ಲೈಂಗಿಕ ಕಿರುಕುಳ ಆರೋಪ: ಸಿಜೆಐ ರಂಜನ್ ಗೊಗೊಯ್ಗೆ ಕ್ಲೀನ್ಚಿಟ್
ನವದೆಹಲಿ, ಮೇ 6: ಸುಪ್ರೀಂಕೋರ್ಟ್ನ ಮಾಜಿ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ವಿರುದ್ಧದ ಪ್ರಕರಣವನ್ನು ಸುಪ್ರೀಂಕೋರ್ಟ್ನ ಆಂತರಿಕ ವಿಚಾರಣಾ ಸಮಿತಿ ರದ್ದುಗೊಳಿಸಿದೆ.
ಈ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಯಾವುದೇ ತಪ್ಪು ಎಸಗಿಲ್ಲ ಎಂದು ಮೂವರು ಸದಸ್ಯರ ಸಮಿತಿ ಕ್ಲೀನ್ ಚಿಟ್ ನೀಡಿದೆ.
ಮಹಿಳೆ ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ತೀರ್ಪು ನೀಡಿರುವ ಆಂತರಿಕ ವಿಚಾರಣಾ ಸಮಿತಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ರದ್ದುಗೊಳಿಸಿತು.
ನ್ಯಾಯಮೂರ್ತಿಗಳಾದ ಎಸ್ಎ ಬೊಬ್ಡೆ, ಇಂದು ಮಲ್ಹೋತ್ರಾ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನು ಒಳಗೊಂಡ ಆಂತರಿಕ ವಿಚಾರಣಾ ಸಮಿತಿ ವಿಚಾರಣೆ ನಡೆಸಿತ್ತು. ಗುರುವಾರ ವಿಚಾರಣೆಗೆ ಹಾಜರಾಗಿದ್ದ ರಂಜನ್ ಗೊಗೊಯ್ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದರು.
ಬಳಿಕ ಆಂತರಿಕ ಸಮಿತಿಯು ಈ ವಿಚಾರಣೆಯ ವರದಿಯನ್ನು ಸಲ್ಲಿಸಿತ್ತು. ಆಂತರಿಕ ಸಮಿತಿಗೆ ಮಹಿಳೆ ಮಾಡಿರುವ ಆರೋಪಗಳಿಗೆ ಪೂರಕವಾಗಿ ಪುರಾವೆಗಳನ್ನು ಒದಗಿಸಿಲ್ಲ ಎಂದು ಸಮಿತಿ ಹೇಳಿರುವುದಾಗಿ ಸುಪ್ರೀಂಕೋರ್ಟ್ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.

ಮಹಿಳೆ ಮಾಡಿ ಆರೋಪವೇನು?
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ತಮ್ಮ ಬಳಿ ಲೈಂಗಿಕ ಸಹಕಾರದ ಬೇಡಿಕೆ ಇರಿಸಿದ್ದರು. ಅದಕ್ಕೆ ತಾವು ಒಪ್ಪದ ಕಾರಣಕ್ಕೆ ಕೆಲಸದಿಂದ ವಜಾಗೊಳಿಸಲಾಯಿತು. ಮಾತ್ರವಲ್ಲ, ಪೊಲೀಸ್ ಇಲಾಖೆಯಲ್ಲಿದ್ದ ಪತಿ ಮತ್ತು ಅವರ ಸಹೋದರರನ್ನೂ ನೌಕರಿಯಿಂದ ಕಿತ್ತು ಹಾಕಲಾಯಿತು. ಇದಾದ ಬಳಿಕ ಎರಡು ವರ್ಷದ ಹಿಂದೆ ಸುಪ್ರೀಂಕೋರ್ಟ್ನಲ್ಲಿ ಕೆಲಸ ಕೊಡಿಸುವುದಾಗಿ ವ್ಯಕ್ತಿಯೊಬ್ಬನಿಂದ ಹಣ ಪಡೆದುಕೊಂಡಿರುವುದಾಗಿ ಆರೋಪಿಸಿ ದೂರು ದಾಖಲಿಸಿ ಮಾರ್ಚ್ ತಿಂಗಳಿನಲ್ಲಿ ಬಂಧಿಸಿ ಹಿಂಸಿಸಲಾಯಿತು ಎಂದು ಸುಪ್ರೀಂಕೋರ್ಟ್ನ ಮಾಜಿ ಉದ್ಯೋಗಿಯಾಗಿರುವ ಮಹಿಳೆಯೊಬ್ಬರು ಆರೋಪಿಸಿದ್ದರು. ಈ ಬಗ್ಗೆ ಅವರು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಿಗೆ ವಿವರವಾದ ಪತ್ರ ಬರೆದಿದ್ದರು.

ಮೂವರ ಸಮಿತಿ
ಈ ಆರೋಪದ ಕುರಿತು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನು ಹೊರತುಪಡಿಸಿ ಉಳಿದೆಲ್ಲ ನ್ಯಾಯಮೂರ್ತಿಗಳು ಸಭೆ ನಡೆಸಿ ನ್ಯಾ. ಎಸ್ಎ ಬೊಬ್ಡೆ ನೇತೃತ್ವದಲ್ಲಿ ಸಮಿತಿ ರಚಿಸಿದ್ದರು. ಅದರಲ್ಲಿ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಎನ್.ವಿ. ರಮಣ ಇದ್ದರು. ಆದರೆ, ರಮಣ ಅವರು ರಂಜನ್ ಗೊಗೊಯ್ ಅವರ ಕುಟುಂಬಕ್ಕೆ ಆಪ್ತರಾಗಿರುವುದರಿಂದ ತಮಗೆ ನ್ಯಾಯ ಸಿಗಲಾರದು ಎಂದು ಮಹಿಳೆ ಅಕ್ಷೇಪ ವ್ಯಕ್ತಪಡಿಸಿದ್ದರಿಂದ ರಮಣ ಅವರು ಸಮಿತಿಯಿಂದ ಹಿಂದಕ್ಕೆ ಸರಿದಿದ್ದರು. ಬಳಿಕ ಆ ಸ್ಥಾನಕ್ಕೆ ಇಂದೂ ಮಲ್ಹೋತ್ರಾ ಅವರನ್ನು ನೇಮಿಸಲಾಗಿತ್ತು.

ವಿಚಾರಣೆಗೆ ಹಾಜರಾಗದ ಮಹಿಳೆ
ಆದರೆ, ಈ ಸಮಿತಿಯಿಂದ ತಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇಲ್ಲ ಎಂದಿದ್ದ ಮಹಿಳೆ, ವಿಚಾರಣೆಗೆ ಹಾಜರಾಗಲು ನಿರಾಕರಿಸಿದ್ದರು. ಈ ವಿಚಾರಣೆಯನ್ನು ಮುದ್ರಿಸಿಕೊಳ್ಳುತ್ತಿಲ್ಲ. ತಮಗೆ ವಕೀಲರೊಂದಿಗೆ ಹಾಜರಾಗಲು ಬಿಡುತ್ತಿಲ್ಲ. ತಾವು ಈ ಹಿಂದೆ ನೀಡಿದ್ದ ಹೇಳಿಕೆಯ ದಾಖಲೆ ಪ್ರತಿಯನ್ನು ಕೊಟ್ಟಿಲ್ಲ ಎಂದು ಮಹಿಳೆ ಆರೋಪಿಸಿದ್ದರು.
|
ವರದಿ ಬಹಿರಂಗ ಸಾಧ್ಯವಿಲ್ಲ
ಸಮಿತಿಯ ವರದಿಯು ಆಂತರಿಕ ವಿಚಾರಣೆಯ ಭಾಗವಾಗಿರುವುದರಿಂದ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಆಂತರಿಕ ಪ್ರಕ್ರಿಯೆ ಅನ್ವಯ ಮೇ 5ರಂದು ವರದಿಯನ್ನು ಸಿಜೆಐ ನಂತರದ ಹಿರಿಯ ನ್ಯಾಯಮೂರ್ತಿಗೆ ಹಾಗೂ ಸಿಜೆಐಗೆ ಕೂಡ ಸಲ್ಲಿಸಲಾಗಿದೆ ಎಂದು ಅವರು ಇಂದಿರಾ vs ಸುಪ್ರೀಂಕೋರ್ಟ್ ಆಫ್ ಇಂಡಿಯಾ ಪ್ರಕರಣವನ್ನು ಉಲ್ಲೇಖಿಸಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಏನಿದು ಇಂದಿರಾ ಜೈಸಿಂಗ್ ಪ್ರಕರಣ
ಕೆಲವು ವರ್ಷಗಳ ಹಿಂದೆ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿಗಳು ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಕುರಿತು ವಿಚಾರಣೆ ನಡೆಸಿದ ಬೇರೆ ಹೈಕೋರ್ಟ್ಗಳ ಇಬ್ಬರು ಮುಖ್ಯ ನ್ಯಾಯಮೂರ್ತಿಗಳು ಮತ್ತು ಒಬ್ಬ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯ ವರದಿಯನ್ನು ಬಹಿರಂಗಪಡಿಸುವಂತೆ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ 2003ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಲಾಗಿತ್ತು.












Click it and Unblock the Notifications