ತ್ರಿವಳಿ ತಲಾಖ್ ನಲ್ಲಿ ರಾಜಕೀಯ ಬೇಡ- ಮುಸ್ಲಿಂ ಸಮುದಾಯಕ್ಕೆ ಮೋದಿ ಮನವಿ
"ವಿವಿಧತೆಯಲ್ಲಿ ಏಕತೆಯೇ ಭಾರತದ ವಿಶೇಷತೆ. ಮುಸ್ಲಿಂ ಸಮುದಾಯ ಯಾವುದೇ ಕಾರಣಕ್ಕೂ ತ್ರಿವಳಿ ತಲಾಖ್ ವಿಚಾರವನ್ನು ರಾಜಕೀಯಗೊಳಿಸಲು ಬಿಡಬಾರದು,” - ಪ್ರಧಾನಿ ನರೇಂದ್ರ ಮೋದಿ
ನವದೆಹಲಿ, ಮೇ 10: ತ್ರಿಪಲ್ ತಲಾಖ್ ವಿಷಯವನ್ನು ರಾಜಕೀಯಗೊಳಿಸಬೇಡಿ; ಹೀಗಂಥ ಮುಸ್ಲಿಂ ಸಮುದಾಯದ ಬಳಿ ಪ್ರಧಾನಿ ನರೇಂದ್ರ ಮೋದಿ ಕೇಳಿಕೊಂಡಿದ್ದಾರೆ. ಜಮಿಯತ್ ಉಲೇಮಾ ಇ ಹಿಂದ್ ನಾಯಕರ ಜತೆಗಿನ ಸಮಾಲೋಚನೆಯಲ್ಲಿ ಮೋದಿ ಈ ಅಭಿಪ್ರಾಯ ಹೊರಹಾಕಿದ್ದಾರೆ.
"ವಿವಿಧತೆಯಲ್ಲಿ ಏಕತೆಯೇ ಭಾರತದ ವಿಶೇಷತೆ. ಮುಸ್ಲಿಂ ಸಮುದಾಯ ಯಾವುದೇ ಕಾರಣಕ್ಕೂ ಈ ವಿಚಾರವನ್ನು ರಾಜಕೀಯಗೊಳಿಸಲು ಬಿಡಬಾರದು. ಈ ವಿಚಾರದ ಸುಧಾರಣೆಯಲ್ಲಿ ಮುಸ್ಲಿಂ ಸಮುದಾಯದ ನಿಯೋಗ ಜವಾಬ್ದಾರಿ ವಹಿಸಿಕೊಳ್ಳಬೇಕು," ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಹೇಳಿದರು. ಇನ್ನು ನಿಯೋಗದ ಸದಸ್ಯರು ತ್ರಿವಳಿ ತಲಾಖ್ ವಿಚಾರದಲ್ಲಿ ಪ್ರಧಾನ ಮಂತ್ರಿಯವರ ನಿಲುವುಗಳನ್ನು ಮೆಚ್ಚಿಕೊಂಡಿದ್ದಾರೆ ಎಂದು ಪಿಎಂಒ ಕಚೇರಿ ಹೇಳಿದೆ.
ಇನ್ನು ಈ ಕುರಿತು ಹೇಳಿಕೆ ನೀಡಿರುವು ನಿಯೋಗವು, ಪ್ರಧಾನಿ ಮೇಲೆ ದೇಶದ ಜನ ಭರವಸೆ ಇಟ್ಟಿದ್ದಾರೆ. ಅವರು ಜನಪರ ನಿಲುವು ತೆಗೆದುಕೊಳ್ಳುತ್ತಾರೆ ಎಂದು ಭಾವಿಸಿದ್ದೇವೆ ಎಂದು ಹೇಳಿದೆ.
ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ 'ನವ ಭಾರತ' ನಿರ್ಮಾಣದಲ್ಲಿ ಮುಸ್ಲಿಂ ಸಮುದಾಯ ಕೈಜೋಡಿಸಬೇಕು ಎಂದು ಕೋರಿಕೊಂಡರು.
ಇನ್ನು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ, ದೇಶದ ಭದ್ರತೆ ಹಾಗೂ ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ಸಂದರ್ಭದಲ್ಲೂ ಮುಸ್ಲಿಂ ಸಮುದಾಯ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಈ ಸಂದರ್ಭದಲ್ಲಿ ಮುಸ್ಲಿಮರ ನಿಯೋಗ ದೇಶದ ವಿರುದ್ಧ ಯಾವುದೇ ಸಂಚು ನಡೆಸಲು ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿಯವರಿಗೆ ಭರವಸೆ ನೀಡಿದೆ.