'ಪುರೋಹಿತರ ಶಾಪದಿಂದ 2 ಬಾರಿ ಉತ್ತರಾಖಂಡ ಸಿಎಂ ಬದಲಾವಣೆ' ಎಂದ ದೇವಾಲಯ ಸಮಿತಿ
ಡೆಹ್ರಾಡೂನ್, ಜು. 07: ದೇವಸ್ತಾನಂ ಮಂಡಳಿಯನ್ನು ವಿಸರ್ಜಿಸಲು ವಿಫಲವಾದ ಕಾರಣ ಪುರೋಹಿತರ "ಶಾಪ" ದಿಂದಾಗಿ ಬಿಜೆಪಿ ಉತ್ತರಾಖಂಡದಲ್ಲಿ ತನ್ನ ಮುಖ್ಯಮಂತ್ರಿಯನ್ನು ಎರಡು ಬಾರಿ ಬದಲಾಯಿಸ ಬೇಕಾಯಿತು ಎಂದು ಗಂಗೋತ್ರಿ ಮಂದಿರ ಸಮಿತಿ ಮಂಗಳವಾರ ತಿಳಿಸಿದೆ.
''ಮಂಡಳಿಯನ್ನು ವಿಸರ್ಜಿಸದಿದ್ದರೆ ಮುಂದಿನ ವರ್ಷ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ,'' ಎಂದು ದೇವಾಲಯದ ಜಂಟಿ ಕಾರ್ಯದರ್ಶಿ ರಾಜೇಶ್ ಸೆಮ್ವಾಲ್ ಹೇಳಿದ್ದಾರೆ.
ತ್ರಿವೇಂದ್ರ ಸಿಂಗ್ ರಾವತ್ ಮುಖ್ಯಮಂತ್ರಿ ಅವಧಿಯಲ್ಲಿ ರಚಿಸಲಾದ ದೇವಸ್ತಾನಂ ಮಂಡಳಿಗೆ ಉತ್ತರಾಖಂಡದ 51 ದೇವಾಲಯಗಳ ವ್ಯವಹಾರಗಳನ್ನು ನಡೆಸಲು ಆದೇಶಿಸಲಾಗಿದೆ.

ಆದರೆ ಈ ದೇವಸ್ತಾನಂ ಮಂಡಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳ ಪುರೋಹಿತರು, ತಮ್ಮ ಹಕ್ಕುಗಳ ಮೇಲೆ ಅತಿಕ್ರಮಣ ಮಾಡಲಾಗುತ್ತಿದೆ. ಈ ಹಿನ್ನೆಲೆ ಈ ಮಂಡಳಿಯನ್ನು ವಿಸರ್ಜಿಸಬೇಕು ಎಂದು ಒತ್ತಾಯಿಸಿ ಹಲವಾರು ವಾರಗಳ ಕಾಲ ಉಪವಾಸ ನಡೆಸಿದ್ದರು.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ದೇವಾಲಯದ ಜಂಟಿ ಕಾರ್ಯದರ್ಶಿ ರಾಜೇಶ್ ಸೆಮ್ವಾಲ್, "ಅರ್ಚಕರ ಶಾಪದಿಂದಾಗಿ ಬಿಜೆಪಿ ಮೂರೂವರೆ ವರ್ಷಗಳಲ್ಲಿ ಮೂರು ಮುಖ್ಯಮಂತ್ರಿಗಳನ್ನು ನೇಮಕ ಮಾಡಬೇಕಾಯಿತು. ಪಕ್ಷವು ಅನುಭವದಿಂದ ಕಲಿಯದಿದ್ದರೆ ಮತ್ತು ಅದರ ಹೊಸ ಮುಖ್ಯಮಂತ್ರಿ ಶೀಘ್ರದಲ್ಲೇ ದೇವಸ್ತಾನಂ ಮಂಡಳಿಯನ್ನು ವಿಸರ್ಜಿಸದಿದ್ದರೆ, ಅರ್ಚಕರ ಶಾಪದಿಂದಾಗಿ 2022 ರಲ್ಲಿ ಬಿಜೆಪಿ ಆಡಳಿತ ನಡೆಸಲು ಅವಕಾಶ ಸಿಗುವುದಿಲ್ಲ," ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ, ಮಾಜಿ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್, ಕುಂಭಮೇಳದ ಸಂದರ್ಭದಲ್ಲಿ ದೇವಾಲಯಗಳನ್ನು ಮಂಡಳಿಯ ನಿಯಂತ್ರಣದಿಂದ ತೆಗೆದುಹಾಕಲಾಗುವುದು ಮತ್ತು ಫಲಕವನ್ನು ರಚಿಸುವ ನಿರ್ಧಾರವನ್ನು ಮರುಪರಿಶೀಲಿಸಲಾಗುವುದು ಎಂದು ಘೋಷಿಸಿದ್ದರು. ಆದರೆ ರಾವತ್ ತನ್ನ ಭರವಸೆ ಈಡೇರಿಸುವ ಮುನ್ನವೇ ಸಿಎಂ ಸ್ಥಾನ ಕಳೆದುಕೊಂಡಿದ್ದು, ಪುಷ್ಕರ್ ಸಿಂಗ್ ಧಾಮಿ ಪ್ರಸ್ತುತ ಮುಖ್ಯಮಂತ್ರಿಯಾಗಿದ್ದಾರೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications