'ದಿ ಕಾಶ್ಮೀರ ಫೈಲ್ಸ್': ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ನೋಟಿಸ್ ಕಳುಸಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ
ನವದೆಹಲಿ, ಮೇ.09: ಪಶ್ಚಿಮ ಬಂಗಾಳದಲ್ಲಿ ಸೋಮವಾರ ದಿ ಕೇರಳ ಸ್ಟೋರಿ ಬ್ಯಾನ್ ಮಾಡಿರುವ ಸಿಎಂ ಮಮತಾ ಬ್ಯಾನರ್ಜಿ, 'ದಿ ಕಾಶ್ಮೀರ್ ಫೈಲ್ಸ್' ಕುರಿತು ಹೇಳಿಕೆ ನೀಡಿದ್ದರು. ಈ ಬಗ್ಗೆ ಕಿಡಿಕಾರಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮಮತಾ ಬ್ಯಾನರ್ಜಿ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಈ ಕುರಿರು ಎಎನ್ಐ ಜೊತೆಗೆ ಮಾತನಾಡಿರುವ ನಿರ್ದೇಶಕ 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ "ನಿನ್ನೆ ಮಮತಾ ಬ್ಯಾನರ್ಜಿ ಅವರು 'ದಿ ಕಾಶ್ಮೀರ್ ಫೈಲ್ಸ್' ಮತ್ತು ಬಂಗಾಳದ ನರಮೇಧವನ್ನು ಆಧರಿಸಿದ ನನ್ನ ಮುಂಬರುವ ಚಲನಚಿತ್ರವು ಪ್ರಪೋಗಾಂಡ ಎಂದು ಹೇಳಿದ್ದಾರೆ. ನಾನು ಮಾಡುವ ಸಿನಿಮಾಗಳಿಗೆ ಬಿಜೆಪಿ ಹಣ ನೀಡುತ್ತದೆ ಎಂದು ಆರೋಪಿಸಿದ್ದಾರೆ" ಎಂದು ಉಲ್ಲೇಖಿಸಿದ್ದಾರೆ.

ಮಮತಾ ಬ್ಯಾನರ್ಜಿ ಮಾಡಿರುವ ಆರೋಪಗಳ ವಿರುದ್ಧ ನಾವು ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದೇವೆ ಎಂದು ವಿವೇಕ್ ಅಗ್ನಿಹೋತ್ರಿ ಮಂಗಳವಾರ ತಿಳಿಸಿದ್ದಾರೆ.
"ಕಳೆದ ಒಂದು ವರ್ಷದಿಂದ ನಾನು ಹೇಗೆ ಬದುಕುತ್ತಿದ್ದೇನೆ ಎಂದು ನಾನು ನಿಮಗೆ ಮಾತ್ರ ಹೇಳಬಲ್ಲೆ. ಕೆಲವು ರಾಜಕಾರಣಿಗಳು, ಪತ್ರಕರ್ತರು ಮತ್ತು ಫ್ಯಾಕ್ಟ್ ಚೆಕ್ ಮಾಡುವವರು ನನ್ನ ಜೀವನವನ್ನು ಕಷ್ಟಕರವಾಗಿಸಿದ್ದಾರೆ. ಅವರು ನನ್ನನ್ನು ಸುಮ್ಮನಿರಿಸಲು ಪ್ರಯತ್ನಿಸುತ್ತಿದ್ದಾರೆ. ಕೆಲವು ಕೋಮುವಾದಿ ಫ್ಯಾಕ್ಟ್ ಚೆಕ್ ಮಾಡುವವರು ನನ್ನ ಮಗಳ ಫೋಟೋವನ್ನು ಆಕೆಯ ಇನ್ಸ್ಟಾಗ್ರಾಮ್ ಪ್ರೊಫೈಲ್ನಿಂದ ಎತ್ತಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಅಸಹ್ಯದ ಕೃತ್ಯ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2022 ರಲ್ಲಿ ಬಿಡುಗಡೆಯಾದ 'ದಿ ಕಾಶ್ಮೀರ್ ಫೈಲ್ಸ್' 1990 ರಲ್ಲಿ ಕಾಶ್ಮೀರಿ ಕಣಿವೆಯಿಂದ ಕಾಶ್ಮೀರಿ ಪಂಡಿತರ ಮಹಾ ವಲಸೆಯನ್ನು ವಿವರಿಸುತ್ತದೆ. ಚಿತ್ರ ಬಿಡುಗಡೆಯಾದ ನಂತರ ವಿವಾದವನ್ನು ಹುಟ್ಟುಹಾಕಿತು. ಚಿತ್ರವನ್ನು ಟೀಕಿಸುವವರು ಇದು ಒಂದು ಕೋಮುವಾದಿ ಅಜೆಂಡಾ ಎಂದು ಆರೋಪಿಸಿದ್ದರು.

ಇತ್ತೀಚೆಗಷ್ಟೇ ಬಿಡುಗಡೆಯಾದ 'ದಿ ಕೇರಳ ಸ್ಟೋರಿ'ಯನ್ನು ಪಶ್ಚಿಮ ಬಂಗಾಳದಲ್ಲಿ ನಿಷೇಧಿಸುವ ನಿರ್ಧಾರವನ್ನು ಪ್ರಕಟಿಸುವ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ, " ದಿ ಕಾಶ್ಮೀರ ಫೈಲ್ಸ್ ಎಂದರೇನು? ಇದು ಒಂದು ಸಮುದಾಯವನ್ನು ಅವಮಾನಿಸುವುದು. ದಿ ಕೇರಳ ಸ್ಟೋರಿ ಏನು?... ಇದು ಮತ್ತೊಂದು ಪ್ರಪೋಗಾಂಡದ ಕಥೆ. ಬಿಜೆಪಿಯವರು ಚಿತ್ರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ " ಎಂದು ಆಕ್ರೋಶ ಹೊರಹಾಕಿದ್ದರು.
ಸುದೀಪ್ತೋ ಸೇನ್ ನಿರ್ದೇಶನದ ಚಲನಚಿತ್ರ ದಿ ಕೇರಳ ಸ್ಟೋರಿ ನಿಷೇಧಿಸುವ ಬಂಗಾಳ ಸರ್ಕಾರದ ನಿರ್ಧಾರವು ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಪ್ರಮುಖ ವಿರೋಧ ಪಕ್ಷವಾದ ಭಾರತೀಯ ಜನತಾ ಪಕ್ಷದ ನಡುವೆ ಭಾರೀ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.












Click it and Unblock the Notifications