ಟೂಲ್ಕಿಟ್ ಪ್ರಕರಣದಲ್ಲಿ ಕಟ್ಟುಕಥೆ ಹೆಣೆದ ದೆಹಲಿ ಪೊಲೀಸರು: ಶಂತನು ಆರೋಪ
ಮುಂಬೈ, ಫೆಬ್ರವರಿ 16: ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಸ್ವೀಡನ್ ಮೂಲದ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಹಂಚಿಕೊಂಡ ಟೂಲ್ಕಿಟ್ನಲ್ಲಿನ ವಿವರಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದೆಹಲಿ ನ್ಯಾಯಾಲಯವು ಹೊರಡಿಸಿರುವ ಜಾಮೀನುರಹಿತ ವಾರಂಟ್ ವಿರುದ್ಧ ಪರಿಸರ ಕಾರ್ಯಕರ್ತ ಶಂತನು ಮುಲುಕ್ ಅವರು ಬಾಂಬೆ ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನಿಗೆ ಮನವಿ ಸಲ್ಲಿಸಿದ್ದಾರೆ.
ಬಾಂಬೆ ಹೈಕೋರ್ಟ್ನ ಔರಂಗಾಬಾದ್ ಪೀಠ ಈ ಅರ್ಜಿಯನ್ನು ಮಂಗಳವಾರ ವಿಚಾರಣೆಗೆ ತೆಗೆದುಕೊಳ್ಳಲಿದೆ. ವಕೀಲ ಸತೇಜ್ ಜಧಾ ಅವರ ಮೂಲಕ ಶಂತನು ಅರ್ಜಿ ಸಲ್ಲಿಸಿದ್ದಾರೆ. ಶಂತನು ಅವರು ನಾಲ್ಕು ವಾರಗಳ ನಿರೀಕ್ಷಣಾ ಜಾಮೀನಿಗೆ ಮನವಿ ಮಾಡಿದ್ದು, ಬಂಧನಪೂರ್ವ ಜಾಮೀನಿಗೆ ಅರ್ಜಿ ಸಲ್ಲಿಸಲು ಸಂಬಂಧಿತ ದೆಹಲಿ ನ್ಯಾಯಾಲಯಕ್ಕೆ ತೆರಳಲು ಅವಕಾಶಕ್ಕಾಗಿ ಕೋರಿದ್ದಾರೆ.
ತಮ್ಮ ವಿರುದ್ಧ ಮಾಡಿರುವ ಆರೋಪಗಳು ತಮ್ಮ ಜೀವನ ಮತ್ತು ಕುಟುಂಬಕ್ಕೆ ವಿನಾಶಕಾರಿಯಾಗಿದೆ. ತಮ್ಮನ್ನು ದೇಶ ವಿರೋಧಿ ಎಂದು ಸುಳ್ಳು ಆರೋಪಗಳನ್ನು ಹೊರಿಸಲು ಮುಂದಾಗಿದ್ದಾರೆ ಎಂದು ಶಂತನು ಆರೋಪಿಸಿದ್ದಾರೆ.

ಪೋಷಕರ ಮೇಲೆ ಒತ್ತಡ ಆರೋಪ
ತಮ್ಮ ಮೂಲ ಪಟ್ಟಣ ಬೀಡ್ನಲ್ಲಿ ದೆಹಲಿ ಪೊಲೀಸರು ಕಳೆದ ಮೂರು ದಿನಗಳಿಂದ ಬೀಡುಬಿಟ್ಟಿದ್ದು, ಕಾನೂನಿನ ಸೂಕ್ತ ಪ್ರಕ್ರಿಯೆಗಳನ್ನು ಪಾಲಿಸದೆಯೇ ಕೆಲವು ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಪೊಲೀಸ್ ತಂಡವು ವಯಸ್ಸಾದ ತಮ್ಮ ತಂದೆ ತಾಯಿಗಳ ಮೇಲೆ ಬಲಪ್ರಯೋಗದ ಮೂಲಕ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಎಕ್ಸ್ಆರ್ ಇಂಡಿಯಾ ಸಂಸ್ಥೆ
ಶಂತನು ಪರಿಸರ ಸಂಬಂಧಿ ಚಟುವಟಿಕೆಗಳನ್ನು ನಡಸುವ ಎಕ್ಸ್ಆರ್ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ರೈತರ ಪ್ರತಿಭಟನೆಯು ಸೂಕ್ತ ರೀತಿ ನಡೆಯಲು ಮತ್ತು ಶಾಂತಿಯುತವಾಗಿ ಸಾಗುವಂತೆ ಎಕ್ಸ್ಆರ್ ಮೀಡಿಯಾ ಮಾಹಿತಿ ರವಾನಿಸುವ ವೇದಿಕೆಯೊಂದನ್ನು ಸೃಷ್ಟಿಸಿತ್ತು ಎಂದು ಅವರು ತಿಳಿಸಿದ್ದಾರೆ.

ಶಂತನು ಮನೆ ಮೇಲೆ ದಾಳಿ
ಬೀಡ್ನಲ್ಲಿರುವ ಶಂತನು ಮನೆಯ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿದ್ದು, ಎರಡು ದಿನಗಳಿಂದ ಅವರನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ. ತಮ್ಮ ಬ್ಯಾಂಕ್ ದಾಖಲೆಗಳನ್ನು ಕೂಡ ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ. ಶಂತನು ಕುಟುಂಬದವರು ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಕಳಂಕ ತರುವ ಪ್ರಯತ್ನ
ರೈತರ ಹೋರಾಟ ಮತ್ತು ಪರಿಸರ ರಕ್ಷಣೆ ವಿಚಾರದಲ್ಲಿ ಶಂತನು ಬಹಳ ಭಾವುಕರಾಗಿದ್ದರು. ಈಗ ಆತ ಎಲ್ಲಿದ್ದಾನೆಯೋ ತಿಳಿದಿಲ್ಲ. ಆತನ ಬಗ್ಗೆ ನಮಗೆ ಕಳವಳ ಉಂಟಾಗಿದೆ. ವಿನಾಕಾರಣ ಕುಟುಂಬಕ್ಕೆ ಕೆಟ್ಟಹೆಸರು ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಎರಡು ಪ್ರತ್ಯೇಕ ತಂಡ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹುಡುಕುತ್ತಿರುವ ಮತ್ತೊಬ್ಬ ಆರೋಪಿ, ವಕೀಲೆ ನಿಕಿತಾ ಜೇಕಬ್ ಅವರ ಮನೆಯಲ್ಲಿ ನಡೆಸಿದ ಪರಿಶೀಲನೆ ವೇಳೆ ದೊರೆತ ಮಾಹಿತಿಗಳ ಆಧಾರದಲ್ಲಿ ಮಹಾರಾಷ್ಟ್ರದ ಬೀಡ್ ಜಿಲ್ಲೆ ಮತ್ತು ಬೆಂಗಳೂರಿನ ದಿಶಾ ರವಿ ಪ್ರಕರಣದ ತನಿಖೆಗಾಗಿ ಎರಡು ಪ್ರತ್ಯೇಕ ತಂಡಗಳನ್ನು ಕಳುಹಿಸಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications