ಖರ್ಗೆಯನ್ನು ಎರಡು ಹೆಜ್ಜೆ ನಡೆಸಿದ ಇಬ್ಬರ ಅಮಾನತು!

ಮಂಗಳವಾರ ಉತ್ತರ ಪ್ರದೇಶದ ಲಕ್ನೋ ರೈಲ್ವೆ ನಿಲ್ದಾಣದಕ್ಕೆ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಆಗಮಿಸಿದ್ದರು. ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿದ್ದ ಕಾಮಗಾರಿ ವೀಕ್ಷಣೆಗಾಗಿ ಅವರು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಮರಳುವಾಗ ಮಾನ್ಯ ರೈಲ್ವೆ ಸಚಿವರಿಗೆ ಎರಡು ಹೆಜ್ಜೆ ನಡೆಯಬೇಕಾಯಿತು ಅದು ಬರೀ ನೆಲದ ಮೇಲೆ.
ಇದೇ ಘಟನೆಯನ್ನು ಮುಂದಿಟ್ಟುಕೊಂಡು ನಿಲ್ದಾಣದ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಕೇಂದ್ರ ರೈಲ್ವೆ ಸಚಿವರಿಗೆ ಅಗೌರವ ತೋರಿದ್ದಾರೆ. ತಮ್ಮ ಕಾರ್ಯ ನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಘಟನೆ ನಡೆದ 14 ಗಂಟೆಯೊಳಗೆ ಅಮಾನತು ಆದೇಶವನ್ನು ಅವರ ಕೈಗೆ ನೀಡಲಾಗಿದೆ. ಸದ್ಯ ಈ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿದೆ.
ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ರೈಲ್ವೆ ಸಚಿವರಿಗೆ ರತ್ನಗಂಬಳಿ ಸ್ವಾಗತ ಕೋರಲಾಗಿತ್ತು. ಸಚಿವರು ಆಗಮಿಸಿ ಮರಳುವ ಮಾರ್ಗದಲ್ಲಿಯೂ ರತ್ನಗಂಬಳಿ ಹಾಸಲಾಗಿತ್ತು. ಆದರೆ, ರೈಲ್ವೇ ನಿಲ್ದಾಣದಿಂದ ರೈಲಿಗೆ ಏರುವ ಕೆಲವು ದೂರ ರತ್ನಗಂಬಳಿ ಇರಲಿಲ್ಲ. ಇದರಿಂದ ಕೇಂದ್ರ ರೈಲ್ವೆ ಸಚಿವರು ಬರಿ ನೆಲದ ಮೇಲೆ ನಡೆಯಬೇಕಾಯಿತು. ಈ ಘಟನೆ ನಡೆದ ನಂತರ ಇಬ್ಬರು ನೌಕರರನ್ನು ಅಮಾನತು ಮಾಡಲಾಗಿದೆ.
ರತ್ನಗಂಬಳಿ ಸರಿಯಾಗಿ ಹಾಸಲಿಲ್ಲ ಮತ್ತು ರೈಲ್ವೆ ಸಚಿವರ ಕಾರ್ಯಕ್ರಮದ ವೇಳೆ ಸರಿಯಾಗಿ ಕೆಲಸ ಮಾಡಿಲಿಲ್ಲ ಎಂಬ ಆರೋಪದ ಮೇಲೆ ರೈಲ್ವೆ ಅಧಿಕಾರಿಗಳಾದ ಸ್ವಪ್ನಿಲ್ ಗರ್ಗ್ ಹಾಗೂ ಎ.ಕೆ.ಮಾಲ್ ಎಂಬುವರನ್ನು ಸೇವೆಯಿಂದ ಅಮಾನತುಪಡಿಸುವ ಆದೇಶ ಹೊರಡಿಸಲಾಗಿದೆ. ಲಕ್ನೋ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಜಗದೀಪ್ ರೈ ಅಮಾನತು ಆದೇಶ ಹೊರಡಿಸಿದ್ದಾರೆ.
ರೈಲ್ವೆ ಅಧಿಕಾರಿಗಳ ಈ ಕ್ರಮ ನೌಕರರ ಆಕ್ರೋಶಕ್ಕೆ ಗುರಿಯಾಗಿದೆ. ಇಂತಹ ಘಟನೆಗಳು ಮರು ಕಳಿಸದಂತೆ ಎಚ್ಚರ ವಹಿಸಬೇಕು. ಆಗಿರುವ ತಪ್ಪಿಗೆ ಕ್ಷಮೆ ಯಾಚಿಸಬೇಕು ಎಂದು ರೈಲ್ವೆ ಅಧಿಕಾರಿಗಳ ಒಕ್ಕೂಟ ಆಗ್ರಹಿಸಿದೆ. ಆಕ್ರೋಶಕ್ಕೆ ಮಣಿದಿರುವ ಹಿರಿಯ ಅಧಿಕಾರಿಗಳು ಇಬ್ಬರು ಅಧಿಕಾರಿಗಳ ಅಮಾನತನ್ನು ದಿಢೀರ್ ವಾಪಸ್ ಪಡೆದುಕೊಂಡಿದ್ದಾರೆ.












Click it and Unblock the Notifications