ಮಂಗಳಮುಖಿಯರಿಗೆ ಮೀಸಲಾತಿ ಕಲ್ಪಿಸಿ : ಸುಪ್ರೀಂಕೋರ್ಟ್
ನವದೆಹಲಿ, ಏ.15: ಮಂಗಳಮುಖಿಯರನ್ನು ಎಲ್ಲಾ ನಾಗರಿಕರಂತೆ ಪರಿಗಣಿಸಬೇಕು ಅವರಿಗೆ ಸಮಾಜದಲ್ಲಿ ಸೂಕ್ತಸ್ಥಾನಮಾನ ನೀಡಬೇಕು. ಮಂಗಳಮುಖಿಯರು ಅಥವಾ ಹಿಜಡಾ ಸಮುದಾಯವನ್ನು ಮೂರನೇ ಲಿಂಗದ ಗುಂಪಿಗೆ ಸೇರಿಸಬೇಕೆಂದು ಸುಪ್ರೀಂಕೋರ್ಟ್ ಮಂಗಳವಾರ ಆದೇಶ ನೀಡಿದೆ.
ವೋಟರ್ ಐಡಿ, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಇತರ ಲಿಂಗಿಗಳಿಗೆ ನೀಡುವ ಎಲ್ಲಾ ಸೌಲಭ್ಯಗಳು ಮಂಗಳಮುಖಿಯರಿಗೂ ಸಿಗಲಿದೆ. ಸುಪ್ರೀಂಕೋರ್ಟ್ ಮಹತ್ವದ ತೀರ್ಪಿನಲ್ಲಿ ಮಂಗಳಮುಖಿಯರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯದವರೆಂದು ಪರಿಗಣಿಸಿ ಅವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಲು ವ್ಯವಸ್ಥೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಸೂಚಿಸಲಾಗಿದೆ.

ಮಂಗಳಮುಖಿಯರಿಗೆ ಸಾಮಾನ್ಯರಿಗೆ ಸಿಗುವಂಥ ಸೌಲಭ್ಯಗಳೂ ಇವರಿಗೆ ಬರುತ್ತಿಲ್ಲ. ಆಸ್ಪತ್ರೆಯಲ್ಲಿ ಇವರನ್ನು ದಾಖಲಿಸಿಕೊಳ್ಳಲೂ ಹಿಂದೆ ಮುಂದೆ ನೋಡುವಂಥ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಈ ಸಮುದಾಯದವರಿಗೆ ಸಮಾನ ಹಕ್ಕು ನೀಡಬೇಕು. ಲೈಂಗಿಕ ಅಲ್ಪ ಸಂಖ್ಯಾತರಿಗೆ ವಿಶೇಷ ಸ್ಥಾನಮಾನ ಮತ್ತು ರಕ್ಷಣೆ ನೀಡುವ ಬಗ್ಗೆ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವು ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೆ.ಎಸ್. ರಾಧಾಕೃಷ್ಣ ಹಾಗೂ ನ್ಯಾ.ಎ.ಕೆ.ಸಿಕ್ರಿ ಅವರನ್ನೊಳಗೊಂಡ ಸುಪ್ರೀಂ ಪೀಠ ಐತಿಹಾಸಿಕ ತೀರ್ಪು ನೀಡಿದೆ. ಶಿಕ್ಷಣ ಮತ್ತು ಉದ್ಯೋಗಗಳ ಅರ್ಜಿಗಳಲ್ಲಿ ಸದ್ಯ ಪುರುಷ ಮತ್ತು ಮಹಿಳೆ ಹೀಗೆ ಎರಡೇ ಲಿಂಗಕ್ಕೆ ಅವಕಾಶವಿರುವುದರಿಂದ ಮಂಗಳಮುಖಿಯರಿಗೆ ಈ ಸೌಲಭ್ಯ ಕೈತಪ್ಪುತ್ತಿದೆ. ಹೀಗಾಗಿ, ಮೂರನೇ ಲಿಂಗದ ಆಯ್ಕೆಯನ್ನ ಸೇರಿಸಿ ಈ ಮೂಲಕ ಮಂಗಳಮುಖಿಯರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶ ಒದಗಿಸಲು ಅನುಕೂಲವಾಗುತ್ತದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಮಂಗಳಮುಖಿಯರ(Transgenders) ಹಲವು ವರ್ಷಗಳ ಕೂಗಿಗೆ ಈಗ ಉತ್ತರ ಸಿಕ್ಕಿದೆ. ಇದು ಐತಿಹಾಸಿಕ ತೀರ್ಪು ಎಂದು ಹಿರಿಯ ವಕೀಲ ಕೊಲಿನ್ ಗೊನ್ಸಾಲ್ವಿಸ್ ಅವರು ಹೇಳಿಕೆ ನೀಡಿದ್ದಾರೆ. ಜನಪ್ರಿಯಮಂಗಳಮುಖಿ ಲಕ್ಷ್ಮಿ ಅವರು ಈ ತೀರ್ಪನ್ನು ಸ್ವಾಗತಿಸಿದ್ದಾರೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಮಂಗಳಮುಖಿ ಕಲ್ಕಿ ಹಾಗೂ ಕರ್ನಾಟಕದ ಚಿತ್ರದುರ್ಗದಲ್ಲಿ ಭಾವನಾ ಎಂಬ ಮಂಗಳಮುಖಿ ಸ್ಪರ್ಧಿಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications