ಬಿಪ್ಲಬ್ ಸರ್ಕಾರದಲ್ಲಿ ವಿಪ್ಲವ, ಸಂತೋಷ್, ಜೆಪಿ ನಡ್ಡಾಗೆ ದೂರು
ಗುವಾಹಟಿ/ನವದೆಹಲಿ, ಅ.12: ಬಿಹಾರ ಚುನಾವಣೆ ಬಿಸಿಯಲ್ಲಿರುವ ಬಿಜೆಪಿ ವರಿಷ್ಠರಿಗೆ ತ್ರಿಪುರಾದಲ್ಲಿ ಹೊಸ ತಲೆನೋವು ಶುರುವಾಗಿದೆ. ಸುಮಾರು ಏಳು ಮಂದಿ ಶಾಸಕರು ಬಂಡಾಯವೆದ್ದಿದ್ದು, ದೆಹಲಿಗೆ ಬಂದಿದ್ದಾರೆ. ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವಂತೆ ಪಕ್ಷದ ವರಿಷ್ಠರಲ್ಲಿ ಆಗ್ರಹಿಸಲು ಮುಂದಾಗಿದ್ದಾರೆ.
ತ್ರಿಪುರಾದಲ್ಲಿ 12ಕ್ಕೂ ಅಧಿಕ ಶಾಸಕರು ಸಿಎಂ ಬಿಪ್ಲವ್ ವಿರುದ್ಧ ಕಳಪೆ ನಾಯಕತ್ವ ಮತ್ತು ಅಧಿಕಾರದ ದುರುಪಯೋಗ ಆರೋಪ ಹೊರೆಸಿದ್ದಾರೆ. ಈ ಪೈಕಿ 7 ಮಂದಿ ಶಾಸಕರು ದೆಹಲಿಗೆ ಬಂದಿದ್ದು, ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ಭೇಟಿಗೆ ಮನವಿ ಮಾಡಿಕೊಂಡಿದ್ದಾರೆ.
ಮಾಜಿ ಆರೋಗ್ಯ ಸಚಿವ ಮತ್ತು ಬಿಜೆಪಿ ಶಾಸಕ ಸುದೀಪ್ ರಾಯ್ ಬಾರ್ಮನ್ ನೇತೃತ್ವದ ಗುಂಪಿನ ಜೊತೆ ಚರ್ಚಿಸಿ ತ್ರಿಪುರಾದ ಬಿಜೆಪಿ ಸರ್ಕಾರ ಉಳಿಸುವ ಜವಾಬ್ದಾರಿ ನಡ್ಡಾ ಹಾಗೂ ಸಂತೋಷ್ ಅವರ ಮೇಲೆ ಬಿದ್ದಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲು ತ್ರಿಪುರಾದ ಬಿಜೆಪಿ ಬಂಡಾಯ ಶಾಸಕರು ಯತ್ನಿಸಿದರೂ ಫಲ ಸಿಕ್ಕಿಲ್ಲ. ಸದ್ಯಕ್ಕೆ ಎಲ್ಲಾ ಶಾಸಕರು ದೆಹಲಿಯಲ್ಲಿರುವ ತ್ರಿಪುರಾ ಭವನದಲ್ಲಿದ್ದಾರೆ.
"ನಾವೆಲ್ಲರೂ ಪಕ್ಷದ ಬದ್ಧವಾಗಿದ್ದೇನೆ, ಪ್ರಧಾನಿ ಮೋದಿ ನಾಯಕತ್ವದಲ್ಲಿ ನಂಬಿಕೆ ಇರಿಸಿಕೊಂಡಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಆಡಳಿತವು ಒಂದಕ್ಕಿಂತ ಹೆಚ್ಚು ಅವಧಿಯನ್ನು ಉಳಿಸಿಕೊಳ್ಳಬೇಕಾದರೆ ಹಾಲಿ ನಾಯಕತ್ವ ಬದಲಾವಣೆ ಅಗತ್ಯವಾಗಿದೆ, ಬಿಪ್ಲಬ್ ಅವರಿಂದ ಪಕ್ಷಕ್ಕೆ ಅನೇಕ ಬಾರಿ ಮುಜುಗರ ಉಂಟಾಗಿದೆ. ಈಗ ಸಂಭಾಳಿಸದಿದ್ದರೆ ಅಧಿಕಾರವನ್ನು ಕಾಂಗ್ರೆಸ್ ಕೈಗೆ ನಾವೆ ಕೊಟ್ಟಂತಾಗುತ್ತದೆ'' ಎಂದು ಬಂಡಾಯ ಶಾಸಕರು ಹೇಳಿದ್ದಾರೆ.












Click it and Unblock the Notifications