Mahakumbh Stampede: ಮಹಾಕುಂಭ ಮೇಳ ಕಾಲ್ತುಳಿತದಲ್ಲಿ ಕರ್ನಾಟಕದ ಹಲವರಿಗೆ ಗಂಭೀರ ಗಾಯ
ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಇಂದು ಭಕ್ತರ ಸಂಖ್ಯೆ ಹೆಚ್ಚಾಗಿ ಕಾಲ್ತುಳಿತ ಸಂಭವಿಸಿದೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಜೀವಹಾನಿಯಾಗಿರುವ ಶಂಕೆಯೂ ವ್ಯಕ್ತವಾಗಿದೆ. ಇಂದು ಮೌನಿ ಅಮಾವಾಸ್ಯೆಯ ಹಿನ್ನೆಲೆ ಕೋಟ್ಯಂತರ ಮಂದಿ ಪ್ರಯಾಗ್ರಾಜ್ಗೆ ತೆರಳಿದ್ದಾರೆ. ಈ ಹಿನ್ನೆಲೆ ಸಂಭವಿಸಿರುವ ಕಾಲ್ತುಳಿತದಲ್ಲಿ ಕರ್ನಾಟಕದ ಹಲವರು ಕೂಡ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಬೆಳಗಾವಿಯ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಬಾಲಕಿಯರು ಪ್ರಯಾಗ್ರಾಜ್ ಕಾಲ್ತುಳಿತದಲ್ಲಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ವಡಗಾವಿಯ ನಿವಾಸಿ ಸರೋಜಿನಿ ಹಾಗೂ ಕಾಂಚನ್ ಎಂಬುವರು ಗಾಯಗೊಂಡಿದ್ದು ಇವರು ಬಿಜೆಪಿ ಕಾರ್ಯಕರ್ತೆಯರು ಎಂದು ತಿಳಿದು ಬಂದಿದೆ. ಇವರೊಂದಿಗಿದ್ದ ಮೇಘಾ, ಜ್ಯೋತಿ ಹೆಸರಿನ ಬಾಲಕಿಯರಿಗೂ ಗಾಯಗಳಾಗಿವೆ. ಸದ್ಯ ಇವರಿಗೆಲ್ಲ ಚಿಕಿತ್ಸೆ ಸಿಕ್ಕಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇಂದು ಮೌನಿ ಅಮಾವಾಸ್ಯೆಯ ಹಿನ್ನೆಲೆ ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ಇಂದು ಕೋಟ್ಯಂತರ ಮಂದಿ ಪವಿತ್ರ ಸ್ನಾನ ಮಾಡಿದ್ದಾರೆ. ಜನವರಿ 28ರವರೆಗೆ ಒಟ್ಟಾರೆ 19.94 ಕೋಟಿ ಜನರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಮಾಹಿತಿ ಇಲಾಖೆ ವಿವರ ಹಂಚಿಕೊಂಡಿದೆ. ಇಂದು ಮೌನಿ ಅಮಾವಾಸ್ಯೆ ಹಿನ್ನೆಲೆ ಒಂದೇ ದಿನ ಭಕ್ತರ ಸಂಖ್ಯೆ ಹೆಚ್ಚಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗಿದೆ.
ತ್ರಿವೇಣಿ ಸಂಗಮ ಘಾಟ್ನಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಭಕ್ತರನ್ನು ಸ್ಥಳಾಂತರಿಸಲು ಡಿಐಜಿ ವೈಭವ್ ಕೃಷ್ಣ ಅಶ್ವಾರೋಹಿ ಅವರು ಪೊಲೀಸ್ ಸಿಬ್ಬಂದಿಗೆ ಆದೇಶ ನೀಡಿದ್ದಾರೆ. ಮೌನಿ ಅಮಾವಾಸ್ಯೆಯಂದು ಮಹಾಕುಂಭ ಪ್ರದೇಶದಲ್ಲಿ ಭಾರೀ ಜನಸಂದಣಿಯ ನಡುವೆ ಎಲ್ಲ ಭಕ್ತರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ಬಾಂಬ್ ಪತ್ತೆ ತಂಡ ಮತ್ತು ವಿಲೇವಾರಿ ಸ್ಕ್ವಾಡ್ ಜೊತೆಗೆ ಸ್ನಿಫರ್ ಡಾಗ್ ತಂಡಗಳು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿವೆ.

ಪ್ರಯಾಗ್ರಾಜ್ನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಪ್ರಯಾಗ್ರಾಜ್ನಲ್ಲಿ ಇಂದು ಸುಮಾರು 8ರಿಂದ 10 ಕೋಟಿ ಭಕ್ತರು ಸೇರಿದ್ದಾರೆ. ಸಂಗಮದ ಕಡೆಗೆ ಭಕ್ತರ ಚಲನೆಯಿಂದಾಗಿ ನಿರಂತರ ಒತ್ತಡವಿದೆ. ಅಖಾರ ಮಾರ್ಗದಲ್ಲಿ ಬ್ಯಾರಿಕೇಡ್ ದಾಟಲು ಪ್ರಯತ್ನಿಸಿದಾಗ ಕೆಲವು ಭಕ್ತರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನಿನ್ನೆ ರಾತ್ರಿಯೇ ಮೌನಿ ಅಮಾವಾಸ್ಯೆ ಮಹೂರ್ತ ಆರಂಭವಾಗಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯಪಾಲರು ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಅವರು ನಿರಂತರವಾಗಿ ಇಲ್ಲಿನ ಪರಿಸ್ಥಿತಿಯ ವರದಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪ್ರಯಾಗ್ರಾಜ್ನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಭಕ್ತರು ಮೊದಲು ಪವಿತ್ರ ಸ್ನಾನ ಮಾಡಬೇಕು ಮತ್ತು ಜನಸಂದಣಿ ಕಡಿಮೆಯಾದ ನಂತರ ಅಖಾರಾಗಳ ಸಂತರು ಪವಿತ್ರ ಸ್ನಾನ ಮಾಡಿರಿ ಎಂದು ಮನವಿ ಮಾಡಿದ್ದಾರೆ.

ಸಂಗಮ, ನಾಗ್ ವಾಸುಕಿ ಮಾರ್ಗ ಮತ್ತು ಸಂಗಮ ಮಾರ್ಗದಲ್ಲಿ ಹೆಚ್ಚಿನ ಜನಸಂದಣಿ ಇದೆ. ದಯವಿಟ್ಟು ಯಾವುದೇ ವದಂತಿಗಳಿಗೆ ಗಮನ ಕೊಡಬೇಡಿ ಎಂದು ನಾನು ಭಕ್ತರಿಗೆ ಮನವಿ ಮಾಡುತ್ತೇನೆ. ಇಡೀ ಮಹಾಕುಂಭ ಪ್ರದೇಶದಲ್ಲಿ ಘಾಟ್ಗಳನ್ನು ನಿರ್ಮಿಸಲಾಗಿದೆ. ಭಕ್ತರು ಸಂಗಮದ ಕಡೆಗೆ ಮಾತ್ರ ಚಲಿಸುವ ಅಗತ್ಯವಿಲ್ಲ. ಭಕ್ತರು ತಮ್ಮ ಹತ್ತಿರದ ಘಾಟ್ಗಳಲ್ಲಿ ಪವಿತ್ರ ಸ್ನಾನ ಮಾಡಿರಿ. ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದೇವೆ. ರೈಲ್ವೆ ಇಲಾಖೆಯು ಭಕ್ತರನ್ನು ಅವರವರ ಸ್ಥಳಗಳಿಗೆ ಕಳಿಸಿಕೊಡಲು ಪ್ರಯಾಗರಾಜ್ ಪ್ರದೇಶದ ವಿವಿಧ ನಿಲ್ದಾಣಗಳಿಂದ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ ಎಂದು ಹೇಳಿದ್ದಾರೆ.












Click it and Unblock the Notifications