ಆಪರೇಷನ್ ಕಮಲಕ್ಕೆ ಯತ್ನ ಖಂಡಿಸಿ ಟಿಆರ್ಎಸ್ ಪ್ರತಿಭಟನೆ
ಹೈದರಾಬಾದ್, ಅಕ್ಟೋಬರ್ 27: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್)ನ ನಾಲ್ವರು ಶಾಸಕರನ್ನು ಪಕ್ಷ ತೊರೆಯುವಂತೆ ಆಮಿಷವೊಡ್ಡಲು ಯತ್ನಿಸುತ್ತಿದ್ದ ಮೂವರ ಯತ್ನವನ್ನು ತಡೆದಿದ್ದೇವೆ ಎಂದು ತೆಲಂಗಾಣ ಪೊಲೀಸರು ಬುಧವಾರ ಹೇಳಿದ್ದಾರೆ.
ಈ ಮೂವರು ತಮಗೆ ಹಲವು ಆಫರ್ಗಳನ್ನು ನೀಡಿ ಆಮಿಷ ಒಡ್ಡಲು ಯತ್ನಿಸುತ್ತಿದ್ದಾರೆ ಎಂದು ಟಿಆರ್ಎಸ್ ಶಾಸಕರು ತಮಗೆ ಮಾಹಿತಿ ನೀಡಿದ್ದಾರೆ ಎಂದು ಸೈಬರಾಬಾದ್ ಪೊಲೀಸ್ ಕಮಿಷನರ್ ಸ್ಟೀಫನ್ ರವೀಂದ್ರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಾಲ್ವರು ಟಿಆರ್ಎಸ್ ಶಾಸಕರಾದ ಜಿ ಬಾಲರಾಜು, ಬಿ ಹರ್ಷವರ್ಧನ್ ರೆಡ್ಡಿ, ಆರ್ ಕಾಂತ ರಾವ್ ಮತ್ತು ರೋಹಿತ್ ರೆಡ್ಡಿ ಅವರಿಗೆ ಪಕ್ಷವನ್ನು ಬದಲಾಯಿಸಲು ನಗದು, ಹುದ್ದೆಗಳು ಮತ್ತು ಇತರ ಪ್ರೋತ್ಸಾಹಗಳನ್ನು ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮೂವರು ವ್ಯಕ್ತಿಗಳು ಯಾವ ಪಕ್ಷಕ್ಕೆ ಸೇರಿದವರು ಎಂಬ ವಿವರಗಳನ್ನು ನಾವು ವಿಚಾರಣೆ ನಡೆಸುತ್ತಿದ್ದೇವೆ ಎಂದು ರವೀಂದ್ರ ತಿಳಿಸಿದರು. ಆದರೆ, ಟಿಆರ್ಎಸ್ ಶಾಸಕರನ್ನು ಸೆಳೆಯಲು ಬಿಜೆಪಿಯ ಕೈವಾಡವಿದೆ ಎಂದು ಸರ್ಕಾರಿ ಸಚೇತಕ ಬಾಲ್ಕ ಸುಮನ್ ಆರೋಪಿಸಿದ್ದಾರೆ. ಟಿಆರ್ಎಸ್ ಪಕ್ಷದ ಶಾಸಕರು ಕೆಸಿಆರ್ ಅವರ ಸೈನಿಕರು ಮತ್ತು ತೆಲಂಗಾಣದ ಸ್ವಾಭಿಮಾನದ ಪ್ರತಿನಿಧಿಗಳು ಮತ್ತೊಮ್ಮೆ ಸಾಬೀತಾಗಿದೆ ಎಂದು ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಹೇಳಿದ್ದಾರೆ.
ತೆಲಂಗಾಣ ಸಚಿವರು ಮತ್ತು ಆಡಳಿತಾರೂಢ ಟಿಆರ್ಎಸ್ನ ಮುಖಂಡರು ಬುಧವಾರ ರಾತ್ರಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿ, ಟಿಆರ್ಎಸ್ ಶಾಸಕರನ್ನು ಖರೀದಿಸಲು ಬಿಜೆಪಿ ನಡೆಸುತ್ತಿರುವ ಪ್ರಯತ್ನವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ವಿಜಯವಾಡ ಹೆದ್ದಾರಿಯ ಹೈದರಾಬಾದ್ ಬಳಿಯ ಚೌಟುಪ್ಪಲ್ನಲ್ಲಿ ಟಿಆರ್ಎಸ್ ಮುಖಂಡರು ಧರಣಿ ನಡೆಸಿದರು. ಪ್ರತಿಭಟನೆಯಲ್ಲಿ ಸಚಿವರಾದ ಗಂಗೂಲ ಕಮಲಾಕರ್ ಮತ್ತು ಇಂದ್ರಕರನ್ ರೆಡ್ಡಿ ಭಾಗವಹಿಸಿದ್ದರು.

ಪ್ರತಿಭಟನಾಕಾರರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೇಸರಿ ಪಕ್ಷವು ತನ್ನ ಶಾಸಕರನ್ನು ಹಣ ಮತ್ತು ಹುದ್ದೆಯ ಆಫರ್ಗಳ ಮೂಲಕ ಆಮಿಷವೊಡ್ಡುವ ಮೂಲಕ ಟಿಆರ್ಎಸ್ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಪ್ರತಿಭಟನೆಯಿಂದಾಗಿ ಹೈದರಾಬಾದ್- ವಿಜಯವಾಡ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇತರ ಜಿಲ್ಲೆಗಳಲ್ಲಿ ಆಡಳಿತ ಪಕ್ಷದ ನಾಯಕರು ಇದೇ ರೀತಿಯ ಪ್ರತಿಭಟನೆಗಳನ್ನು ಆಯೋಜಿಸಿದ್ದರು.












Click it and Unblock the Notifications