ಎಎಪಿಯಿಂದ ಬೆದರಿಕೆ ಕರೆ ಆರೋಪ: ಜೈಲಿನಿಂದ 8ನೇ ಪತ್ರ ಬರೆದ ಸುಕೇಶ್
ದೆಹಲಿ ನವೆಂಬರ್ 29: ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಹೊಸ ಪತ್ರವೊಂದನ್ನು ಬರೆದಿದ್ದಾರೆ. ಎಎಪಿ ಮತ್ತು ಅದರ ನಾಯಕರ ವಿರುದ್ಧ ಜೈಲಿನಿಂದ ಸುಕೇಶ್ ಬಿಡುಗಡೆ ಮಾಡಿರುವ ಎಂಟನೇ ಪತ್ರ ಇದಾಗಿದೆ. ಇದರಲ್ಲಿ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್ ಅವರ ಆಪ್ತರಿಂದ ಬೆದರಿಕೆ ಕರೆಗಳು ಬಂದಿವೆ ಎಂದು ಸುಕೇಶ್ ಆರೋಪಿಸಿದ್ದಾರೆ.
ಮನೀಶ್ ಸಿಸೋಡಿಯಾಗೆ ಲಿಂಕ್ ಮಾಡಲಾದ ಅಧಿಕೃತ ಸಂಖ್ಯೆಗಳಿಂದ ಕರೆಗಳನ್ನು ಸ್ವೀಕರಿಸಲಾಗಿದೆ ಎಂದು ಆರೋಪಿ ಹೇಳಿಕೊಂಡಿದ್ದಾನೆ. ತಮ್ಮ ಕುಟುಂಬದ ದೂರವಾಣಿ ಸಂಖ್ಯೆಗಳನ್ನು ಎಎಪಿ ಸಚಿವರು ಜೈಲು ದಾಖಲೆಗಳಿಂದ ಕಾನೂನುಬಾಹಿರವಾಗಿ ಪಡೆದಿದ್ದಾರೆ ಎಂದು ಅವರು ದೂರಿದ್ದಾರೆ.
ಜೈಲಿನಿಂದ 8ನೇ ಪತ್ರ ಬರೆದ ಸುಕೇಶ್
ಅವರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸುಕೇಶ್ ಆರೋಪಿಸಿದ್ದಾರೆ. ಜೈಲು ಆಡಳಿತ ವಿಭಾಗವು ಸಂಪೂರ್ಣವಾಗಿ ಅವರ ಅಧೀನದಲ್ಲಿದೆ. ಇದು ನನ್ನ ವೈಯಕ್ತಿಕ ಸುರಕ್ಷತೆ ಮತ್ತು ನನ್ನ ಕುಟುಂಬದ ಸುರಕ್ಷತೆಗೆ ಸಂಪೂರ್ಣ ಭದ್ರತೆಯಾಗಿದೆ" ಎಂದು ಸುಕೇಶ್ ಹೇಳಿದ್ದಾರೆ.
ಮಾತ್ರವಲ್ಲದೆ ಸತ್ಯೇಂದ್ರ ಜೈನ್ ತನ್ನ ಮೊಬೈಲ್ ಅನ್ನು ಜೈಲಿನಲ್ಲಿ ಹೇಗೆ ಬಳಸುತ್ತಿದ್ದಾರೆ ಎಂದು ಸುಕೇಶ್ ಅವರು ಪತ್ರದಲ್ಲಿ ತಿಳಿಸಿದ್ದಾರೆ. ಸತ್ಯೇಂದ್ರ ಜೈನ್ ಹಾಗೂ ಜೈಲು ಅಧಿಕಾರಿಗಳ ವಿರುದ್ಧ ಇನ್ನು ಮುಂದೆ ಯಾವುದೇ ರಹಸ್ಯಗಳನ್ನು ಬಹಿರಂಗಪಡಿಸದಂತೆ ಜೈಲು ಅಧಿಕಾರಿಗಳು ತನಗೆ ಬೆದರಿಕೆ ಹಾಕಿದ್ದಾರೆ. ಜೊತೆಗೆ ತಮ್ಮ ಷರತ್ತುಗಳಿಗೆ ಒಪ್ಪಿದರೆ ಸತ್ಯೇಂದ್ರ ಜೈನ್ ಅವರನ್ನು ಭೇಟಿಯಾಗುವಂತೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದರು ಎಂದು ಸುಕೇಶ್ ಹೇಳಿಕೊಂಡಿದ್ದಾರೆ.
ಎಎಪಿ ಸಚಿವರ ಆಪ್ತ ಜೈ ಕಿಶನ್ನಿಂದ ಬೆದರಿಕೆ ಕರೆ
ಸತ್ಯೇಂದ್ರ ಜೈನ್ ಅವರ ಸಹಾಯಕರನ್ನು ಉಲ್ಲೇಖಿಸಿ, ಸುಕೇಶ್ ಕರೆ ಮಾಡಿದವರು ಯುಎಇ ಮೂಲದ ಜೈ ಕಿಶನ್ ಎಂಬ ವ್ಯಕ್ತಿ ಎಂದು ಹೇಳಿದ್ದಾರೆ. ಜೈಯ್ ಕಿಶನ್ ನನ್ನ ಕುಟುಂಬಕ್ಕೆ ಬೆದರಿಕೆ ಹಾಕಿ, ಆಪ್ ಸಚಿವರ ವಿರುದ್ಧದ ತನಿಖೆಗೆ ಸುಕೇಶ್ ಸಹಕರಿಸಬೇಕು, ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಸತ್ಯೇಂದ್ರ ಜೈನ್ "ರಾಜಿಗೆ ಸಿದ್ಧ" ಎಂಬ ಸಂದೇಶವನ್ನು ರವಾನಿಸಲು ಹೇಳಿದರು. ಡಿಸೆಂಬರ್ 8ರ ವರೆಗೆ ಯಾವುದೇ ಆರೋಪ ಮಾಡದಂತೆ ಸುಮ್ಮನಿರಲು ಹೇಳಲಾಗಿದೆ ಎಂದು ಸುಕೇಶ್ ಅವರು ಹೇಳಿದ್ದಾರೆ.
ಕರೆ ಮಾಡಿದವರು ಕೇಜ್ರಿವಾಲ್ ಮತ್ತು ಜೈನ್ ಅವರನ್ನು "ಸಾಹೆಬ್" ಎಂದು ಉಲ್ಲೇಖಿಸಿದ್ದಾರೆ ಎಂದು ಸುಕೇಶ್ ಹೇಳಿದ್ದಾರೆ.
ಸುಕೇಶ್ ಆರೋಪ ತಳ್ಳಿ ಹಾಕಿದ ಎಎಪಿ
ಎಎಪಿ ಸುಕೇಶ್ ಅವರ ಹೇಳಿಕೆಗಳನ್ನು ನಿರಾಕರಿಸಿದೆ. ಇದರ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸಿದೆ. ಇದಕ್ಕೂ ಮುನ್ನ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸುಕೇಶ್ ಅವರ ಆರೋಪವನ್ನು ತಳ್ಳಿಹಾಕಿದರು. ಇದು ಗುಜರಾತ್ನ ಮೋರ್ಬಿಯಲ್ಲಿ ಸೇತುವೆ ಕುಸಿತದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಎಂದು ಹೇಳಿದರು.
ಸುಕೇಶ್ ಚಂದ್ರಶೇಖರ್ ಅವರು ಉನ್ನತ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳಿಂದ ಹಣ ವಸೂಲಿ ಮಾಡಿದ ಆರೋಪದ ಮೇಲೆ ದೆಹಲಿಯ ಮಂಡೋಲಿ ಜೈಲಿನಲ್ಲಿದ್ದಾರೆ. ಇವರನ್ನು ಮೊದಲು ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. ಆದರೆ ನಂತರ ಅವರ ಪದೇ ಪದೇ ವಿನಂತಿಸಿದ ನಂತರ ಸ್ಥಳಾಂತರಿಸಲಾಯಿತು. ತಿಹಾರ್ ಜೈಲಿನಿಂದ ತನಗೆ ಪ್ರಾಣ ಬೆದರಿಕೆ ಇದೆ ಎಂದು ಹೇಳಿಕೊಂಡಿದ್ದ ಸುಕೇಶ್ ಸದ್ಯ ಮಂಡೋಲಿ ಜೈಲಿನಲ್ಲಿದ್ದಾರೆ.
ಬಿಜೆಪಿಯ ಸ್ಟಾರ್ ಪ್ರಚಾರಕ ಸುಕೇಶ್ ಎಂದ ಎಎಪಿ
ಗುಜರಾತ್ ಮತ್ತು ದೆಹಲಿ ಮುನಿಸಿಪಲ್ ಚುನಾವಣೆಯ ಫಲಿತಾಂಶದ ಬಗ್ಗೆ ಬಿಜೆಪಿ ತುಂಬಾ ಚಿಂತಿತವಾಗಿದೆ. ದರ ಹತಾಶೆ ಎಷ್ಟು ಸ್ಪಷ್ಟವಾಗಿದೆ ಎಂದರೆ ಸುಕೇಶ್ ಚಂದ್ರಶೇಖರ್ ಅವರಂತಹ ಮೋಸಗಾರ, ಆರೋಪಿ ಈಗ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸತ್ಯೇಂದ್ರ ಜೈನ್ ಅವರನ್ನು ಈ ವರ್ಷದ ಮೇ ತಿಂಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ಹವಾಲಾ ವ್ಯವಹಾರಕ್ಕೆ ಸಂಬಂಧಿಸಿದ ಮತ್ತೊಂದು ಕ್ರಿಮಿನಲ್ ಪ್ರಕರಣದಲ್ಲಿ ಜೈನ್ ಅವರನ್ನು ಮೇ 30 ರಂದು ಇಡಿ ಬಂಧಿಸಿತ್ತು.