ಲಸಿಕೆ ಬೆಲೆ ಮತ್ತು ಹಂಚಿಕೆಯ ಬಗ್ಗೆ ಕೇಂದ್ರದ ಮುಂದೆ ಕಠಿಣ ಪ್ರಶ್ನೆಗಳನ್ನಿಟ್ಟ ಸುಪ್ರೀಂ ಕೋರ್ಟ್
ನವದೆಹಲಿ, ಮೇ 31: ಕೊರೊನಾ ಲಸಿಕೆ ಖರೀದಿ ನೀತಿಯ ಬಗ್ಗೆ ಕೆಲ ಕಠಿಣ ಪ್ರಶ್ನೆಗಳನ್ನು ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರ್ಕಾರದ ಮುಂದಿಟ್ಟಿದೆ. ಇದೇ ಸಂದರ್ಭದಲ್ಲಿ ಲಸಿಕೆ ನೋಂದಣಿ ವಿಚಾರವಾಗಿ ಇರುವ ಗೊಂದಲದ ಬಗ್ಗೆಯೂ ಅದು ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಎಸ್.ರವೀಂದ್ರ ಭಟ್ ಮತ್ತು ಎಲ್ ನಾಗೇಶ್ವರ ರಾವ್ ಅವರನ್ನು ಒಳಗೊಂಡ ನ್ಯಾಯಪೀಠ ಕೊರೊನಾ ವೈರಸ್ಗೆ ಸಂಬಂಧಪಟ್ಟ ಔಷಧಿಗಳು ಮತ್ತು ಲಸಿಕೆ ಹಾಗೂ ಆಮ್ಲಜನಕ ಪೂರೈಕೆ ವಿಚಾರವಾಗಿ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ಕೇಂದ್ರದ ಮುಂದೆ ಈ ಪ್ರಶ್ನೆಗಳನ್ನು ಮುಂದಿಟ್ಟಿದೆ.
ಕೊರೊನಾ ವೈರಸ್ಗೆ ಲಸಿಕೆಯನ್ನು ಸಂಗ್ರಹಿಸಲು ರಾಜ್ಯಗಳು ಜಾಗತಿಕ ಟೆಂಡರ್ಗಳನ್ನು ನೀಡುವ ಪ್ರಕ್ರಿಯೆ ನಡೆಸುತ್ತಿವೆ. ಈ ರೀತಿಯ ಸ್ಥಿತಿ ರಾಜ್ಯಗಳಿಗೆ ಯಾವ ಕಾರಣಕ್ಕೆ ಉದ್ಭವಿಸಿದೆ. ಇದು ಕೇಂದ್ರ ಸರ್ಕಾರದ ನೀತಿಯ ಭಾಗವೇ? ಎಂದು ಸುಪ್ರೀಂ ಕೋರ್ಟ್ನ ಪೀಠ ಪ್ರಶ್ನಿಸಿದೆ.
ಇನ್ನು ಇದೇ ಸಂದರ್ಭದಲ್ಲಿ ಲಸಿಕೆ ಬೆಲೆಯಲ್ಲಿ ಇರುವ ಇಬ್ಬಗೆಯ ನೀತಿಯ ಬಗ್ಗೆಯೂ ಕೋರ್ಟ್ ಚಿತ್ತಹರಿಸಿತು. ಲಸಿಕೆ ಬೆಲೆಯಲ್ಲಿ ಇಬ್ಬಗೆಯ ನೀತಿಗಳು ಕಂಡುಬರುತ್ತಿದೆ. ದೇಶಾದ್ಯಂತ ಲಸಿಕೆಗೆ ಒಂದೇ ಬೆಲೆಯನ್ನು ನಿಗದಿಪಡಿಸುವ ಅಗತ್ಯವಿದೆ ಎಂದು ಹೇಳಿದೆ.

"ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಲಸಿಕೆಯನ್ನು ಕೊಂಡುಕೊಳ್ಳುತ್ತಿರುವ ಕಾರಣ ಕಡಿಮೆ ಬೆಲೆಗೆ ನಮಗೆ ದೊರೆಯುತ್ತಿದೆ ಎಂದಿದೆ. ಆ ವಾದ ತರ್ಕಬದ್ಧವಾಗಿದ್ದರೆ ರಾಜ್ಯ ಸರ್ಕಾರಗಳಿಗೆ ಯಾಕೆ ಹೆಚ್ಚಿನ ಬೆಲೆಯನ್ನು ನೀಡಲಾಗುತ್ತಿದೆ? ದೇಶಾದ್ಯಂತ ಲಸಿಕೆಗೆ ಒಂದೇ ಬೆಲೆ ನಿಗದಿಪಡಿಸುವ ಅಗತ್ಯವಿದೆ. ಕಳೆದ ಎರಡು ತಿಂಗಳಲ್ಲಿ ಈ ಸಾಂಕ್ರಾಮಿಕ ರೋಗ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇನ್ನು ಲಸಿಕೆಗಾಗಿ ಡಿಜಿಟಲ್ ನೋಂದಣಿ ಬಗ್ಗೆಯೂ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಲಸಿಕೆಯನ್ನು ಪಡೆಯಲು ಕೋವಿನ್ ಆ್ಯಪ್ನಲ್ಲಿ ದಾಖಲಿಸಿಕೊಳ್ಳುವುದು ಕಡ್ಡಾಯ ಮಾಡಿರುವ ಕಾರಣ ಇದು ಗ್ರಾಮೀಣ ಭಾಗದ ಜನರಿಗೆ ಕಠಿಣವಾಗುತ್ತದೆ ಎಂದಿದೆ. "ಕಾನೂನು ರೂಪಿಸುವವರು ತಳಮಟ್ಟದ ಬಗ್ಗೆ ಗಮನ ಹರಿಸಬೇಕು. ಅಲ್ಲಿ ತಂತ್ರಜ್ಞಾನದ ಪ್ರತ್ಯೇಕತೆ ದೊಡ್ಡ ಮಟ್ಟದಲ್ಲಿದೆ. ದೇಶಾದ್ಯಂತ ಏನಾಗುತ್ತಿದೆ ಎಂಬುದನ್ನು ಗಮನಿಸಿಕೊಂಡು ಅದಕ್ಕೆ ಪೂರಕವಾಗಿ ಸರ್ಕಾರ ನಿಯಮಗಳನ್ನು ತರುವ ಅಗತ್ಯವಿದೆ ಎಂದು ಕೋರ್ಟ್ ಹೇಳಿದೆ.












Click it and Unblock the Notifications