ದೇಶದ್ರೋಹಿ ಹೇಳಿಕೆ: ಅಶೋಕ್ ಗೆಹ್ಲೋಟ್ಗೆ ಸಚಿನ್ ಪೈಲಟ್ ಪ್ರತಿಕ್ರಿಯೆ
ಜೈಪುರ, ನವೆಂಬರ್ 24: ತಮ್ಮನ್ನು ದೇಶದ್ರೋಹಿ ಎಂದು ಕರೆದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ಗೆ ಕಾಂಗ್ರೆಸ್ನ ಶಾಸಕ ಸಚಿನ್ ಪೈಲಟ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ 'ದೇಶದ್ರೋಹಿ' ಹೇಳಿಕೆಗೆ ಕಾಂಗ್ರೆಸ್ನ ಶಾಸಕ ಸಚಿನ್ ಪೈಲಟ್ ಪ್ರತಿಕ್ರಿಯೆ ನೀಡಿದ್ದಾರೆ. "ಹೆಸರು ಮತ್ತು ಕೆಸರೆರಚಾಟದಿಂದ ಯಾವುದೇ ಪ್ರಯೋಜನವಿಲ್ಲ" ಎಂದು ಸಚಿನ್ ಪೈಲಟ್ ಅಶೋಕ್ ಗೆಹ್ಲೋಟ್ಗೆ ತಿರುಗೇಟು ಕೊಟ್ಟಿದ್ದಾರೆ.
ಇಂದು ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ, ಅಶೋಕ್ ಗೆಹ್ಲೋಟ್ ಪೈಲಟ್ ಅನ್ನು "ಗದ್ದರ್" (ದೇಶದ್ರೋಹಿ) ಎಂದು ಕರೆದರು. ಅವರನ್ನು ಎಂದಿಗೂ ರಾಜಸ್ಥಾನದ ಮುಖ್ಯಮಂತ್ರಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. 2020 ರಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದು ಸರ್ಕಾರವನ್ನು ಬೀಳಿಸಲು ಪೈಲಟ್ ಪ್ರಯತ್ನಿಸಿದ್ದರಿಂದ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಅವರು ಸಮರ್ಥರಲ್ಲ ಎಂದು ಗೆಹ್ಲೋಟ್ ಹೇಳಿದರು.
ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿನ್ ಪೈಲಟ್ "ಅಶೋಕ್ ಗೆಹ್ಲೋಟ್ ಜಿ ಅವರ ಹೇಳಿಕೆಗಳು ಇಂದು ನನ್ನ ವಿರುದ್ಧವಾಗಿವೆ. ಅವರು ನನ್ನನ್ನು ಗುರಿಯಾಗಿಸುವುದನ್ನು ನಾನು ನೋಡಿದ್ದೇನೆ. ಅಂತಹ ಅನುಭವಿ, ಹಿರಿಯ ನಾಯಕ ಇಷ್ಟೊಂದು ಕೆಳ ಮಟ್ಟದ ಶಬ್ದಗಳನ್ನು ಬಳಕೆ ಮಾಡಬಾರದು. ಅಂತಹ ಅನುಭವ ಹೊಂದಿರುವ ಯಾರೇ ಆಗಲಿ ಈ ಭಾಷೆಯನ್ನು ಬಳಸುವುದಿಲ್ಲ. ಇಂತಹ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡುವುದು ಸರಿಯಲ್ಲ" ಎಂದು ಸಚಿನ್ ಪೈಲಟ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

"ಅಶೋಕ್ ಗೆಹ್ಲೋಟ್ ಅವರು ನನ್ನ ವಿರುದ್ಧ ಬಹಳ ಸಮಯದಿಂದ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿದ್ದಾರೆ ಮತ್ತು ನಾವೆಲ್ಲರೂ ಒಟ್ಟಾಗಿ ಯಾತ್ರೆಯನ್ನು ಯಶಸ್ವಿಗೊಳಿಸಬೇಕಾಗಿದೆ. ಬಿಜೆಪಿಗೆ ಸವಾಲು ಹಾಕುವ ಏಕೈಕ ಪಕ್ಷ ಕಾಂಗ್ರೆಸ್. ನಾವು ಎಲ್ಲಾ ಆಡಳಿತದ ರಾಜ್ಯಗಳಲ್ಲಿ ಬಿಜೆಪಿಗೆ ಸವಾಲು ಹಾಕಬೇಕಾಗಿದೆ" ಎಂದು ಸಚಿನ್ ಪೈಲಟ್ ಹೇಳಿದ್ದಾರೆ.

"ನಾನು ಪಕ್ಷದ ಅಧ್ಯಕ್ಷನಾಗಿದ್ದಾಗ ರಾಜಸ್ಥಾನದಲ್ಲಿ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಲಾಯಿತು. ಆದರೂ, ಕಾಂಗ್ರೆಸ್ ಅಧ್ಯಕ್ಷರು ಗೆಹ್ಲೋಟ್ಗೆ ಸಿಎಂ ಆಗಲು ಮತ್ತೊಂದು ಅವಕಾಶವನ್ನು ನೀಡಿದರು. ಇಂದು, ರಾಜಸ್ಥಾನ ಚುನಾವಣೆಯಲ್ಲಿ ನಾವು ಮತ್ತೆ ಹೇಗೆ ಗೆಲ್ಲಬಹುದು ಎಂಬುದಕ್ಕೆ ಆದ್ಯತೆ ನೀಡಬೇಕು" ಎಂದು ಕಾಂಗ್ರೆಸ್ ಶಾಸಕ ಸಚಿನ್ ಹೇಳಿದರು.











Click it and Unblock the Notifications