ಮೋದಿ ತೆಲಂಗಾಣದಲ್ಲಿ, ಸಿಎಂ ಕೆಸಿಆರ್ ದೇವೇಗೌಡ್ರ ಮನೆಯಲ್ಲಿ
ಪ್ರಧಾನಮಂತ್ರಿ ನರೇಂದ್ರ ಮೋದಿ, ಒಂದು ದಿನದ ತಮಿಳುನಾಡು ಮತ್ತು ತೆಲಂಗಾಣ ಅಧಿಕೃತ ಪ್ರವಾಸದಲ್ಲಿದ್ದಾರೆ. ಇನ್ನೊಂದು ಕಡೆ, ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಬೆಂಗಳೂರಿನಲ್ಲಿದ್ದಾರೆ.
ಮೋದಿಯವರು ಹೈದರಾಬಾದಿಗೆ ಬರುವ ದಿನವೇ ಉದ್ದೇಶಪೂರ್ವಕವಾಗಿಯೇ ಕೆಸಿಆರ್ ಬೆಂಗಳೂರಿಗೆ ಬಂದರೋ ಎನ್ನುವುದು ತಿಳಿದು ಬಂದಿಲ್ಲ. ಪ್ರಧಾನಿಯವರು ಬಂದಾಗ ಆಯಾಯ ರಾಜ್ಯದ ಮುಖ್ಯಮಂತ್ರಿ ಅವರನ್ನು ಸ್ವಾಗತಿಸುವುದು ಶಿಷ್ಟಾಚಾರದ ಭಾಗವಾಗಿದೆ.
ಮೋದಿಯವರು ತಮಿಳುನಾಡು ಪ್ರವಾಸದಲ್ಲಿದ್ದಾಗ, ಎಂದಿನಂತೆ ಮೋದಿ ಗೋಬ್ಯಾಕ್ ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿತ್ತು. ಬೆಂಗಳೂರು - ಚೆನ್ನೈ ಎಕ್ಸ್ ಪ್ರೆಸ್ ವೇ, ಚೆನ್ನೈ ಎಗ್ಮೋರ್, ರಾಮೇಶ್ವರಂ, ಮಧುರೈ, ಕಾಟ್ಪಾಡಿ ಮತ್ತು ಕನ್ಯಾಕುಮಾರಿ ರೈಲ್ವೇ ನಿಲ್ದಾಣದ ಪುನರಾಭಿವೃದ್ಧಿ ಕೆಲಸದ ಶಂಕು ಸ್ಥಾಪನೆಗಾಗಿ ಮೋದಿ, ತಮಿಳುನಾಡು ಪ್ರವಾಸದಲ್ಲಿದ್ದರು.
ಮೋದಿ ಭೇಟಿ ವೇಳೆ ಎರಡನೇ ಬಾರಿ ಗೈರಾಗಲಿರುವ ಕೆಸಿಆರ್
ಇನ್ನು, ಹೈದರಾಬಾದ್ ನಲ್ಲಿ ಇಂಡಿಯನ್ ಸ್ಕೂಲ್ ಆಫ್ ಬ್ಯೂಸಿನೆಸ್, ಇಪ್ಪತ್ತು ವರ್ಷ ಪೂರೈಸಿದ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿದ್ದರು. ಇತ್ತ, ಮುಖ್ಯಮಂತ್ರಿ ಚಂದ್ರಶೇಖರ ರಾವ್, ಬೆಂಗಳೂರಿನಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ್ರನ್ನು ಭೇಟಿಯಾಗಲು ಬಂದಿದ್ದರು.
ಕುಮಾರಸ್ವಾಮಿಯವರ ಜೊತೆಗೆ ಮಾತುಕತೆ ನಡೆಸಲು ಕೆಸಿಆರ್, ಗೌಡ್ರ ನಿವಾಸದಲ್ಲಿ
ಬಿಜೆಪಿ ಮತ್ತು ಕಾಂಗ್ರೆಸ್ ಹೊರತಾದ ಮೈತ್ರಿಕೂಟವನ್ನು ರಚಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೆಲಂಗಾಣದ ಸಿಎಂ ಚಂದ್ರಶೇಖರ ರಾವ್ ವಿವಿಧ ರಾಜ್ಯದ ಮುಖಂಡರನ್ನು ಭೇಟಿಯಾಗುತ್ತಿರುವುದು ಗೊತ್ತಿರುವ ವಿಚಾರ. ಅದರ ಭಾಗವಾಗಿ, ಇಂದು ಜಾತ್ಯಾತೀಯ ಜನತಾದಳದ ಮುಖಂಡರಾದ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಜೊತೆಗೆ ಮಾತುಕತೆ ನಡೆಸಲು ಕೆಸಿಆರ್, ಗೌಡ್ರ ನಿವಾಸಕ್ಕೆ ಆಗಮಿಸಿದ್ದರು. ಆ ವೇಳೆ, ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡಾ ಹಾಜರಿದ್ದರು.
ಮೋದಿಯವರ ತೆಲಂಗಾಣ ಭೇಟಿಯ ವೇಳೆ ಸಿಎಂ ಕೆಸಿಆರ್ ಗೈರು
ಮೋದಿಯವರ ತೆಲಂಗಾಣ ಭೇಟಿಯ ವೇಳೆ ಸಿಎಂ ಕೆಸಿಆರ್ ಗೈರಾಗುತ್ತಿರುವುದು ಇದೇನು ಮೊದಲನೇ ಬಾರಿಯಲ್ಲ. ಈ ಹಿಂದೆಯೂ ಅನಾರೋಗ್ಯದ ಕಾರಣಕ್ಕಾಗಿ ಮೋದಿಯವರನ್ನು ಭೇಟಿಯಾಗಿರಲಿಲ್ಲ. ಮೋದಿ ಮತ್ತು ಕೆಸಿಆರ್ ನಡುವಿನ ಸಂಬಂಧ ಹಿಂದಿನಂತಿಲ್ಲ. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ಬಿಜೆಪಿ ಅನಿರೀಕ್ಷಿತ ಸಾಧನೆ ಮಾಡಿದ ನಂತರಂತೂ ಇಬ್ಬರ ನಡುವಿನ ಅಂತರ ಇನ್ನಷ್ಟು ಜಾಸ್ತಿಯಾಗಿದೆ. ಹಾಗಾಗಿ, ಇಂದಿನ ಭೇಟಿಯ ವೇಳೆಯೂ ಮೋದಿ-ಕೆಸಿಆರ್ ಮುಖಾಮುಖಿಯಾಗಿಲ್ಲ.
ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಈಗಾಗಲೇ ಕೆಸಿಆರ್ ಭೇಟಿ
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಈಗಾಗಲೇ ಕೆಸಿಆರ್ ಭೇಟಿಯಾಗಿ ತೃತೀಯ ರಂಗದ ರಚನೆಯ ಬಗ್ಗೆ ಮಾತುಕತೆ ನಡೆಸಿದ್ದರು. ಮೋದಿಯವರು ಹೈದರಾಬಾದ್ ಬರುವ ಕೆಲವು ಗಂಟೆಯ ಮುನ್ನ ಕೆಸಿಆರ್ ಬೆಂಗಳೂರಿಗೆ ವಿಮಾನ ಹತ್ತಿದ್ದರು. "ಪ್ರಧಾನಿಯವರಿಗೆ ಮುಖ ತೋರಿಸಲಾಗದೇ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಪಲಾಯನ ಮಾಡುತ್ತಿದ್ದಾರೆ"ಎಂದು ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಡಾ. ಕೆ.ಲಕ್ಷ್ಮಣ್ ವ್ಯಂಗ್ಯವಾಡಿದ್ದಾರೆ.
ಬೆಳ್ಳಿತಟ್ಟೆಯಲ್ಲಿ ಎಲ್ಲರೂ ಊಟವನ್ನೂ ಮಾಡಿದ್ದಾರೆ
ಮಾಜಿ ಪ್ರಧಾನಿ ಗೌಡ್ರ ಮನೆಗೆ ಆಗಮಿಸಿದ ಚಂದ್ರಶೇಖರ ರಾವ್ ಅವರಿಗೆ ಉತ್ತಮ ಸ್ವಾಗತವೇ ಸಿಕ್ಕಿದೆ. ಮನೆಯ ಗೇಟಿನಲ್ಲಿ ಕುಮಾರಸ್ವಾಮಿ, ನಿಖಿಲ್ ಕಾದು ಅವರನ್ನು ಮನೆಯೊಳಗೆ ಕರೆದುಕೊಂಡು ಹೋಗಿದ್ದಾರೆ. ಇನ್ನು ಬೆಳ್ಳಿತಟ್ಟೆಯಲ್ಲಿ ಎಲ್ಲರೂ ಊಟವನ್ನೂ ಮಾಡಿದ್ದಾರೆ. ವಿವಿಧ ನಾಯಕರನ್ನು ಭೇಟಿಯಾಗಲು ಕೆಸಿಆರ್ ದೇಶ ಸುತ್ತುತ್ತಿರುವುದು ಹೌದಾದರೂ, ಮೋದಿ ತಮ್ಮ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಂತಹ ಸಂದರ್ಭದಲ್ಲೇ ಕೆಸಿಆರ್, ಗೌಡ್ರನ್ನು ಭೇಟಿಯಾಗಲು ಬಂದಿದ್ದು ಉದ್ದೇಶಪೂರ್ವಕ ಎನ್ನುವುದು ಬಿಜೆಪಿಯ ಆಪಾದನೆ.