ಪ್ರಸಾರ ಭಾರತಿ ಚೇರ್ಮನ್ ಆಗಿ ಕನ್ನಡಿಗ ಎ. ಸೂರ್ಯ ಪ್ರಕಾಶ್ ಮರು ಆಯ್ಕೆ
ನವದೆಹಲಿ, ಡಿಸೆಂಬರ್ 1: ಪ್ರಸಾರ ಭಾರತಿಯ ಚೇರ್ಮನ್ ಆಗಿ ಹಿರಿಯ ಪತ್ರಕರ್ತ ಡಾ. ಅರಕಲಗೂಡು ಸೂರ್ಯ ಪ್ರಕಾಶ್ ರನ್ನು ಮರು ಆಯ್ಕೆ ಮಾಡಲಾಗಿದೆ. ಫೆಬ್ರವರಿ 8, 2020ರವರೆಗೆ ಅಂದರೆ ಅವರಿಗೆ 70 ವರ್ಷವಾಗುವವರೆಗೆ ಅವರು ಈ ಹುದ್ದೆಯಲ್ಲಿ ಇರಲಿದ್ದಾರೆ.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಧ್ಯಕ್ಷತೆಯಲ್ಲಿ ಇಂದು ನಡೆದ ಸಮಿತಿ ಸಭೆಯಲ್ಲಿ ಸೂರ್ಯ ಪ್ರಕಾಶ್ ಹೆಸರನ್ನು ಪ್ರಸಾರ ಭಾರತಿ ಚೇರ್ಮನ್ ಸ್ಥಾನಕ್ಕೆ ಶಿಫಾರಸ್ಸು ಮಾಡಲಾಯಿತು. ಈ ಶಿಫಾರಸ್ಸಿನ ಮೇರೆಗೆ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.

ಪ್ರಸಾರ ಭಾರತಿಯು ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದ ಆಗುಹೋಗುಗಳನ್ನು ನಿರ್ವಹಿಸಲಿದೆ. ಸೂರ್ಯ ಪ್ರಕಾಶ್ 2014ರ ಅಕ್ಟೋಬರ್ ನಲ್ಲಿ ಮೊದಲ ಬಾರಿಗೆ ಪ್ರಸಾರ ಭಾರತಿ ಚೇರ್ಮನ್ ಆಗಿ ಆಯ್ಕೆಯಾಗಿದ್ದರು.
ಈ ಸಂಬಂಧ ಪಿಟಿಐ ಜತೆ ಮಾತನಾಡಿರುವ ಸೂರ್ಯ ಪ್ರಕಾಶ್, ಈ ಅವಕಾಶ ನೀಡಿದ್ದಕ್ಕಾಗಿ ಉಪರಾಷ್ಟ್ರಪತಿ, ಸಮಿತಿ ಸದಸ್ಯರು ಮತ್ತು ಕೇಂದ್ರ ಸರಕಾರಕ್ಕೆ ಧನ್ಯವಾದ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಯಾರು ಈ ಸೂರ್ಯ ಪ್ರಕಾಶ್?
ಸೂರ್ಯ ಪ್ರಕಾಶ್ ಮೂಲತಃ ಕರ್ನಾಟಕದ ಹಾಸನದವರು. ನಂತರ ಇಲ್ಲಿಂದ ಅವರ ಕುಟುಂಬ ವಲಸೆ ಹೋಗಿತ್ತು.
ಜೀ ನ್ಯೂಸ್, ದಿ ಪಯೋನಿರ್, ಏಷ್ಯಾ ಟೈಮ್ಸ್, ಇಂಡಿಯಾ ಎಡಿಟರ್, ಈ ನಾಡು ಮತ್ತು ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಕೆಲಸ ಮಾಡಿದ ಅನುಭವ ಸೂರ್ಯ ಪ್ರಕಾಶ್ ಬಳಿಯಿದೆ. ಅಲ್ಲದೇ ದೆಹಲಿಯ ಪಯೋನೀರ್ ಮೀಡಿಯಾ ಶಾಲೆಗಳ ಸಂಸ್ಥಾಪಕ-ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಎರಡನೇ ಕನ್ನಡಿಗ:
ಹಿರಿಯ ಪತ್ರಕರ್ತ ಎಂ.ವಿ ಕಾಮತ್ ಪ್ರಸಾರ ಭಾರತಿ ಚೇರ್ಮನ್ ಸ್ಥಾನವನ್ನು ಅಲಂಕರಿಸಿದ ಮೊದಲ ಕನ್ನಡಿಗರಾಗಿದ್ದರು. ಈಗ ಡಾ. ಎ ಸೂರ್ಯ ಪ್ರಕಾಶ್ ಪ್ರಸಾರ ಭಾರತಿಗೆ ಎರಡನೇ ಬಾರಿ ಚೇರ್ಮನ್ ಆಗಿ ಆಯ್ಕೆಯಾಗಿದ್ದಾರೆ.
ಸಿಇಒ ಸ್ಥಾನದಲ್ಲಿ ಶಶಿಶೇಖರ್ ಮಂದುವರಿಕೆ
ಪ್ರಸಾರ ಭಾರತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸಿಇಒ ಸ್ಥಾನದಲ್ಲಿ ಶಶಿಶೇಖರ್ ವೆಂಪತಿ ಅವರೇ ಮುಂದುವರಿಯಲಿದ್ದಾರೆ.












Click it and Unblock the Notifications