ತೆಲಂಗಾಣ: ಮೋದಿಯನ್ನು ಸ್ವಾಗತಿಸದ ಕೆಸಿಆರ್ ವರ್ತನೆ ಖಂಡಿಸಿದ ಬಿಜೆಪಿ
ಹೈದರಾಬಾದ್ ನವೆಂಬರ್ 12: ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆ ಇಂದು ಪ್ರಧಾನಿ ಮೋದಿ ತೆಲಂಗಾಣಕ್ಕೆ ಆಗಮಿಸಿದ್ದಾರೆ. ಆದರೆ ಹೈದರಾಬಾದ್ನ ಬೇಗಂಪೇಟೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರಮಾಡಿಕೊಳ್ಳಲು ಕೆಸಿಆರ್ ಹೋಗದೆ ಶಿಷ್ಟಾಚಾರವನ್ನು ಮುರಿದಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರತಿ ಬಾರಿ ಪ್ರಧಾನಿ ಮೋದಿ ತೆಲಂಗಾಣಕ್ಕೆ ಆಗಮಿಸಿದಾಗ ಪ್ರೋಟೋಕಾಲ್ ಪ್ರಕಾರ ಅವರನ್ನು ಸ್ವೀಕರಿಸಲು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಪ್ರಧಾನಿ ಮೋದಿಯನ್ನು ಬರಮಾಡಿಕೊಳ್ಳಬೇಕು. ಆದರೆ ಅವರು ಬಾರದೆ ಶಿಷ್ಟಾಚಾರವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ತೆಲಂಗಾಣಕ್ಕೆ ಬರಬೇಡಿ ಎಂದು ಹೈದರಾಬಾದ್ ಮತ್ತು ರಾಮಗುಂಡಂನ ಆಯಕಟ್ಟಿನ ಸ್ಥಳಗಳಲ್ಲಿ ಪೋಸ್ಟರ್ಗಳು, ಬ್ಯಾನರ್ಗಳು ಮತ್ತು ಪ್ಲೆಕಾರ್ಡ್ಗಳನ್ನು ಹಾಕಲಾಗಿದ್ದು ಈ ಬಗ್ಗೆ ಪ್ರಧಾನಿ ಮೋದಿಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಹೀಗಾಗಿ ಕೆಸಿಆರ್ ವರ್ತನೆಯನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ.
"ಇದರಲ್ಲಿ ಅವರೇಕೆ ರಾಜಕೀಯವನ್ನು ತರಬೇಕು? ಮೋದಿ ಆಗಮಿಸುವುದು ತೆಲಂಗಾಣಕ್ಕೆ ಹೆಮ್ಮೆ ಮತ್ತು ಪ್ರತಿಷ್ಠೆಯ ವಿಷಯವಾಗಿದೆ. ಪ್ರಧಾನಿ ಅವರು ರಾಜ್ಯಕ್ಕೆ ಪ್ರಯೋಜನವಾಗುವ ಹಲವಾರು ಯೋಜನೆಗಳನ್ನು ಪ್ರಾರಂಭಿಸುತ್ತಿದ್ದಾರೆ. ಅದನ್ನು ರಾಷ್ಟ್ರಕ್ಕೆ ಅರ್ಪಿಸುತ್ತಿದ್ದಾರೆ" ಎಂದು ಸಿಕಂದರಾಬಾದ್ ಸಂಸದರಾಗಿರುವ ಕೇಂದ್ರ ಸಚಿವ ಕಿಶನ್ ರೆಡ್ಡಿ ಹೇಳಿದರು.
ಪ್ರಧಾನಿ ಮೋದಿ ತೆಲಂಗಾಣಕ್ಕೆ ಬರಬೇಡಿ ಎಂದು ಭಿತ್ತಿಪತ್ರಗಳನ್ನು ಅಂಟಿಸುವ ಪ್ರಯತ್ನವನ್ನು ಬಿಜೆಪಿ ನಾಯಕರು ಖಂಡಿಸಿದರು. "ಅವರು ಭಾರತದ ಪ್ರಧಾನಿ ಅಲ್ಲವೇ? ತೆಲಂಗಾಣ ಭಾರತದ ಭಾಗವಲ್ಲವೇ?" ಎಂದು ಬಿಜೆಪಿ ಮುಖಂಡರು ಪ್ರಶ್ನೆ ಮಾಡಿದ್ದಾರೆ. "ಕೆಸಿಆರ್ ಮಗುವಿನಂತೆ ವರ್ತಿಸುತ್ತಿದ್ದಾರೆ. ಅವರ ಪಕ್ಷವಾದ ತೆಲಂಗಾಣ ರಾಷ್ಟ್ರ ಸಮಿತಿಯು ದಕ್ಷಿಣ ರಾಜ್ಯದಲ್ಲಿ ಬಿಜೆಪಿ ಜನಪ್ರಿಯತೆ ಗಳಿಸುತ್ತಿರುವ ಬಗ್ಗೆ ಅಸೂಯೆ ಪಟ್ಟಿದ್ದಾರೆ" ಎಂದು ಬಿಜೆಪಿ ಮುಖಂಡ ರಾಮಚಂದರ್ ರಾವ್ ಸುದ್ದಿಗಾರರಿಗೆ ತಿಳಿಸಿದ್ದಾರೆ. "ಬಿಜೆಪಿಯ ರಾಜಕೀಯ ವಿರೋಧಿಗಳಾದ ಎಂಕೆ ಸ್ಟಾಲಿನ್ ಮತ್ತು ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಪ್ರಧಾನಿಯನ್ನು ಸ್ವಾಗತಿಸಲು ಸಾಧ್ಯವಿರುವಾಗ, ಕೆಸಿಆರ್ ಏಕೆ ಮಾಡಬಾರದು?" ಎಂದು ಅವರು ಕೇಳಿದರು.
ನಿನ್ನೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ರಾಜ್ಯಪಾಲ ಆರ್ಎನ್ ರವಿ ಅವರೊಂದಿಗೆ ದಿಂಡುಗಲ್ನಲ್ಲಿ ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಂಡರು. ಸಂಜೆ ನಂತರ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವೈಜಾಗ್ನಲ್ಲಿ ಪ್ರಧಾನಿ ಮೋದಿಯನ್ನು ಸ್ವಾಗತಿಸಿದರು.
ಕಳೆದ ಕೆಲವು ತಿಂಗಳುಗಳಲ್ಲಿ ಆಡಳಿತಾರೂಢ ಟಿಆರ್ಎಸ್ ಮತ್ತು ಬಿಜೆಪಿ ಹಲವು ವಿಷಯಗಳ ಬಗ್ಗೆ ಕಿತ್ತಾಡುತ್ತಿರುವಾಗಲೇ ಪ್ರಧಾನಿ ಮೋದಿಯವರು ತೆಲಂಗಾಣ ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ, ಕೇಂದ್ರದಲ್ಲಿರುವ ಬಿಜೆಪಿ ತನ್ನ ಶಾಸಕರಿಗೆ ಲಂಚ ನೀಡುವ ಅಥವಾ ಬೆದರಿಕೆ ಹಾಕುವ ಸಂಚು ರೂಪಿಸುವ ಮೂಲಕ ತನ್ನ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಕೆಸಿಆರ್ ಆರೋಪಿಸಿದ್ದಾರೆ. ಇದನ್ನು ಬಿಜೆಪಿ ನಿರಾಕರಿಸಿದೆ.
"ಬಂಧಿತರಾಗಿರುವ ಆ ಮೂವರೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ. ಕೆಲವು ಶಾಸಕರನ್ನು ಖರೀದಿಸಲು ನಾವು ಏಕೆ ನೂರಾರು ಕೋಟಿ ನೀಡುತ್ತೇವೆ? ಇದು ಕೆಸಿಆರ್ ನಾಟಕ" ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.