ಸಂಸತ್ ಕಲಾಪ ಮತ್ತೆ ಆರಂಭ: ಬಿಲ್ ಪಾಸ್ ಮಾಡ್ತೀರೋ, ಕಿತ್ತಾಡ್ತೀರೋ?
ಸಂಸತ್ತಿನ ಮುಂದುವರಿದ ಬಜೆಟ್ ಅಧಿವೇಶನ ಸೋಮವಾರದಿಂದ (ಏ 25) ಆರಂಭವಾಗಲಿದೆ. ಏಪ್ರಿಲ್ 25ರಿಂದ ಮೇ 13ರ ವರೆಗೆ ನಡೆಯುವ ಅಧಿವೇಶನದಲ್ಲಿ ಒಟ್ಟು ಹದಿನೈದು ದಿನ ಕಲಾಪ ನಡೆಯಲಿದೆ.
ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಇದುವರೆಗೆ ನಡೆದ ಉಭಯ ಸದನಗಳ ಅಧಿವೇಶನವನ್ನು ವಿರೋಧ ಪಕ್ಷಗಳು ಸುಸೂತ್ರವಾಗಿ ನಡೆಯಲು ಅವಕಾಶ ನೀಡದೇ ಇರುವ ಹಿನ್ನಲೆಯಲ್ಲಿ ಈ ಕಲಾಪದಲ್ಲೂ ದೇಶಕ್ಕೆ ಉಪಯೋಗವಾಗುವ ಬಿಲ್ಲುಗಳು ಪಾಸ್ ಆಗುವ ಸಾಧ್ಯತೆಗಳು ಕಮ್ಮಿ. (ದೆಹಲಿಯ ಸಂಸತ್ ಭವನದಲ್ಲಿ ಬೆಂಕಿ ಅವಘಡ)
ದೇಶದ ವಿವಿಧ ಭಾಗಗಳಲ್ಲಿ ಉಂಟಾಗಿರುವ ಬರಗಾಲ, ಬರ ಪರಿಹಾರಕ್ಕೆ ಕೇಂದ್ರದಿಂದ ತಾರತಮ್ಯ ಮಾಡುತ್ತಿದೆ ಎನ್ನುವ ಆರೋಪ, ಉತ್ತರಾಖಂಡ್ನಲ್ಲಿ ರಾಷ್ಟ್ರಪತಿ ಆಳ್ವಿಕೆ ವಿವಾದ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.
ಭಾನುವಾರ (ಏ 24) ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಕರೆದಿದ್ದ ಪ್ರತಿಪಕ್ಷಗಳ ಸಭೆಯಲ್ಲಿ ಕಲಾಪ ಸುಸೂತ್ರವಾಗಿ ನಡೆಯಲು ಸಹಕರಿಸುವಂತೆ ಸ್ಪೀಕರ್ ಎಲ್ಲರಲ್ಲೂ ಮನವಿ ಮಾಡಿದ್ದಾರೆ.
ಉತ್ತರಾಖಂಡ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ವಿಚಾರವನ್ನು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಕಾಂಗ್ರೆಸ್, ಸ್ಪೀಕರ್ ಮತ್ತು ರಾಜ್ಯಸಭೆ ಸಭಾಪತಿ ಅಮೀದ್ ಹನ್ಸಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. (ಇಂದಿರಾ ಪ್ರಸ್ತಾಪಿಸಿ ಕಾಂಗ್ರೆಸ್ ಮೇಲೆ ಮೋದಿ ವಾಗ್ದಾಳಿ)
ಲೋಕಸಭಾ ಅಧಿವೇಶನದಲ್ಲಿ ಚರ್ಚೆಗೆ ಮತ್ತು ಅನುಮೋದನೆಗೆ ಕಾದಿರುವ ಮಸೂದೆಗಳು, ಸ್ಲೈಡಿನಲ್ಲಿ..
ಸರ್ಕಾರದ ಕಿವಿಹಿಂಡಲು ಪ್ರತಿಪಕ್ಷ ಸಜ್ಜು
ದೇಶದಲ್ಲಿನ ಬರ ಪರಿಹಾರದ ವಿಚಾರದಲ್ಲಿ ಕೇಂದ್ರ ತಾರತಮ್ಯ ತೋರಿಸುತ್ತಿದೆ ಎನ್ನುವುದು ಪ್ರಮುಖವಾಗಿ ಕಾಂಗ್ರೆಸ್ಸಿನ ಆರೋಪ. ಇದಾದ ನಂತರ ಉತ್ತರಾಖಾಂಡ್ ನಲ್ಲಿ ರಾಷ್ಟ್ರಪತಿ ಆಡಳಿತ, ಪನಾಮ ಪೇಪರ್ ನಲ್ಲಿ ಲೀಕ್ ಆಗಿರುವ ಹೆಸರು ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಕಿವಿಹಿಂಡಲು ಕಾಂಗ್ರೆಸ್ ಸಜ್ಜಾಗಿದೆ.
ಹದಿಮೂರು ಬಿಲ್
ಈ ಅಧಿವೇಶನದಲ್ಲಿ ಸರಕಾರ ಬಹಳಷ್ಟು ಬಿಲ್ಲುಗಳನ್ನು ಪಾಸ್ ಮಾಡಲು ತುದಿಗಾಲಿನಲ್ಲಿ ನಿಂತಿದೆ. ಅದರಲ್ಲಿ ಲೋಕಸಭೆಯಲ್ಲಿ ಪಾಸ್ ಆಗಬೇಕಾಗಿರುವ 13 ಮತ್ತು ರಾಜ್ಯಸಭೆಯಲ್ಲಿ ಅನುಮೋದನೆ ಸಿಗಬೇಕಾಗಿರುವ 11ಬಿಲ್ಲುಗಳಿವೆ.
ಜಲಸಾರಿಗೆ ಮಸೂದೆ
ರಾಷ್ಟ್ರೀಯ ಜಲ ಸಾರಿಗೆ ಮಸೂದೆ, ಗ್ರಾಹಕರ ಹಿತರಕ್ಷಣಾ ಮಸೂದೆ, ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಬಿಲ್, ಕಂಪನಿಗಳ ತಿದ್ದುಪಡಿ ಮಸೂದೆ, ನಾಗರೀಕ ವಿಮಾನಯಾನ ಇಲಾಖೆ, ಈಶಾನ್ಯ ಭಾಗದ ರಾಜ್ಯಗಳಿಗೆ ವಿಶೇಷ ಪ್ಯಾಕೇಜ್ ಸೇರಿದಂತೆ ಹಲವು ಮಸೂದೆಗಳಿಗೆ ಅಂಗೀಕಾರ ಪಡೆಯಲು ಸರ್ಕಾರ ಪ್ರಯತ್ನಿಸಲಿದೆ.
ಇತರ ಮಸೂದೆಗಳು
ಸಿಖ್ ಗುರುದ್ವಾರಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಮಸೂದೆ, ವಿದ್ಯುತ್ ಕ್ಷೇತ್ರದಲ್ಲಿನ ತಿದ್ದುಪಡಿ, ಲೋಕಪಾಲ್, ಲೋಕಾಯುಕ್ತ, ಗ್ರಾಹಕರ ಹಿತರಕ್ಷಣಾ ಮಸೂದೆ, ಇತರ ಕಾನೂನು ಇಲಾಖೆಗೆ ಸಂಬಂಧಪಟ್ಟ ಮಸೂದೆಯಲ್ಲಿ ತಿದ್ದುಪಡಿ ತರುವ ಮಸೂದೆಗಳು ಚರ್ಚೆಗೆ ಬರಲಿದೆ.
ಜಿಎಸ್ಟಿ ಬಿಲ್
ಸರಕು ಮತ್ತು ಸೇವಾ ತೆರಿಗೆ ಮಸೂದೆ (ಜಿಎಸ್ಟಿ) ವಿಧೇಯಕ ಅಂಗೀಕಾರಕ್ಕೆ ಕಾದಿದೆ. ಈ ಅಧಿವೇಶನದ ಸಂದರ್ಭದಲ್ಲಿ ಮತ್ತೆ ಜಿಎಸ್ಟಿ ಬಿಲ್ ಮಂಡಿಸುವ ಸಾಧ್ಯತೆಯಿದೆ. ಮೇ ತಿಂಗಳಲ್ಲಿ ಲೋಕಸಭೆಯಲ್ಲಿ ವಿಧೇಯಕಕ್ಕೆ ಅಂಗೀಕಾರ ದೊರೆತಿದ್ದರೂ, ರಾಜ್ಯಸಭೆಯಲ್ಲಿ ಅಂಗೀಕಾರ ಇನ್ನಷ್ಟೇ ಆಗಬೇಕಾಗಿದೆ. ಎನ್ಡಿಎಗೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲದಿರುವುದರಿಂದ ಮಸೂದೆಗೆ ಅಂಗೀಕಾರ ಪಡೆಯಲು ಸರ್ಕಾರ ಭಾರೀ ಪ್ರಯತ್ನ ನಡೆಸುತ್ತಿದೆ.