'ಜಾಮೀನು ಬೇಕಾದರೆ ರಾಖಿ ಕಟ್ಟಿಸಿಕೋ': ಲೈಂಗಿಕ ದೌರ್ಜನ್ಯ ಆರೋಪಿಗೆ ವಿಧಿಸಿದ್ದ ಷರತ್ತಿನ ಆದೇಶ ರದ್ದು
ನವದೆಹಲಿ, ಮಾರ್ಚ್ 18: ಜಾಮೀನು ಬೇಕಾದರೆ ಮಹಿಳೆಯಿಂದ ರಾಖಿ ಕಟ್ಟಿಸಿಕೊಳ್ಳುವಂತೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗೆ ಮಧ್ಯಪ್ರದೇಶ ಹೈಕೋರ್ಟ್ನ ವಿವಾದಾತ್ಮಕ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಈ ಆದೇಶ ವಿರೋಧಿಸಿ ಒಂಬತ್ತು ಮಹಿಳಾ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಿಚಾರಣೆಗೆ ಒಳಪಡಿಸಿತು.
ದೂರುದಾರ ಮಹಿಳೆಯು ಅನುಭವಿಸಿದ್ದ ನೋವನ್ನು ತೀರಾ ಕ್ಷುಲ್ಲಕವೆಂಬಂತೆ ನ್ಯಾಯಾಲಯ ನೋಡಿದೆ ಎಂಬ ಅರ್ಜಿದಾರರ ಆರೋಪವನ್ನು ಒಪ್ಪಿಕೊಂಡ ಸುಪ್ರೀಂಕೋರ್ಟ್, ನ್ಯಾಯಾಧೀಶರು ಮತ್ತು ವಕೀಲರು ಸಂವೇದನಾಶೀಲತೆ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದು ನಿರ್ದೇಶನ ನೀಡಿತು.
ಜಾಮೀನಿಗೆ ವಿಧಿಸಿದ್ದ ಷರತ್ತಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಅರ್ಜಿದಾರರು, ಅಂತಹ ಆದೇಶಗಳು ಮಹಿಳೆಯರನ್ನು ಅವಮಾನಿಸುತ್ತವೆ ಎಂದು ಹೇಳಿದ್ದರು.

'ಜಾಮೀನಿನ ಷರತ್ತುಗಳು ಮಹಿಳೆಯರು ಮತ್ತು ಸಮಾಜದಲ್ಲಿನ ಅವರ ಸ್ಥಾನಮಾನದ ಕುರಿತಾದ ರೂಢಿಗತ ಅಥವಾ ಪುರುಷಪ್ರಧಾನ ಅಭಿಪ್ರಾಯಗಳಿಂದ ದೂರವಿರಬೇಕು. ಉಡುಪು, ನಡತೆ ಅಥವಾ ಹಿಂದಿನ ನಡವಳಿಕೆಗಳು ಅಥವಾ ನೈತಿಕತೆಯ ಕುರಿತಾದ ಚರ್ಚೆಗಳು ಜಾಮೀನು ನೀಡುವ ಆದೇಶಗಳಲ್ಲಿ ನುಸುಳಬಾರದು' ಎಂದು ಕೋರ್ಟ್ ಹೇಳಿದೆ.
'ಜಾಮೀನಿನ ಷರತ್ತುಗಳು ಆರೋಪಿ ಮತ್ತು ಮಹಿಳೆ ನಡುವೆ ಸಂಪರ್ಕವನ್ನು ಅಗತ್ಯ ಅಥವಾ ಅನುಮತಿಯನ್ನು ಸೂಚಿಸಬಾರದು. ಅಂತಹ ಷರತ್ತುಗಳು ಆರೋಪಿಯಿಂದ ಮುಂದೆ ಮಹಿಳೆಗೆ ಕಿರುಕುಳದಿಂದ ರಕ್ಷಣೆ ನೀಡುವಂತೆ ಇರಬೇಕು' ಎಂದು ಸುಪ್ರೀಂಕೋರ್ಟ್ ತಿಳಿಸಿದೆ.












Click it and Unblock the Notifications