ಗೂಟದ ಕಾರುಗಳಿಗೆ, ವಿಐಪಿ ಸಂಸ್ಕೃತಿಗೆ ಗುಡ್ ಬೈ!
ವಿಐಪಿ ಸಂಸ್ಕೃತಿಗೆ ಮಟ್ಟ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂಬರುವ ಮೇ 1ರಿಂದ ಕೆಂಪು ದೀಪದ ವಾಹನ ಬಳಕೆ ಮೇಲೆ ನಿಷೇಧವೇರಿದೆ.
ನವದೆಹಲಿ, ಏಪ್ರಿಲ್ 19 : ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳು, ಲೋಕಸಭೆ ಸ್ಪೀಕರ್ ಹೊರತುಪಡಿಸಿ ಇನ್ನುಳಿದ ವಿಐಪಿಗಳು ಕೆಂಪು ದೀಪದ ವಾಹನ (ಗೂಟದ ಕಾರು) ಬಳಸುವಂತಿಲ್ಲ..
ಹೌದು. ವಿಐಪಿ ಸಂಸ್ಕೃತಿಗೆ ಕೊನೆಹಾಡುವ ಸಲುವಾಗಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಈ ತೀರ್ಮಾನ ಕೈಗೊಂಡಿದ್ದು, ಗಣ್ಯ ವ್ಯಕ್ತಿಗಳ ಕಾರಿನ ಮೇಲೆ ನೀಲಿ ಹಾಗೂ ಕೆಂಪು ದೀಪಗಳ ಬಳಕೆಯನ್ನ ನಿಷೇಧಿಸಿದೆ. ಈ ನಿಯಮ ಮೇ 1ರಿಂದಲೇ ಜಾರಿಗೆ ಬರಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ತಿಳಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯಸರ್ಕಾರದ ಸಚಿವರುಗಳು ಮತ್ತು ಸರ್ಕಾರದ ಅಧಿಕಾರಿಗಳು ಕೆಂಪು ದೀಪದ ವಾಹನವನ್ನು ಬಳಸುವಂತಿಲ್ಲ. ಆದರೆ, ಆಂಬುಲೆನ್ಸ್, ಅಗ್ನಿ ಶಾಮಕದಳ, ಪೊಲೀಸ್ ಗಳಂತಹ ತುರ್ತು ಸೇವೆ ಒದಗಿಸುವ ವಾಹನಗಳು ನೀಲಿ ದೀಪ ಬಳಸಬಹುದಾಗಿದೆ ಎಂದರು.
ಯೋಗಿ ಆದಿತ್ಯನಾಥ ನೇತೃತ್ವದ ಉತ್ತರಪ್ರದೇಶ ಸರ್ಕಾರ ಹಾಗೂ ಅಮರೀಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರ ವಿಐಪಿ ವಾಹನಗಳ ಮೇಲೆ ಕೆಂಪು ದೀಪ ಬಳಕೆಯನ್ನು ನಿಷೇಧಿಸಲಾಗಿದೆ.
ಹೆಚ್ಚಾಗಿ ಕೆಂಪು ದೀಪದ ಕಾರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದರಿಂದ 2013ರಲ್ಲಿ ಸುಪ್ರೀಂ ಕೋರ್ಟ್ ರಾಜಕಾರಣಿಗಳ ಕೆಂಪು ದೀಪದ ಕಾರುಗಳಿಗೆ ಬ್ರೇಕ್ ಹಾಕಿತ್ತು.
ಸಂವಿಧಾನಿಕ ಹುದ್ದೆಗಳಲ್ಲಿ ಇರುವವರು ಕೆಂಪು ದೀಪವಿರುವ ವಾಹನಗಳನ್ನು ಬಳಸೇಕು. ತುರ್ತು ಸೇವೆಯ ವಾಹನಗಳಾದ ಆಂಬ್ಯುಲೆನ್ಸ್, ಪೊಲೀಸ್ ವಾಹನಗಳು, ಅಗ್ನಿಶಾಮಕ ವಾಹನಗಳು ಇನ್ನು ಮುಂದೆ ಕೆಂಪು ದೀಪದ ಬದಲು, ನೀಲಿ ದೀಪಗಳನ್ನು ಬಳಸಬೇಕು ಎಂದು ಕೋರ್ಟ್ ಹೇಳಿತ್ತು.