆ
ನವದೆಹಲಿ, ಸೆಪ್ಟೆಂಬರ್ 07: ಭಾರತ ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಭಾರತೀಯ ಆಡಳಿತಾತ್ಮಕ ಸೇವೆಯಿಂದ ಪೂಜಾ ಖೇಡ್ಕರ್ ಬಿಡುಗಡೆಗೊಳಿಸಿ ಆದೇಶಿಸಿದೆ. ಕಳೆದ ತಿಂಗಳು ಕೇಂದ್ರ ಲೋಕಸೇವಾ ಆಯೋಗ ಪೂಜಾ ಖೇಡ್ಕರ್ ಆಯ್ಕೆಯನ್ನು ರದ್ದುಗೊಳಿಸಿ ಆದೇಶವನ್ನು ಹೊರಡಿಸಿತ್ತು. ನಕಲಿ ದಾಖಲೆಗಳನ್ನು ನೀಡಿ ಹಿಂದುಳಿದ ವರ್ಗ ಮತ್ತು ಅಂಗವಿಕಲರ ಕೋಟಾದಡಿ ಮೀಸಲಾತಿಯನ್ನು ಪಡೆದಿರುವ ಆರೋಪವನ್ನು ಪೂಜಾ ಎದುರಿಸುತ್ತಿದ್ದಾರೆ.
ಮೂಲಗಳ ಮಾಹಿತಿ ಪ್ರಕಾರ ಶನಿವಾರದಿಂದಲೇ ಜಾರಿಗೆ ಬರುವಂತೆ ಪೂಜಾ ಖೇಡ್ಕರ್ ಅವರನ್ನು ಐಎಎಸ್ ಸೇವೆಯಿಂದ ಬಿಡುಗಡೆಗೊಳಿಸಿ ಆದೇಶಿಸಲಾಗಿದೆ. ನಕಲಿ ದಾಖಲೆಗಳನ್ನು ನೀಡಿ ಮೀಸಲಾತಿ ಪಡೆದ ಆರೋಪದಲ್ಲಿ ಅವರ ವಿರುದ್ಧ ಇನ್ನೂ ತನಿಖೆ ನಡೆಯುತ್ತಿದೆ. ಅವರಿಗೆ ಶೋಕಾಸ್ ನೋಟಿಸ್ ಯುಪಿಎಸ್ಸಿ ಅವರ ಆಯ್ಕೆಯನ್ನು ರದ್ದುಗೊಳಿಸಿ ಜುಲೈ 31ರಂದು ಆದೇಶವನ್ನು ಹೊರಡಿಸಿತ್ತು.

2022ರ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದ ಪೂಜಾ ಖೇಡ್ಕರ್ ತರಬೇತಿಯನ್ನು ಪೂರ್ಣಗೊಳಿಸಿ, ಪ್ರೊಬೆಷನರಿ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಆದರೆ ನಕಲಿ ದಾಖಲೆಗಳನ್ನು ನೀಡಿ, ಮೀಸಲಾತಿ ಪಡೆದ ಆರೋಪ ಕೇಳಿ ಬಂದ ಬಳಿಕ ಯುಪಿಎಸ್ಸಿ ಅವರ ವಿರುದ್ಧ ಸಮಗ್ರ ತನಿಖೆ ಕೈಗೊಂಡಿತ್ತು. ಆದ್ದರಿಂದ ಅವರ ಆಯ್ಕೆಯನ್ನು ರದ್ದುಗೊಳಿಸಿತ್ತು.
ನಿಗದಿತ ಅವಧಿಗಿಂತ ಹೆಚ್ಚು ಬಾರಿ ಐಎಎಸ್ ಪರೀಕ್ಷೆ ತೆಗೆದುಕೊಳ್ಳಲು ಪೂಜಾ ಖೇಡ್ಕರ್ ಹಲವು ಅಕ್ರಮಗಳನ್ನು ಮಾಡಿದ್ದಾರೆ ಎಂಬುದು ಈಗಾಗಲೇ ತನಿಖೆಯಲ್ಲಿ ಬಯಲಾಗಿದೆ. ತಂದೆ, ತಾಯಿ, ಮನೆಯ ವಿಳಾಸ, ಇ-ಮೇಲ್ ಐಡಿ ಸೇರಿದಂತೆ ಹಲವು ನಕಲಿ ಮಾಹಿತಿಗಳನ್ನು ಅವರು ನೀಡಿದ್ದರು.
ಹಲವು ಬಾರಿ ಯುಪಿಎಸ್ಸಿ ಪರೀಕ್ಷೆ ತೆಗೆದುಕೊಂಡಿರುವುದು ಸಹ ಖಚಿತವಾಗಿತ್ತು.
ಕೇಂದ್ರ ಲೋಕಸೇವಾ ಆಯೋಗ ಪೂಜಾ ಖೇಡ್ಕರ್ ವಿರುದ್ಧ ದೂರು ದಾಖಲು ಮಾಡಿತ್ತು. ನಿಮ್ಮ ಅಭ್ಯರ್ಥಿತನ ಏಕೆ ರದ್ದುಗೊಳಿಸಬಾರದು? ಎಂದು ಪ್ರಶ್ನಿಸಿ ನೋಟಿಸ್ ಜಾರಿಗೊಳಿಸಿತ್ತು. ಪೂಜಾ ಖೇಡ್ಕರ್ ಭವಿಷ್ಯದಲ್ಲಿ ಮತ್ತೆ ಯುಪಿಎಸ್ಸಿ ಪರೀಕ್ಷೆ ತೆಗೆದುಕೊಳ್ಳದಂತೆ ನಿರ್ಬಂಧ ವಿಧಿಸಬೇಕು ಎಂದು ಸಹ ಒತ್ತಾಯ ಕೇಳಿ ಬಂದಿತ್ತು.
ತಮ್ಮ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ಪೂಜಾ ಖೇಡ್ಕರ್ ದೆಹಲಿ ಹೈಕೋರ್ಟ್ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆಗ ಕೋರ್ಟ್ ಜಾಮೀನು ಅರ್ಜಿಗೆ ಪೊಲೀಸರ ಆಕ್ಷೇಪಣೆಯನ್ನು ಕೇಳಿತ್ತು. ಪೊಲೀಸರು ಆಕ್ಷೇಪಣೆ ಸಲ್ಲಿಸುವಾಗ 2022ನೇ ಸಾಲಿನ ಮತ್ತು 2023ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಗಳಿಗೆ ಪೂಜಾ ಖೇಡ್ಕರ್ ಎರಡು ಪ್ರಮಾಣ ಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿಸಿದ್ದರು.
ಈ ಪ್ರಮಾಣ ಪತ್ರದಲ್ಲಿ ಶ್ರವಣ ಮತ್ತು ದೃಷ್ಟಿ ದೋಷದ ಕುರಿತು ಸಲ್ಲಿಸಲಾಗಿರುವ ಪ್ರಮಾಣ ಪತ್ರ ನಕಲಿಯಾಗಿದೆ. ಮಹಾರಾಷ್ಟ್ರದ ಅಹಮದ್ ನಗರದ ಆರೋಗ್ಯಾಧಿಕಾರಿ ಈ ಪ್ರಮಾಣ ಪತ್ರವನ್ನು ನೀಡಿಲ್ಲ. ನಕಲಿ ಸಹಿ ಮೂಲಕ ನಕಲಿ ಪ್ರಮಾಣ ಪತ್ರವನ್ನು ಸಿದ್ಧಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದರು.
ದೆಹಲಿ ಹೈಕೋರ್ಟ್ ಪೂಜಾ ಖೇಡ್ಕರ್ ಬಂಧನಕ್ಕೆ ನೀಡಿದ್ದ ಮಧ್ಯಂತರ ತಡೆಯಾಯಜ್ಞೆಯನ್ನು ಸೆಪ್ಟೆಂಬರ್ 5ರ ತನಕ ವಿಸ್ತರಣೆ ಮಾಡಿತ್ತು. ಪೂಜಾ ಖೇಡ್ಕರ್ಗಾಗಿ ಯಾವುದೇ ಯುಪಿಎಸ್ಸಿ ನಿಯಮಗಳಲ್ಲಿ ಸಡಿಲಗೊಳಿಸಿಲ್ಲ. ಅವರು ನಕಲಿ ದಾಖಲೆ ಸಲ್ಲಿಕೆ ಮಾಡಿ ಹಲವು ಬಾರಿ ಪರೀಕ್ಷೆ ಬರೆದಿರುವುದು ಈಗಾಗಲೇ ತನಿಖೆಯಲ್ಲಿ ಸಾಬೀತಾಗಿದೆ.












Click it and Unblock the Notifications