ಹರಿದ್ವಾರ ಕುಂಭ ಮೇಳ: ಪ್ರಧಾನ ಸಾಧು ಕೊರೊನಾ ಸೋಂಕಿಗೆ ಬಲಿ
ಹರಿದ್ವಾರ, ಏಪ್ರಿಲ್ 15: ಹರಿದ್ವಾದರ ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಪ್ರಧಾನು ಸಾಧು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,17,000 ಪ್ರಕರಣಗಳು ಪತ್ತೆಯಾಗಿವೆ, ಕುಂಭ ಮೇಳ ಈಗ ಕೊರೊನಾ ಸೂಪರ್ ಸ್ಪ್ರೆಡರ್ ಆಗಿದೆ. 65 ವರ್ಷದ ಸಾಧು ಈ ವಾರದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ ಎಂಬುದು ತಿಳಿದುಬಂದಿದೆ.
ಕುಂಭಮೇಳದಲ್ಲಿ ಭಾಗವಹಿಸಿದ್ದ 30 ಸಾಧುಗಳಿಗೆ ಕೊರೊನಾ ಸೋಂಕು
ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಿದ್ದ 30 ಸಾಧುಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ನಗರದ ಮುಖ್ಯ ವೈದ್ಯಾಧಿಕಾರಿ ಶುಕ್ರವಾರ ಮಾಹಿತಿ ನೀಡಿದ್ದಾರೆ. "ಇದುವರೆಗೂ ಕುಂಭಮೇಳದಲ್ಲಿ ಭಾಗವಹಿಸಿದ್ದ ಮೂವತ್ತು ಸಾಧುಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಅಖಾಡಗಳಿಗೆ ವೈದ್ಯಕೀಯ ತಂಡಗಳನ್ನು ಕಳುಹಿಸಲಾಗಿದ್ದು, ನಿರಂತರವಾಗಿ ಸಾಧುಗಳಿಗೆ ಆರ್ಟಿಪಿಸಿಆರ್ ಪರೀಕ್ಷೆ ನಡೆಸಲಾಗುತ್ತಿದೆ. ಏಪ್ರಿಲ್ 17ರಿಂದ ಈ ಪರೀಕ್ಷಾ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಲಾಗುತ್ತದೆ" ಎಂದು ವೈದ್ಯಾಧಿಕಾರಿ ಡಾ. ಎಸ್.ಕೆ. ಝಾ ತಿಳಿಸಿದ್ದಾರೆ.
ಕುಂಭಮೇಳಕ್ಕೆ ಮಧ್ಯಪ್ರದೇಶದಿಂದ ಆಗಮಿಸಿದ್ದ ಮಹಾ ನಿರ್ವಾಣಿ ಅಖಾಡದ ಮುಖ್ಯಸ್ಥ ಕಪಿಲ್ ದೇವ್ ಶುಕ್ರವಾರ ಡೆಹ್ರಾಡೂನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕಳೆದ ಐದು ದಿನಗಳಿಂದ ಹರಿದ್ವಾರದಲ್ಲಿ 2167 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ.