ಕಾವೇರಿ ನಿರ್ವಹಣಾ ಸ್ಕೀಂ ಕರಡಿಗೆ ಸುಪ್ರೀಂಕೋರ್ಟ್ ಒಪ್ಪಿಗೆ
ನವದೆಹಲಿ, ಮೇ 18: ಕಾವೇರಿ ನದಿ ಕಣಿವೆಯ ನಾಲ್ಕು ರಾಜ್ಯಗಳ ನಡುವೆ ಸುಸೂತ್ರ ನೀರು ಹಂಚಿಕೆಗೆ ಅನುವು ಮಾಡಿಕೊಡುವ ಕಾವೇರಿ ನಿರ್ವಹಣಾ ಸ್ಕೀಂ ಸಂಬಂಧ ಕೇಂದ್ರ ಸರ್ಕಾರ ರಚಿಸಿರುವ ಕರಡಿಗೆ ಸುಪ್ರೀಂಕೋರ್ಟ್ ಶುಕ್ರವಾರ ಅನುಮೋದನೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ. ಖನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನು ಒಳಗೊಂಡ ನ್ಯಾಯಪೀಠವು, ಕರಡಿನಲ್ಲಿ ಬದಲಾವಣೆ ಮಾಡುವ ಸಂಬಂಧ ಕರ್ನಾಟಕ ಮತ್ತು ಕೇರಳ ಸರ್ಕಾರಗಳು ನೀಡಿದ್ದ ಸಲಹೆಗಳು ಅರ್ಹವಾಗಿಲ್ಲ ಎಂದು ತಿರಸ್ಕರಿಸಿತು.
ಕಾವೇರಿ ನೀರು ವಿವಾದ ನ್ಯಾಯಮಂಡಳಿಯು ನೀಡಿದ್ದ ತೀರ್ಪನ್ನು ಕಾವೇರಿ ನಿರ್ವಹಣಾ ಸ್ಕೀಂ ತಾರ್ಕಿಕವಾಗಿ ಅಂತ್ಯಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ಅಲ್ಲದೆ, ಕಾವೇರಿ ನಿರ್ವಹಣಾ ಮಂಡಳಿಯನ್ನು ಅಂತಿಮಗೊಳಿಸದ ಕಾರಣಕ್ಕೆ ಕೇಂದ್ರ ಸರ್ಕಾರದ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು ಮಾಡಬೇಕೆಂಬ ತಮಿಳುನಾಡಿನ ಅರ್ಜಿಯನ್ನು ಇದೇ ವೇಳೆ ಪೀಠ ತಿರಸ್ಕರಿಸಿತು.
ಇದಕ್ಕೂ ಮೊದಲು ಸರ್ಕಾರ ರಚನೆ ಸಂಬಂಧ ರಾಜಕೀಯ ಗೊಂದಲಗಳು ಉಂಟಾಗಿರುವ ಕರ್ನಾಟಕವು, ಕರಡು ಅನುಮೋದನೆಗೆ ತಾತ್ಕಾಲಿಕ ತಡೆ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿರಲಿಲ್ಲ.











Click it and Unblock the Notifications