ಪಾಠ ಹೇಳಿದವರು ನಂತರ ರಾಜಕಾರಣಕ್ಕೆ ಬಂದರು
ಬೆಂಗಳೂರು, ಸೆ.5 : ಇಂದು ಶಿಕ್ಷಕರ ದಿನಾಚರಣೆ, ಒಂದಕ್ಷರ ಕಲಿಸಿದರೂ ಗುರು ಎನ್ನುತ್ತದೆ ಸುಭಾಷಿತ. ಅಂತೆಯೇ ನಮ್ಮ ಹಲವಾರು ರಾಜಕೀಯ ನಾಯಕರು ಹಿಂದೆ ಶಿಕ್ಷಕರಾಗಿದ್ದರು ಎಂಬ ವಿಷಯ ನಿಮಗೆ ಗೊತ್ತೆ?. ಮೊದಲು ವಿದ್ಯಾರ್ಥಿಗಳಿಗೆ ತಿದ್ದಿ ಬುದ್ಧಿ ಹೇಳುತ್ತಿದ್ದ ಇವರು ನಂತರ ದೇಶವನ್ನು ಆಳಿದ್ದಾರೆ. ಜನಪ್ರತಿನಿಧಿಗಳಾಗಿ ಆರಿಸಿ ಬಂದಿದ್ದಾರೆ.
ಹಿಂದೆ ಶಿಕ್ಷಕರಾಗಿದ್ದ ಅನೇಕರು ನಮ್ಮ ದೇಶದಲ್ಲಿ ರಾಜಕೀಯವಾಗಿ ಉನ್ನತ ಹುದ್ದೆ ಪಡೆದಿದ್ದಾರೆ. ರಾಷ್ಟ್ರಪತಿಯಾಗಿದ್ದಾರೆ, ಪ್ರಧಾನಿಯಾಗಿದ್ದಾರೆ, ಸಂಸದರು, ಶಾಸಕರು ಆಗಿ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಗುರು ಪರಬ್ರಹ್ಮನ ರೂಪ ಎಂದು ವೇದ ಹೇಳುತ್ತದೆ. ಹೀಗೆ ಗುರುವಿನ ಸ್ಥಾನದಲ್ಲಿದ್ದರು ನಂತರ ನಮ್ಮನ್ನು ಆಳಿದ್ದಾರೆ. [ಪ್ರಧಾನಿ ನರೇಂದ್ರ ಮೋದಿ ಭಾಷಣ ನೇರ ಪ್ರಸಾರ]
ಪ್ರಮುಖವಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ವಿಜ್ಞಾನಿ ಅಬ್ದುಲ್ ಕಲಾಂ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಉತ್ತರ ಪ್ರದೇಶದ ಮಾಜಿ ಸಿಎಂ ಕು.ಮಾಯಾವತಿ ಮೊದಲು ಶಿಕ್ಷಕರಾಗಿದ್ದರು. ಕರ್ನಾಟಕದ ಮಟ್ಟಿಗೆ ಹೇಳುವುದಾದದರೆ ಬಸವರಾಜ ಹೊರಟ್ಟಿ, ಜೆಡಿಎಸ್ ಶಾಸಕ ವೈ.ಎಸ್.ವಿ.ದತ್ತಾ ಮುಂತಾದವರು ಶಿಕ್ಷಕರಾಗಿದ್ದರು ನಂತರ ರಾಜಕಾರಣಕ್ಕೆ ಕಾಲಿಟ್ಟವರು. ಶಿಕ್ಷಕ ದಿನಾಚರಣೆ ಸಂದರ್ಭದಲ್ಲಿ ಶಿಕ್ಷಕರಾಗಿದ್ದ ಪ್ರಮುಖರ ಬಗ್ಗೆ ತಿಳಿಯೋಣ
ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಜಕಾರಣಕ್ಕೆ ಬರುವ ಮೊದಲು ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಪಶ್ಚಿಮ ಬಂಗಾಳದ ಜಿಲ್ಲೆಯೊಂದರಲ್ಲಿ ಅವರು ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದರು. ನಂತರ ಯುಪಿಎ ಸರ್ಕಾರದ ಅವಧಿಯಲ್ಲಿ ಹಣಕಾಸು ಸಚಿವರಾಗಿ ನಂತರ ರಾಷ್ಟ್ರಪತಿ ಹುದ್ದೆಗೇರಿದ್ದಾರೆ.
ಮಾಜಿ ಪ್ರಧಾನಿ ಮನಹೋಹನ್ ಸಿಂಗ್
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರಾಜಕಾರಣಕ್ಕೆ ಬರುವ ಮೊದಲು ಶಿಕ್ಷಕರಾಗಿದ್ದರು. ಅರ್ಧಶಾಸ್ತ್ರದ ಉಪನ್ಯಾಸಕರಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದರು. ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅವರು ಅರ್ಥಶಾಸ್ತ್ರ ಪಾಠ ಮಾಡಿದ್ದಾರೆ. ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿಯೂ ಸಿಂಗ್ ಉಪನ್ಯಾಸ ನೀಡಿದ್ದಾರೆ.
ಮಕ್ಕಳ ಮೆಚ್ಚಿನ ಶಿಕ್ಷಕ ಅಬ್ದುಲ್ ಕಲಾಂ
ಮಕ್ಕಳ ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ, ತಾವು ಭೇಟಿ ನೀಡಿದ ಸ್ಥಳಗಳಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸುತ್ತಾರೆ. 2001ರಲ್ಲಿ ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ಕಲಾಂ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ.
ಶಾಲೆಯಲ್ಲಿ ಪಾಠ ಹೇಳಿದ್ರು ಮಾಯಾವತಿ
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕು.ಮಾಯಾವತಿ ಬಿಎಸ್ಪಿ ಸೇರುವುದಕ್ಕೂ ಮೊದಲು ದೆಹಲಿಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ನಂತರ ರಾಜಕಾರಣಕ್ಕೆ ಧುಮುಕಿದ ಅವರು ಮುಖ್ಯಮಂತ್ರಿಯಾದರು.
ರಾಜಕಾರಣದ ಮೇಷ್ಟ್ರು ವೈ.ಎಸ್.ವಿ.ದತ್ತಾ
ಕಡೂರು ಶಾಸಕ ಮತ್ತು ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತಾ ಯಾವುದೇ ಸರ್ಕಾರಿ ಅಥವ ಖಾಸಗಿ ಶಾಲೆಗಳಲ್ಲಿ ಪಾಠ ಮಾಡಿಲ್ಲ. ಆದರೂ ಅವರು ಶಿಕ್ಷರು. ಟ್ಯೂಟೋರಿಯಲ್ವೊಂದನ್ನು ಆರಂಭಿಸಿದ್ದ ದತ್ತಾ ಅವರು 1969ರಿಂದ 1999ರವರೆಗೆ ಅಲ್ಲಿ ಮಕ್ಕಳಿಗೆ ಪಾಠ ಹೇಳಿಕೊಟ್ಟಿದ್ದಾರೆ. ದತ್ತಾ ಅವರ ಮಾತಿನಲ್ಲೇ ಹೇಳಬೇಕೆಂದರೆ ಅನ್ನಕ್ಕಾಗಿ ಅವರು ಪಾಠ ಹೇಳಲು ಆರಂಭಿಸಿದರು.
ಬಸವರಾಜ ಹೊರಟ್ಟಿ
ವಿಧಾನ ಪರಿಷತ್ ಸದಸ್ಯ ಮತ್ತು ಜೆಡಿಎಸ್ ಪಕ್ಷದ ಹಿರಿಯ ನಾಯಕ ಬಸವರಾಜ ಹೊರಟ್ಟಿ ಹಿಂದೆ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ನಾನು ಮೇಷ್ಟ್ರಾಗಿದ್ದ ಕಾಲದಲ್ಲಿ ಮಕ್ಕಳು ಕೈ ಮುಗಿದು ಬರುತ್ತಿದ್ದರು ಇಂದಿನ ಪರಿಸ್ಥಿತಿ ಬೇರೆಯಾಗಿದೆ ಎಂದು ಅವರು ನೆನಪು ಮಾಡಿಕೊಳ್ಳುತ್ತಾರೆ. ಅಂದಹಾಗೆ ಹೊರಟ್ಟಿ ಅವರು 5 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್
ನರೇಂದ್ರ ಮೋದಿ ಅವರ ನಂತರ ಗುಜರಾತ್ ಮುಖ್ಯಮಂತ್ರಿ ಹುದ್ದೆಗೇರಿರುವ ಆನಂದಿ ಬೆನ್ ಸಹ ಹಿಂದೆ ಶಿಕ್ಷಕರಾಗಿದ್ದರು. ತಮ್ಮ ಅವಿಭಕ್ತ ಕುಟುಂಬದಲ್ಲಿಯೂ ಹಲವಾರು ಮಕ್ಕಳಿಗೆ ಪಾಠ ಹೇಳಿಕೊಡುವ ಹೊಣೆ ಹೊತ್ತುಕೊಂಡಿದ್ದ ಅವರು, 1970ರಲ್ಲಿ ವಿಜ್ಞಾನ ಮತ್ತು ಗಣಿತ ಪಾಠ ಮಾಡುತ್ತಿದ್ದರು. ನಂತರ ಅದೇ ಶಾಲೆಯ ಮುಖ್ಯ ಶಿಕ್ಷಕರು ಆದರು.
ನಮ್ಮ ಸಿಎಂ ಸಿದ್ದರಾಮಯ್ಯ
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಹಿಂದೆ ಕೆಲವು ಕಾಲ ಉಪನ್ಯಾಸಕರಾಗಿದ್ದರು. ಮೈಸೂರಿನಲ್ಲಿ ಅವರು, ವಕೀಲ ವೃತ್ತಿ ಉಪನ್ಯಾಸಕರಾಗಿದ್ದರು, ನಂತರ ರಾಜಕೀಯಕ್ಕೆ ಬಂದ ಅವರು ಮುಖ್ಯಮಂತ್ರಿ ಹುದ್ದೆಗೇರಿದ್ದಾರೆ.