ಕೇರಳದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ
ತಿರುವನಂತಪುರಂ, ಮೇ 2: ಕಳೆದ ಏಪ್ರಿಲ್ 25ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆಗೊಂಡಿದ್ದ ಕೇರಳದ ಮೊದಲ ವಂದೇ ಭಾರತ್ ರೈಲಿನ ಮೇಲೆ ಕಲ್ಲೂ ತೂರಾಟ ನಡೆಸಲಾಗಿದೆ.
ಕೇರಳದ ಮಲಪ್ಪುರಂ ಜಿಲ್ಲೆಯ ತಿರುನಾವಯ ರೈಲು ನಿಲ್ದಾಣದಲ್ಲಿ ಕಾಸರಗೋಡು- ತಿರುವನಂತಪುರ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಕಿಟಕಿ ಗಾಜುಗಳಿಗೆ ಕನಿಷ್ಠ ಹಾನಿಯಾಗಿದೆ ಎಂದು ವರದಿಯಾಗಿದೆ.

ಈ ಬಗ್ಗೆ ರೈಲ್ವೇ ಪೊಲೀಸ್ ಪಡೆ (ಆರ್ಪಿಎಫ್) ಪರಿಸ್ಥಿತಿಯ ಕುರಿತು ತನಿಖೆ ಆರಂಭಿಸಿದೆ. ಘಟನೆಯ ನಂತರ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರಿಂದ ತನಿಖೆ ಪ್ರಾರಂಭವಾಯಿತು. ಆದರೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ತಿಳಿಸಲಾಗಿದೆ.
ಕಿಡಿಗೇಡಿಗಳು ಸಿ4 ಕೋಚ್ನ 62 ಮತ್ತು 63 ಸೀಟ್ಗಳ ಕಿಟಕಿಗಳ ಮೇಲೆ ಕಲ್ಲುಗಳನ್ನು ಎಸೆಯುವ ಮೂಲಕ ಹಾನಿಗೊಳಿಸಿದರು. ಮಲಪ್ಪುರಂ ಪೊಲೀಸರು ತನಿಖೆ ಆರಂಭಿಸಿದ್ದು, ಪ್ರದೇಶವನ್ನು ಜಾಲಾಡುತ್ತಿದ್ದಾರೆ ಎಂದು ರೈಲ್ವೇ ಪೊಲೀಸರೂ ವರದಿ ಸಲ್ಲಿಸಲಿದ್ದಾರೆ. "ಇಂದು ಸಂಜೆ ತಿರುನಾವಯ ಮತ್ತು ತಿರೂರ್ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ. ಯಾರಿಗೂ ಗಾಯಗಳಾಗಿಲ್ಲ. ಒಂದು ಕೋಚ್ನ ವಿಂಡ್ ಶೀಲ್ಡ್ಗೆ ಹಾನಿಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೈಲು ಭದ್ರತೆಯನ್ನು ಬಲಪಡಿಸಲು ನಾವು ನಿರ್ಧರಿಸಿದ್ದೇವೆ" ಎಂದು ದಕ್ಷಿಣ ರೈಲ್ವೆ ತಿಳಿಸಿದೆ.
ದಕ್ಷಿಣ ರೈಲ್ವೆ ಅಧಿಕಾರಿಗಳು ಪರಿಸ್ಥಿತಿಯ ಮೇಲೆ ಕಣ್ಣಿಟ್ಟಿದ್ದು, ಮುಂದಿನ 15 ದಿನಗಳ ಕಾಲ ರೈಲಿನ ಭದ್ರತೆಯನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ. ಏಪ್ರಿಲ್ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಸರಗೋಡು-ತಿರುವನಂತಪುರಂ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಅಧಿಕೃತವಾಗಿ ಪ್ರಾರಂಭಿಸಿದರು. ಇದು ತಿರುವನಂತಪುರಂ ಮತ್ತು ಕಾಸರಗೋಡು ನಡುವೆ ಸಂಚರಿಸುತ್ತದೆ.

ಈ ವಂದೇ ಭಾರತ್ ಎಕ್ಸ್ಪ್ರೆಸ್ ರಾಜ್ಯದ 11 ಜಿಲ್ಲೆಗಳನ್ನು ಒಳಗೊಂಡಿದೆ. ಇದು ಕೋಝಿಕ್ಕೋಡ್, ಕೊಟ್ಟಾಯಂ, ಕಾಸರಗೋಡು, ತ್ರಿಶೂರ್, ಶೋರನೂರು, ಮತ್ತು ಎರ್ನಾಕುಲಂ ಟೌನ್ಗಳಲ್ಲಿ ನಿಲುಗಡೆ ಮಾಡುತ್ತದೆ. ಇದು ಭಾರತದ 16ನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಾಗಿದೆ. ಕಳೆದ ಏಪ್ರಿಲ್ 26ರಂದೇ ಮಂಗಳವಾರ, ಏಪ್ರಿಲ್ 25ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇರಳದ ಚೊಚ್ಚಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ ನೀಡಿದ ಕೆಲವೇ ಗಂಟೆಗಳ ನಂತರ, ಕಾಂಗ್ರೆಸ್ ಕಾರ್ಯಕರ್ತರು ರೈಲಿನ ಹೊರಭಾಗವನ್ನು ವಿರೂಪಗೊಳಿಸಿದ್ದರು.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೇಲೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಮ್ಮ ಸಂಸದ ವಿಕೆ ಶ್ರೀಕಂದನ್ ಅವರ ಪೋಸ್ಟರ್ಗಳನ್ನು ಅಂಟಿಸಲಾಗಿತ್ತು. ಕೇರಳದ ಪಾಲಕ್ಕಾಡ್ನ ಶೋರನೂರ್ ಜಂಕ್ಷನ್ಗೆ ರೈಲು ಬಂದಾಗ ಈ ಘಟನೆ ನಡೆದಿದ್ದು, ಅಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರೈಲಿನ ಗಾಜಿನ ಕಿಟಕಿಗಳ ಮೇಲೆ ಕಾಂಗ್ರೆಸ್ ಸಂಸದನ ಪೋಸ್ಟರ್ಗಳನ್ನು ಅಂಟಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.












Click it and Unblock the Notifications