Breaking: ತ್ರಿಪುರ; 6,000 ಬೆಂಬಲಿಗರೊಂದಿಗೆ ಬಿಜೆಪಿ ತೊರೆದ ನಾಯಕ
ಅಗರ್ತಲ, ಆಗಸ್ಟ 24: ತ್ರಿಪುರಾದಲ್ಲಿ ಐಪಿಎಫ್ಟಿಯೊಂದಿಗೆ ಸಮ್ಮಿಶ್ರ ಸರಕಾರವನ್ನು ಮುನ್ನಡೆಸುತ್ತಿರುವ ಬಿಜೆಪಿ, ಮುಂಬರುವ ರಾಜ್ಯ ಚುನಾವಣೆಗೆ ಮುನ್ನ ಬುಡಕಟ್ಟು ಪ್ರದೇಶಗಳಲ್ಲಿ ಭಾರಿ ಆಘಾತವನ್ನು ಎದುರಿಸಿದೆ.
ಸ್ವಾಯತ್ತ ಜಿಲ್ಲಾ ಕೌನ್ಸಿಲ್ನಲ್ಲಿ ಬಿಜೆಪಿಯ ವಿರೋಧ ಪಕ್ಷದ ನಾಯಕ ಹಂಗ್ಶಾ ಕುಮಾರ್ ತ್ರಿಪುರಾ ಅವರು ಬುಧವಾರ ಬೃಹತ್ ಬುಡಕಟ್ಟು ಬೆಂಬಲಿಗರೋಂದಿಗೆ ತಿಪ್ರಾ ಮೋಥಾಗೆ (Tipra Motha) ಸೇರ್ಪಡೆಗೊಂಡಿದ್ದಾರೆ. ತಿಪ್ರಾ ಮೋಥಾ ರಾಜ್ಯದ ಏಕೈಕ ಬುಡಕಟ್ಟು ಮಂಡಳಿಯಲ್ಲಿ ಆಡಳಿತ ಪಕ್ಷವಾಗಿದೆ.
ತ್ರಿಪುರ ಸಿಎಂ ಆಗಿ ಮಾಣಿಕ್ ಸಹಾ ಪ್ರಮಾಣ ವಚನ
ಹಂಗ್ಶಾ ಕುಮಾರ್ ತ್ರಿಪುರಾ ಜೊತೆಗೆ, 3,000 ಕುಟುಂಬಗಳ 6,500 ಜನರು "ತಿಪ್ರಾ ಮೋಥಾ" ಗೆ ಸೇರ್ಪಡೆಗೊಂಡಿದ್ದಾರೆ. ತಿಪ್ರಾ ಮೋಥಾ ನಾಯಕ ರಾಜ ಪ್ರದ್ಯೋತ್ ಕಿಶೋರ್ ಮಾಣಿಕ್ಯ ದೆಬ್ಬರ್ಮಾ ಅವರಿಂದ ಪಕ್ಷದ ಧ್ವಜಗಳನ್ನು ಸ್ವೀಕರಿಸಿ ಪಕ್ಕೆ ಅಧಿಕೃತವಾಗಿ ಸೇರಿದರು.
2023ರ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಪ್ರದ್ಯೋತ್ ಕಿಶೋರ್ ಮಾಣಿಕ್ಯ ದೆಬ್ಬರ್ಮಾ ಅವರು ಬಿಜೆಪಿಗೆ ಪ್ರಮುಖ ಎದುರಾಳಿಯಾಗಿದ್ದಾರೆ. ತ್ರಿಪುರಾದಲ್ಲಿ ತಿಪ್ರಾ ನೇತೃತ್ವದ ಬಿಜೆಪಿ ವಿರೋಧಿ ರಾಜಕೀಯ ರಂಗವು ಹೊರಹೊಮ್ಮುವ ಸೂಚನೆಗಳಿವೆ. ಇದನ್ನು ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಬೆಂಬಲಿಸಬಹುದು ಮತ್ತು ಬಿಜೆಪಿಗೆ ಭಾರಿ ಚುನಾವಣಾ ಸವಾಲನ್ನು ಒಡ್ಡಬಹುದು ಎಂದು ಊಹಿಸಲಾಗಿದೆ.
ಬುಡಕಟ್ಟು ಬೆಂಬಲಿಗರ ದೊಡ್ಡ ಪ್ರಮಾಣದ ಪಕ್ಷಾಂತರದ ಪಕ್ಷ್ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ಬಿಜೆಪಿ ಹೇಳಿದೆ. ಆದರೆ, ಪಕ್ಷದ ಮೂಲಗಳು ಖಾಸಗಿಯಾಗಿ ಇದು ಪಕ್ಷದ ಮೇಲೆ ಭಾರಿ ಆತಂಕವನ್ನು ಉಂಟುಮಾಡಿದೆ ಎಂದು ಒಪ್ಪಿಕೊಂಡಿದೆ. ಮುಂದಿನ ವರ್ಷದ ನಡೆಯಲಿರುವ ರಾಜ್ಯ ಚುನಾವಣೆಗೆ ಕೇವಲ ಆರು ತಿಂಗಳುಗಳು ಮಾತ್ರ ಬಾಕಿಯಿದೆ.
ಈ ಬೆಳವಣಿಗೆಯು ಈ ವರ್ಷಾಂತ್ಯದಲ್ಲಿ ನಡೆಯಲಿರುವ ಗಿರಿಜನ ಮಂಡಳಿಯ ಗ್ರಾಮ ಸಮಿತಿ ಚುನಾವಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ತ್ರಿಪ್ರಾ ಮೋಥಾ ರಚನೆಯಾದ ಕೇವಲ ಎರಡು ತಿಂಗಳ ನಂತರ ಕಳೆದ ವರ್ಷ ಸ್ವಾಯತ್ತ ಜಿಲ್ಲಾ ಕೌನ್ಸಿಲ್ ಚುನಾವಣೆಯಲ್ಲಿ ಜಯಗಳಿಸಿತ್ತು. ಈಗ, ಇದು 28 ಸ್ಥಾನಗಳ ಬುಡಕಟ್ಟು ಮಂಡಳಿಯಲ್ಲಿ 20 ಸದಸ್ಯರನ್ನು ಹೊಂದಿದೆ. ಬಿಜೆಪಿಯ ಸಂಖ್ಯೆ 8ಕ್ಕೆ ಕುಸಿದಿದೆ.
ಜನ ಸಾಮಾನ್ಯರ ಕಲ್ಯಾಣಕ್ಕಾಗಿ ಬಿಜೆಪಿ ಕೆಲಸ ಮಾಡದ ಕಾರಣ ಬಿಜೆಪಿ ತೊರೆದಿದ್ದೇನೆ ಎಂದು ಹಂಗ್ಶಾ ಕುಮಾರ್ ತ್ರಿಪುರಾ ಹೇಳಿದ್ದಾರೆ. ಕೇವಲ ಸಚಿವರು ಮತ್ತು ಶಾಸಕರು ಮಾತ್ರ ಸಂಪತ್ತು ಗಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ತ್ರಿಪುರ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗ ಬಿಜೆಪಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಿ ಕುತೂಹಲಕ್ಕೆ ಕಾರಣವಾಗಿತ್ತು. ತ್ರಿಪುರ ರಾಜ್ಯದ ಮುಖ್ಯಮಂತ್ರಿಯಾಗಿ ಮಾಣಿಕ್ ಸಹಾ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಮಾಣಿಕ್ ಸಹಾ ಕಳೆದ ತಿಂಗಳು ರಾಜ್ಯಸಭೆ ಸದಸ್ಯರಾಗಿ ಸಹ ಆಯ್ಕೆಯಾಗಿದ್ದರು. ಬಿಜೆಪಿ ಹೈಕಮಾಂಡ್ ಶನಿವಾರ ಮುಖ್ಯಮಂತ್ರಿಯಾಗಿದ್ದ ಬಿಪುಲ್ ಕುಮಾರ್ ದೇಬ್ ರಾಜೀನಾಮೆ ಪಡೆದಿತ್ತು. ಮಾಣಿಕ್ ಸಹ ಆಯ್ಕೆ ಮಾಡುವಾಗ ರಾಜ್ಯದ ನಾಯಕರ ಅಭಿಪ್ರಾಯ ಸಂಗ್ರಹ ಮಾಡಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಕೆಲವು ನಾಯಕರು ದೂರಿದ್ದರು.
ಈಗ ಬಿಜೆಪಿಯ ಪ್ರಮುಖ ನಾಯಕ ಹಂಗ್ಶಾ ಕುಮಾರ್ ತ್ರಿಪುರಾ 6,000ಕ್ಕೂ ಹೆಚ್ಚು ಬುಡಕಟ್ಟು ಬೆಂಬಲಿಗರೊಂದಿಗೆ ಬಿಜೆಪಿ ತೊರೆದಿರುವುದು ಕೂಡ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಸಂಕಷ್ಟಕ್ಕೆ ಈಡು ಮಾಡುವ ಸಾಧ್ಯತೆಯಿದೆ.
Recommended Video