ಸರಕಾರದ ಕ್ರಮಕ್ಕೆ ಗುರುಮೂರ್ತಿ ತಾರೀಫ್, ನೋಟು ನಿಷೇಧ ಆಗದಿದ್ದರೆ ಆರ್ಥಿಕತೆ ಕುಸಿಯುತ್ತಿತ್ತಂತೆ
ನವದೆಹಲಿ, ನವೆಂಬರ್ 16: ಜಗತ್ತಿನ ಬೇರೆ ಯಾವ ಕೇಂದ್ರ ಬ್ಯಾಂಕ್ ಬಳಿ ಕೂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಳಿ ಇರುವಷ್ಟು, ಅಂದರೆ 9.6 ಲಕ್ಷ ಕೋಟಿ ರುಪಾಯಿ ಮೀಸಲು ನಿಧಿ ಇಲ್ಲ ಎಂದು ಆರ್ ಬಿಐ ಸ್ವತಂತ್ರ ನಿರ್ದೇಶಕ ಹಾಗೂ ಆರೆಸ್ಸೆಸ್ ಸಿದ್ಧಾಂತಗಳ ಪ್ರತಿಪಾದಕ ಎಸ್.ಗುರುಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.
ಆರ್ ಬಿಐ ಬಳಿ ಅಗತ್ಯಕ್ಕಿಂತ ಅತಿ ಹೆಚ್ಚು ಮೀಸಲು ನಿಧಿ ಇದೆ. ಅದರಲ್ಲಿ 3.6 ಲಕ್ಷ ಕೋಟಿ ಮೊತ್ತವನ್ನು ಸರಕಾರದೊಂದಿಗೆ ಚರ್ಚೆ ನಡೆಸಿ, ಆ ನಂತರ ಹೇಗೆ ಖರ್ಚು ಮಾಡಬೇಕು ಎಂಬ ನಿರ್ಧಾರ ಮಾಡಬೇಕು ಎಂಬುದು ಕೇಂದ್ರದ ವಾದವಾಗಿದೆ. ಇದೀಗ ಗುರುಮೂರ್ತಿ ಅವರ ಅಭಿಪ್ರಾಯವು ಆ ವಾದವನ್ನು ಸಮರ್ಥಿಸುವಂತೆ ಇದೆ.
ಕೆಲ ತಿಂಗಳ ಹಿಂದಷ್ಟೇ ಗುರುಮೂರ್ತಿ ಅವರನ್ನು ಆರ್ ಬಿಐಗೆ ನೇಮಕ ಮಾಡಲಾಗಿದೆ. ಆವರು ಹೇಳುವ ಪ್ರಕಾರ, ಜಾಗತಿಕ ಮಟ್ಟದಲ್ಲಿ ನಿಗದಿ ಮಾಡಿದ ಮಾನದಂಡಕ್ಕಿಂತ ಭಾರತದಲ್ಲಿನ ಕ್ಯಾಪಿಟಲ್ ಅಡಿಕ್ವಸಿ ರೇಷಿಯೋ 1 ಪರ್ಸೆಂಟ್ ಹೆಚ್ಚೇ ಇದೆ. ಜಿಡಿಪಿಗೆ ಶೇಕಡಾ 50ರಷ್ಟು ಕೊಡುಗೆ ನೀಡುವ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಗೆ ಸಾಲ ನೀಡುವ ನಿಬಂಧನೆಗಳನ್ನು ಬ್ಯಾಂಕ್ ಗಳು ಸರಳಗೊಳಿಸಬೇಕು ಎಂದು ಹೇಳಿದ್ದಾರೆ.

ಉದ್ಯಮಗಳಿಗೆ ಸಾಲ ನೀಡುವಾಗ ನಿರ್ಬಂಧ ಸಡಿಲಿಸಬೇಕು
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೇಂದ್ರ ಸರಕಾರದ ಮಧ್ಯೆ ತಿಕ್ಕಾಟ ಶುರುವಾದ ನಂತರ ಇದೇ ಮೊದಲ ಬಾರಿಗೆ ಗುರುಮೂರ್ತಿ ಅವರು ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. "ಇದು ಖಂಡಿತಾ ಸಂತಸದ ವಿಚಾರ ಅಲ್ಲ" ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಂಡಳಿ ಸಭೆಯು ಮುಂದಿನ ಸೋಮವಾರ ನಡೆಯಲಿದೆ. ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಗೆ ಸಾಲ ನೀಡುವ ನಿಯಮ ಸರಳವಾಗಬೇಕು, ಆರ್ ಬಿಐ ಮೀಸಲು ನಿಧಿ ಕಡಿತಗೊಳಿಸಬೇಕು, ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್ ನಿಯಮಗಳನ್ನು ಸಡಿಲಗೊಳಿಸಬೇಕು ಎಂಬುದು ಸೇರಿ ವಿವಿಧ ವಿಷಯಗಳು ಚರ್ಚೆಯಾಗಲಿದೆ.

ನೋಟು ನಿಷೇಧ ಮಾಡದಿದ್ದರೆ ಆರ್ಥಿಕತೆ ಕುಸಿಯುತ್ತಿತ್ತು
2016ರ ನವೆಂಬರ್ ನಲ್ಲಿ 500 ಹಾಗೂ 1000 ರುಪಾಯಿ ನೋಟು ನಿಷೇಧ ಮಾಡದೇ ಹೋಗಿದ್ದರೆ ಭಾರತದ ಆರ್ಥಿಕತೆಯು ದೊಡ್ಡ ಮುಖ ಬೆಲೆಯ ನೋಟುಗಳ ಭಾರಕ್ಕೆ ಕುಸಿದು ಹೋಗುತ್ತಿತ್ತು. ಆ ಮುಖಬೆಲೆ ನೋಟುಗಳು ಕೇವಲ 18 ತಿಂಗಳಲ್ಲಿ 4.8 ಲಕ್ಷ ಕೋಟಿ ಏರಿಕೆಯಾಗಿ, ರಿಯಲ್ ಎಸ್ಟೇಟ್ ಹಾಗೂ ಚಿನ್ನಕ್ಕೆ ಪೂರೈಕೆ ಆಗುತ್ತಿತ್ತು. ಇನ್ನು ಆರ್ ಬಿಐನ ಬಂಡವಾಳ ವಿಚಾರಕ್ಕೆ ಒಂದು ಚೌಕಟ್ಟು ಹಾಕಬೇಕಿದೆ. ಎರಡು ಬೇರೆ-ಬೇರೆ ಅಧ್ಯಯನಗಳು ಯಾವ ಪ್ರಮಾಣದಲ್ಲಿ ಬಂಡವಾಳ ಹೊಂದಿರಬೇಕು ಎಂಬುದನ್ನು ತಿಳಿಸಿವೆ. ಕೇಂದ್ರ ಬ್ಯಾಂಕ್ ಬಳಿ ಕಡ್ಡಾಯವಾಗಿ 12%ನಷ್ಟು ಮತ್ತು 18.76% ಮೀಸಲು ನಿಧಿ ಇರಬೇಕು. ಆದರೆ ಸದ್ಯಕ್ಕೆ ಆರ್ ಬಿಐ ಬಳಿ 27ರಿಂದ28 ಪರ್ಸೆಂಟ್ ಇರಬೇಕು. ರುಪಾಯಿ ಮೌಲ್ಯ ಕುಸಿದಿರುವುದರಿಂದ ಅದು ಇನ್ನೂ ಹೆಚ್ಚಾಗಿರಬಹುದು ಎಂದಿದ್ದಾರೆ ಗುರುಮೂರ್ತಿ.

ರಿಸರ್ವ್ ಬ್ಯಾಂಕ್ ಮೀಸಲು ನಿಧಿಗೆ ಚೌಕಟ್ಟು ರೂಪಿಸಬೇಕು
ರಿಸರ್ವ್ ಬ್ಯಾಂಕ್ ಬಳಿ ಸಂಗ್ರಹವಾಗಿರುವ ಡಾಲರ್ ನ ಮೌಲ್ಯದಲ್ಲಿ ಏರಿಕೆ ಆಗಿದೆ. ನೀವು 42-45 ರುಪಾಯಿಯಲ್ಲಿ ಡಾಲರ್ ಖರೀದಿಸಿದ್ದು ಈಗ 70 ರುಪಾಯಿ ಆಗಿದೆ. ಅದೇ ರೀತಿ ನೀವು ಷೇರು ಖರೀದಿ ಮಾಡಿದಾಗ ಅದರ ಬೆಲೆ ಹೆಚ್ಚಾದಾಗ ಹೆಚ್ಚಾದ ಬೆಲೆಯನ್ನು ಮೀಸಲು ನಿಧಿ ಎಂದು ಪರಿಗಣಿಸಲಾಗುತ್ತದೆ. ಅದು ಏರಿಕೆ ಆಗಿದೆಯಲ್ಲಾ, ಅದನ್ನು ನನಗೆ ನೀಡು ಎಂದು ಕೇಳಲು ಸಾಧ್ಯವಿಲ್ಲ. ನನಗೆ ಅನಿಸುವಂತೆ ಸರಕಾರ ಅದನ್ನು ಕೇಳುತ್ತಿಲ್ಲ. ನನಗೆ ಅರ್ಥ ಆಗಿರುವಂತೆ, ರಿಸರ್ವ್ ಬ್ಯಾಂಕ್ ಬಳಿಯಲ್ಲಿ ಎಷ್ಟು ಮೀಸಲು ನಿಧಿ ಇರಬೇಕು ಎಂಬುದಕ್ಕೆ ಒಂದು ಚೌಕಟ್ಟು ರೂಪಿಸಲು ಮಾತ್ರ ಸರಕಾರ ಮುಂದಾಗಿದೆ. ಈ ರೀತಿಯ ಮೀಸಲು ನಿಧಿಯನ್ನು ಬೇರೆ ಯಾವ ದೇಶದ ಕೇಂದ್ರ ಬ್ಯಾಂಕ್ ಸಹ ಹೊಂದಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾತ್ರ ಹೀಗೆ ಮೀಸಲು ನಿಧಿ ಹೊಂದಿದೆ ಎಂದಿದ್ದಾರೆ.

ಭಾರತೀಯ ಮನಸ್ತತ್ವಗಳ ಬದಲಾವಣೆಯಾಗಲಿ
ನವದೆಹಲಿಯ ವಿವೇಕಾನಂದ ಇಂಟರ್ ನ್ಯಾಷನಲ್ ಫೌಂಡೇಷನ್ ನಲ್ಲಿ 'ಸ್ಟೇಟ್ ಆಫ್ ದ ಎಕಾನಮಿ: ಇಂಡಿಯಾ ಅಂಡ್ ದ ವರ್ಲ್ಡ್' ಎಂಬ ವಿಚಾರದ ಬಗ್ಗೆ ಉಪನ್ಯಾಸ ನೀಡುತ್ತಾ ಗುರುಮೂರ್ತಿ ಮಾತನಾಡಿದ್ದಾರೆ. ಅಮೆರಿಕದ ವ್ಯವಸ್ಥೆಯೇ ಅತ್ಯುತ್ತಮ ವ್ಯವಸ್ಥೆ ಎಂಬ ಮನಸ್ಥಿತಿಯಿಂದಲೇ ಇಂಥ ಸನ್ನಿವೇಶ ಸೃಷ್ಟಿಯಾಗಿದೆ. ನಮಗೆ ಪರ್ಯಾಯದ ಅಗತ್ಯವಿದೆ ಹಾಗೂ ಅದು ಈಗಾಗಲೇ ಇದೆ. ಭಾರತೀಯ ಮನಸ್ತತ್ವಗಳ ಒಟ್ಟಾರೆ ಬದಲಾವಣೆಯ ಭಾಗ ಅದು ಎಂದು ಹೇಳಿದ್ದಾರೆ.












Click it and Unblock the Notifications