ಟಿಪ್ಪು ಜಯಂತಿ: ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಾಗಿ ರಾಜ್ಯ ಮನವಿ
ಬೆಂಗಳೂರು, ನವೆಂಬರ್, 7: ಟಿಪ್ಪು ಜಯಂತಿ ಆಚರಣೆಗೆ ಸೂಕ್ತ ಭದ್ರತೆ ಒದಗಿಸುವುದಕ್ಕಾಗಿ 1,500 ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಬೇಕೆಂದು ರಾಜ್ಯ ಸರ್ಕಾರ ಕೇಂದ್ರ ಗೃಹಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ಸಚಿವಾಲಯದ ಅಧಿಕಾರಿಗಳು ಒನ್ ಇಂಡಿಯಾಗೆ ತಿಳಿಸಿದ್ದಾರೆ.
ನವೆಂಬರ್ 10ರಂದು ರಾಜ್ಯದಾದ್ಯಂತ ಟಿಪ್ಪು ಜಯಂತಿ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆದರೆ ಸರ್ಕಾರದ ನಿರ್ಧಾರವನ್ನು ಖಂಡಿಸಿ ಹಲವು ವಿರೋಧಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತರಕ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲು ರಾಜ್ಯ ಸರ್ಕಾರ ಕೇಂದ್ರದ ಪೊಲೀಸ್ ತುಕಡಿ ಕಳುಹಿಸುವಂತೆ ಮನವಿ ಮಾಡಿದೆ.
ಟಿಪ್ಪು ಜಯಂತಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಸೂಕ್ಷ್ಮ ಪ್ರದೇಶಗಳಾದ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಈಗಾಗಲೇ ಪೊಲೀಸ್ ಇಲಾಖೆ ಎಚ್ಚರ ವಹಿಸಿ ಕ್ರಮಕೈಗೊಂಡಿದೆ.
ಮುಖ್ಯವಾಗಿ ಕೊಡಗಿನ ಲಾಡ್ಜ್ ಗಳು, ಹೋಟೆಲ್ ಗಳು, ಹೋಂ ಸ್ಟೇಗಳ ಮೇಲೆ ಹೆಚ್ಚು ನಿಗಾ ವಹಿಸಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಷ್ಟೇ ಅಲ್ಲದೆ ಕೊಡಗಿನ ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.
ಟಿಪ್ಪು ಜಯಂತಿಗೆ ವಿರುದ್ಧವಾಗಿ ಕೊಡಗಿನಲ್ಲಿ ಕರಾಳ ದಿನ ಆಚರಿಸಲು ಈಗಾಗಲೇ ಹಲವು ಸಂಘಟನೆಗಳು ತೀರ್ಮಾನಿಸಿದ್ದು, ನವೆಂಬರ್ 10ರಂದು ಕೊಡಗು ಬಂದ್ ಗೆ ಕರೆ ನೀಡಿವೆ.