ರಸ್ತೆ ಅಪಘಾತ : ಬೆಂಗಳೂರಿನ ಮೂವರು ಸಜೀವ ದಹನ

ಚಿತ್ತೂರು ಜಿಲ್ಲೆಯ ಭೂತಾಲಕಂಡ ಗ್ರಾಮದ ಬಳಿ ಬುಧವಾರ ಬೆಳಗ್ಗೆ 4.45ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಒಬ್ಬರನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸಹ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಮೃತಪಟ್ಟವರನ್ನು ಬೆಂಗಳೂರಿನ ಸಂಪಗಿರಾಮನಗರದ ನಿವಾಸಿಗಳಾದ ಸತ್ಯನಾರಾಯಣ (52), ಮಹಾಲಕ್ಷ್ಮೀ (40), ದೀಪಮಾಲಾ (32) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಪ್ರಶಾಂತ್ ಎಂಬುವವರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂದೇ ಕುಟುಂಬದ ಇವರು ತಿರುಪತಿಗೆ ತೆರಳಿದ್ದರು. ಅಲ್ಲಿಂದ ಮರಳುವಾಗ ಈ ದುರ್ಘಟನೆ ಸಂಭವಿಸಿದೆ. ಮೊದಲು ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತಕ್ಷಣ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕಾರಿನಲ್ಲಿದ್ದವರು ಗಾಯಗೊಂಡಿದ್ದರಿಂದ ಹೊರಬರಲಾಗಿದೆ ಸಜೀವವಾಗಿ ದಹನವಾಗಿದ್ದಾರೆ.
ರಸ್ತೆಯಲ್ಲಿನ ಇತರ ವಾಹನ ಸವಾರರು ಬಂದು ನೋಡುವಾಗ ಮೂವರು ಸಜೀವವಾಗಿ ದಹನವಾಗಿದ್ದರು. ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಕಾರಿನ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಚಿತ್ತೂರು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications