ಟೂರಿಸಂ ಬೇಕಾ, ಟೆರರಿಸಂ ಬೇಕಾ?: ಕಾಶ್ಮೀರಿಗಳಿಗೆ ಮೋದಿ ಪ್ರಶ್ನೆ
ಜಮ್ಮು ಮತ್ತು ಕಾಶ್ಮೀರದ ಉಧಾಂಪುರದಲ್ಲಿ ಚನಾನಿ-ನಶ್ರಿ ಸುರಂಗ ಮಾರ್ಗವನ್ನು ಉದ್ಘಾಟಿಸಿದ ಮೋದಿ, ಪ್ರವಾಸೋದ್ಯಮ ಮತ್ತು ಭಯೋತ್ಪಾದನೆಯ ಮಧ್ಯೆ ಆಯ್ಕೆಯ ಪ್ರಶ್ನೆ ಎದುರಾದರೆ ಪ್ರವಾಸೋದ್ಯಮವನ್ನು ಆಯ್ದುಕೊಳ್ಳಿ ಎಂದರು.
ಉಧಾಂಪುರ(ಜಮ್ಮು-ಕಾಶ್ಮೀರ), ಏಪ್ರಿಲ್ 3: ಪ್ರವಾಸೋದ್ಯಮ ಮತ್ತು ಭಯೋತ್ಪಾದನೆಯ ಮಧ್ಯೆ ಆಯ್ಕೆಯ ಪ್ರಶ್ನೆ ಎದುರಾದರೆ ಪ್ರವಾಸೋದ್ಯಮವನ್ನು ಆಯ್ದುಕೊಳ್ಳಿ ಎಂದು ಕಾಶ್ಮೀರದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಉಧಾಂಪುರದಲ್ಲಿ ದೇಶದ ಅತ್ಯಂತ ಉದ್ದದ ಸುರಂಗ ಮಾರ್ಗ ಎಂಬ ಖ್ಯಾತಿ ಪಡೆದ 9.2 ಕಿ.ಮೀ. ಉದ್ದದ ಚನಾನಿ-ನಶ್ರಿ ಸುರಂಗ ಮಾರ್ಗವನ್ನು ಉದ್ಘಾಟಿಸಿದ ಮೋದಿ, ನಂತರ ಬಟ್ಟಲ್ ಬಲ್ಲಿಯನ್ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶೀಸಿ ಮಾತನಾಡಿದರು. ಸಭೆಯಲ್ಲಿ ಮೋದಿ ಆಡಿದ ಮಾತುಗಳ ಪ್ರಮುಖ ಅಂಶಗಳು ಇಲ್ಲಿವೆ.

ಕಲ್ಲನ್ನು ದೇಶ ಕಟ್ಟಲು ಬಳಸಿ
ಜಮ್ಮು -ಕಾಶ್ಮೀರದ ಯುವಕರಿಗೆ ಸರಿಯಾದ ಮಾರ್ಗದರ್ಶನ ಸಿಕ್ಕುತ್ತಿಲ್ಲ. ಇಲ್ಲಿ ಒಂದು ಕೈಯಲ್ಲಿ ಕಲ್ಲು ಹಿಡಿದು ಕಿಡಿಗೇಡಿಗಳಂತೆ ಮತ್ತೊಬ್ಬರ ಮೇಲೆ ಎಸೆಯುವ ಜನರಿದ್ದಾರೆ. ಹಾಗೆಯೇ ಅದೇ ಕಲ್ಲನ್ನು ಒಪ್ಪವಾಗಿ ಕೆತ್ತಿ ದೇಶದ ಮೂಲಸೌಕರ್ಯದ ಬೆಳವಣಿಗೆಗಾಗಿ ಆ ಕಲ್ಲನ್ನು ಬಳಸುವವರೂ ಇದ್ದಾರೆ. ದೇಶದ ಪ್ರಗತಿಗಾಗಿ ಕಲ್ಲನ್ನು ಒಪ್ಪವಾಗಿ ಕೆತ್ತ ಬಲ್ಲ ಯುವಕರನ್ನು ತಯಾರಿಸುವ ಕಾರ್ಯ ಕಾಶ್ಮೀರದಲ್ಲಿ ನಡೆಯಬೇಕಿದೆ ಎಂದವರು ಹೇಳಿದರು.[ದೇಶದ ಅತೀ ದೊಡ್ಡ ಸುರಂಗ ಮಾರ್ಗ ಉದ್ಘಾಟಿಸಿದ ಮೋದಿ]

40 ವರ್ಷದ ರಕ್ತದೋಕುಳಿಯಿಂದ ಲಾಭವಾಗಿದ್ದು ಯಾರಿಗೆ?
ಕಳೆದ 40 ವರ್ಷದಿಂದ ನಮ್ಮ ಕಾಶ್ಮೀರಿ ಕಣಿವೆ ರಕ್ತದ ಕೋಡಿಯಲ್ಲೇ ತೋಯುತ್ತಿದೆ. ಹಿಂದುಸ್ತಾನದ ಎಷ್ಟೋ ಅಮಾಯಕ ಯುವಕರ ಬಲಿಯಾಗಿದೆ. ಈ ರಕ್ತದಿಂದ, ಬಲಿಯಿಂದ ಯಾರಿಗಾಗದೂ ಉಪಯೋಗವಾಗಿದೆಯೇ? ಎಂದು 66 ವರ್ಷದ ಮೋದಿ ಭಾವುಕರಾಗಿ ನುಡಿದರು.['ಮೋದಿ, ಮೋದಿ ಎಂದು ಕೂಗಿದರೆ ಹೊಟ್ಟೆ ತುಂಬಲ್ಲ']

ಈ ಸುರಂಗ ಮಾರ್ಗ ಹೃದಯಗಳ ನಡುವಿನ ಕೊಂಡಿ
ಈ 40 ವರ್ಷದಲ್ಲಿ ರಕ್ತದ ಓಕುಳಿಯತ್ತ ನೀಡಿದ ಗಮನವನ್ನು ಕಾಶ್ಮೀರದ ಪ್ರವಾಸೋದ್ಯಮದ ಬೆಳವಣಿಗೆಯತ್ತ ನೀಡಿದ್ದರೆ ಕಾಶ್ಮೀರ ಇಷ್ಟರಲ್ಲೇ ವಿಶ್ವದ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಅಗ್ರಸ್ಥಾನದಲ್ಲಿರುತ್ತಿತ್ತು. ಈಗ ನಾವು ಉದ್ಘಾಟಿಸಿದ ಈ ಸುರಂಗ ಮಾರ್ಗ ಮೂಲ ಸೌಕರ್ಯಗಳ ನಡುವಿನ ಕೊಂಡಿಯಷ್ಟೇ ಅಲ್ಲ, ನಮ್ಮ ಹೃದಯಗಳ ನಡುವಿನ ಕೊಂಡಿ ಎಂದು ಪ್ರಧಾನಿ ಮಾರ್ಮಿಕವಾಗಿ ಹೇಳಿದರು.[ಮೋದಿ ನೀಡಿದ ಪರೋಕ್ಷ ಎಚ್ಚರಿಕೆಗೆ ಬಿಎಸ್ವೈ, ಈಶ್ವರಪ್ಪ ಎಚ್ಚೆತ್ತುಕೊಳ್ಳುವರೇ?]

ಇನ್ನಷ್ಟು ಯೋಜನೆ ಸದ್ಯದಲ್ಲೇ ಜಾರಿ
ಈ ಸುರಂಗ ಮಾರ್ಗ ೨ ತಾಸಿನ ಪ್ರಯಾಣವನ್ನು 10 ನಿಮಿಷಕ್ಕೆ ಕಡಿತಗೊಳಿಸಲಿದ್ದು, ಕಾಶ್ಮೀರದ ಮೂಲಸೌಕರ್ಯ ಬೆಳವಣಿಗೆಯ ದೃಷ್ಟಿಯಿಂದ ಇಂಥದೇ 9 ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಇದೇ ಸಂದರ್ಭದಲ್ಲಿ ಮೋದಿ ಹೇಳಿದರು.[ಭಾಗವತ್ ಬೆಂಬಲಿಸಿ ಮೋದಿಗೆ ಜಾಫರ್ ಷರೀಫ್ ಪತ್ರ]

ಮೋದಿಯವರಿಂದ ಮತ್ತಷ್ಟು ಸಹಕಾರದ ನಿರೀಕ್ಷೆ
ಸಭೆಯಲ್ಲಿ ಉಪಸ್ಥಿತರಿದ್ದ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮಾತನಾಡಿ, ಈ ಸುರಂಗಮಾರ್ಗ ಕೇವಲ ಭೌತಿಕ ದೂರವನ್ನಷ್ಟೇ ಕಡಿಮೆ ಮಾಡಿಲ್ಲ, ಬದಲಾಗಿ ದೇಶದ ಉಳಿದೆಲ್ಲ ರಾಜ್ಯದ ಜನರೊಂದಿಗೆ ಕಾಶ್ಮೀರಿ ಜನರ ಹೃದಯವನ್ನು ಹತ್ತಿರವಾಗಿಸಿದೆ ಎಂದಿದ್ದಾರೆ. ಮೋದಿಯವರು ಈಗಾಗಲೇ ಕಾಶ್ಮೀರದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಕಡೆಯಿಂದ ಹಲವಾರು ರೀತಿಯ ನೆರವು ನೀಡಿದ್ದು, ಮುಂದೆಯೂ ಇಂಥದೇ ಸಹಕಾರ ನಿರೀಕ್ಷಿಸುವುದಾಗಿ ಅವರು ಹೇಳಿದರು.[ಪ್ರಧಾನಿ ಮೋದಿಯಿಂದ ರೈತರಿಗೆ ಅಗೌರವ: ರಾಹುಲ್ ಗಾಂಧಿ]












Click it and Unblock the Notifications