ಪಿಎಂ ಮೋದಿ ಆಡಳಿತ ಸೂತ್ರದಿಂದ ಭಾರತಕ್ಕೆ ಯಶಸ್ಸು: ಡಿವಿಎಸ್
ಬೆಂಗಳೂರು, ಅಕ್ಟೋಬರ್ 16: ಪ್ರಧಾನಿ ನರೇಂದ್ರ ನರೇಂದ್ರ ಮೋದಿಯವರ ಆಡಳಿತ ಸೂತ್ರದ ಮೂಲಕ ಭಾರತ ಮುಂದಿನ ದಿನಗಳಲ್ಲಿ ಯಶಸ್ವಿ ರಾಷ್ಟ್ರವಾಗಲಿದೆ ಎಂದು ಸಂಸದ ಡಿ.ವಿ. ಸದಾನಂದಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನ ರಾಜಾಜಿನಗರದ ಕೆ.ಎಲ್.ಇ ಸೊಸೈಟಿಯ ಎಸ್. ನಿಜಲಿಂಗಪ್ಪ ಕಾಲೇಜಿನಲ್ಲಿ ಭಾನುವಾರ ನಡೆದ ಬಿಜೆಪಿಯ 24 ಪ್ರಕೋಷ್ಠಗಳ ರಾಜ್ಯ ಸಂಚಾಲಕರು ಮತ್ತು ಸಹ-ಸಂಚಾಲಕರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿ ಹೇರಿಕೆ: ಪ್ರಧಾನಿ ಮೋದಿ ಮಧ್ಯಪ್ರವೇಶಸಲಿ ಎಂದ ಎಚ್ಡಿ ಕುಮಾರಸ್ವಾಮಿ
ಗುಲಾಮಗಿರಿಯ ಅಂಶಗಳು ನಮ್ಮ ರಕ್ತದಲ್ಲಿವೆ. ಈ ದಾಸ್ಯದ ಗುರುತುಗಳನ್ನು ತೊಲಗಿಸಿ ಹೊಸ ಆಡಳಿತ ಸೂತ್ರ ನೀಡಲು ಪ್ರಧಾನಿ ಮೋದಿಜಿ ಮುಂದಾಗಿದ್ದಾರೆ. ಇದು ಕೇವಲ ಹಿಂದೂಗಳಿಗೆ ಸಂಬಂಧಿಸಿದ್ದಲ್ಲ ಎಂದು ಅವರು ಈ ವೇಳೆ ವಿಶ್ಲೇಷಿಸಿದರು.
ದಾಸ್ಯದ ಗುರುತೇ ಇರಬಾರದೆಂಬ ಚಿಂತನೆ ಪ್ರಧಾನಿ ನರೇಂದ್ರ ಮೋದಯವರದ್ದು. ಮಾತುಗಳಿಗಿಂತ ಕೃತಿ ಮುಖ್ಯ ಆಗಬೇಕು. ಭವಿಷ್ಯದಲ್ಲಿ ನನಗೆ ಪ್ರಕೋಷ್ಠಗಳಲ್ಲಿ ತೊಡಗಿಕೊಳ್ಳುವ ಇಚ್ಛೆ ಇದೆ ಎಂದು ಅವರು ತಿಳಿಸಿದರು. ಸರ್ವಸ್ಪರ್ಶಿ- ಸರ್ವ ವ್ಯಾಪಿ, ಸರ್ವವೇದ್ಯ ಆದಾಗ ರಾಜಕೀಯವು ಯಶಸ್ಸು ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಕೋಷ್ಠದಿಂದ ರಾಜಕೀಯ ಪರಿವರ್ತನೆ ಸಾಧ್ಯ
ನರೇಂದ್ರ ಮೋದಿ ಅವರು ಇದೀಗ ಜಾಗತಿಕ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಇಂದಿರಾ ಗಾಂಧಿ, ವಿಪಿ ಸಿಂಗ್ ಅವರಿಗಿಂತ ಹೆಚ್ಚು ಜನಾಶೀರ್ವಾದವನ್ನು ಅವರು ಪಡೆದಿದ್ದಾರೆ. ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಮೋದಿಯವರ ಜನಾಶೀರ್ವಾದದ ಪ್ರಮಾಣ ಹೆಚ್ಚುತ್ತ ಸಾಗಿದೆ. ಇದಕ್ಕೆ ನರೇಂದ್ರ ಮೋದಿಯವರ ನಡವಳಿಕೆ, ವ್ಯಕ್ತಿತ್ವ, ದೇಶಪ್ರೇಮ ಮತ್ತು ಈ ಮೂರನ್ನು ಸೇರಿಸಿದ ಸೈದ್ಧಾಂತಿಕ ವ್ಯವಸ್ಥೆಗಳೇ ಕಾರಣ ಎಂದು ಅವರು ವಿವರಿಸಿದರು.
ಪ್ರಕೋಷ್ಠಗಳ ಮೂಲಕ ರಾಜಕೀಯದಲ್ಲಿ ಪರಿವರ್ತನೆ ಸಾಧ್ಯ. ವ್ಯಕ್ತಿಯ ಸಚ್ಚಾರಿತ್ರ್ಯ, ಮಾತೃಭೂಮಿಯ ಬಗೆಗಿನ ಅವರ ಪರಿಕಲ್ಪನೆ, ಸಮಾಜದ ಜೊತೆಗಿನ ಅವರ ಸಂಬಂಧಗಳ ಆಧಾರಿತ ಜೀವನಪದ್ಧತಿ ಭಾರತದ್ದಾಗಿತ್ತು. ಅದನ್ನು ಜಗತ್ತು ಒಪ್ಪಿಕೊಂಡಿತ್ತು ಎಂದರು.
ಇಲ್ಲಿನ ವಿವಿಧ ಪ್ರಕೋಷ್ಠಗಳು ವೃತ್ತಿ ಆಧರಿತ ಕಲ್ಪನೆಯಡಿ ಜೋಡಣೆಗೊಂಡಿವೆ. ಈ ದೇಶ ಇನ್ನಷ್ಟು ಯಶಸ್ವಿ ರಾಷ್ಟ್ರ ಆಗಲು ಜಾತಿಗಿಂತ ಮೀರಿದ ವೃತ್ತಿ ಆಧರಿತ ಮತ್ತು ನಮ್ಮ ಸಂಘಟನೆಗಳ ಪರಿಕಲ್ಪನೆಯ ರಾಜನೀತಿ ಈ ದೇಶದಲ್ಲಿ ಬರಬೇಕಾದ ಅಗತ್ಯತೆ ಇದೆ. ಜಾತಿಗಿಂತ ನೀತಿ ಮೇಲು ಎಂಬ ಚಿಂತನೆ ಅನುಷ್ಠಾನಕ್ಕೆ ಬರಲಿ. ರಾಜಕಾರಣದಲ್ಲಿ ಮಾತ್ರ ಜಾತಿಯನ್ನೇ ನೆಚ್ಚಿಕೊಳ್ಳಲಾಗುತ್ತಿದೆ. ಈ ಜಾತಿಗೆ ಒತ್ತು ಕೊಟ್ಟು ರಾಜಕಾರಣ ಮಾಡುವುದು ದುರ್ದೈವದ ಸಂಗತಿಯಾಗಿದ್ದು, ಇದರಿಂದ ಹೊರಬರುವಂತಾಗಲಿ ಎಂದು ಸದಾನಂದಗೌಡರು ಆಶಿಸಿದರು.
ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಂ.ಬಿ.ಭಾನುಪ್ರಕಾಶ್, ಸಹ ಸಂಯೋಜಕರಾದ ಡಾ|| ಎ.ಹೆಚ್. ಶಿವಯೋಗಿಸ್ವಾಮಿ ಮತ್ತು ಜಯತೀರ್ಥ ಕಟ್ಟಿ, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಅವರು ಭಾಗವಹಿಸಿದ್ದರು.