ರಾಮಜನ್ಮಭೂಮಿ ನಕ್ಷೆ ಹರಿಯಲು CJI ಅನುಮತಿ ನೀಡಿದ್ದರು: ರಾಜೀವ್ ಧವನ್
ರಾಮಜನ್ಮಸ್ಥಾನಕ್ಕೆ ಸಂಬಂಧಿಸಿದ ನಕ್ಷೆಗಳನ್ನು ಹರಿಯಲು ಸ್ವತಃ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಅವರೇ ಅನುಮತಿ ನೀಡಿದ್ದರು ಎಂದು ಮುಸ್ಲಿಂ ಪರ ವಕೀಲ ರಾಜೀವ್ ಧವನ್ ಹೇಳಿದ್ದಾರೆ.
ಕುನಾಲ್ ಕಿಶೋರ್ ಎಂಬುವವರು ಬರೆದ 'ಅಯೋಧ್ಯೆ ರಿವಿಸಿಟೆಡ್' ಎಂಬ ಪುಸ್ತವನ್ನು ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ಕೋರ್ಟಿಗೆ ನೀಡಿದ್ದರು. ಈ ದಾಖಲೆಯನ್ನು ಸುನ್ನಿ ವಕ್ಫ್ ಬೋರ್ಡ್ ಪರವಾಗಿ ವಾದ ಮಂಡಿಸುತ್ತಿದ್ದ ಹಿರಿಯ ವಕೀಲ ರಾಜೀವ್ ಧನವ್ ಅವರು ಬಲವಾಗಿ ಖಂಡಿಸಿದ್ದರು. ಅವರಿಗೆ ನೀಡಲಾಗಿದ್ದ ಈ ಪುಸ್ತಕದ ಹಾಳೆಗಳನ್ನು ಹರಿಯುವ ಮೂಲಕ ಅವರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು.
ಆದರೆ ಅವುಗಳನ್ನು ಹರಿಯುವ ಮುನ್ನ ನಾನು ಮುಖ್ಯ ನ್ಯಾಯಮೂರ್ತಿಗಳ ಅನುಮತಿ ಕೇಳಿದ್ದೆ. ಅದಕ್ಕೆ ಅವರು ಅನುಮತಿ ನೀಡಿದ್ದರು ಎಂದು ರಾಜೀವ್ ಧವನ್ ಹೇಳಿದ್ದಾರೆ.

"ಕೋರ್ಟಿನಲ್ಲಿ ನಡೆದ ಘಟನೆ ಸುದ್ದಿ ಇದೀಗ ವೈರಲ್ ಆಗಿದೆ. ಆದರೆ ನಾನು ಹಿಂದುಮಹಾಸಭಾ ನೀಡಿದ ಈ ಪುಟಗಳನ್ನು ಎಸೆಯಲು ಮುಂದಾಗಿದ್ದೆ. ಆಗ ಅದನ್ನು ಹರಿಯುವುದಕ್ಕೆ ಅನುಮತಿ ನೀಡಿದ್ದೇ ಮುಖ್ಯನ್ಯಾಯಮೂರ್ತಿಗಳು. ಆದ್ದರಿಂದ ನಾನು ಕೋರ್ಟಿನ ಅನುಮತಿ ಮೂಲಕವೇ ಅವುಗಳನ್ನು ಹರಿದೆ" ಎಂದು ರಾಜೀವ್ ಧವನ್ ಹೇಳಿದ್ದಾರೆ.
ಗೊಗೊಯ್ ಸ್ಪಷ್ಟನೆ
ಈ ಕುರಿತು ಸ್ಪಷ್ಟನೆ ನೀಡಿದ ರಂಜನ್ ಗೊಗೊಯ್, "ಧವನ್ ಹೇಳಿದ ಮಾತನ್ನು ನಾವು ಒಪ್ಪುತ್ತೇವೆ. ಅವರು ಅದನ್ನು ಹರಿಯುವುದಾದರೆ ಹರಿಯಲಿ ಎಂದು ನಾವೇ ಹೇಳಿದ್ದೆವು. ಈ ಕುರಿತು ವಿಧಾದಿಸುತ್ತೇವೆ" ಎಂದಿದ್ದಾರೆ.
992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 6 ರಿಂದ ಪ್ರತಿದಿನದ ವಿಚಾರಣೆ ಆರಂಭವಾಗಿದ್ದು ಇಂದು ವಿಚಾರಣೆ ಅಂತ್ಯಗೊಳ್ಳಲಿದೆ.












Click it and Unblock the Notifications