ರಾಹುಲ್ ಪಟ್ಟಾಭಿಷೇಕಕ್ಕೆ ಸೋನಿಯಾಗೇ ಮನಸ್ಸಿಲ್ಲ
ನವದೆಹಲಿ, ಜುಲೈ 15: ಕಾಂಗ್ರೆಸ್ ಈಗ ಏಕಕಾಲಕ್ಕೆ ಎರಡು ಕದನ ಮಾಡುತ್ತಿದೆ. ಆ ಪೈಕಿ ಮೊದಲನೆಯದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ. ಎರಡನೆಯದು ತಮ್ಮದೇ ಪಾಳಯದ ರಾಹುಲ್ ಗಾಂಧಿ ವಿರುದ್ಧ.
ಮೊದಲನೆಯದು ಬಹಿರಂಗ ಸವಾಲು. ಮೋದಿ ಜನಪ್ರಿಯತೆಗೆ ತಡೆಯೊಡ್ಡಬೇಕಿದೆ. ಮತ್ತೊಂದು ಮಾತ್ರ ತೀರಾ ಉಪಾಯದಿಂದ ಎದುರಿಸಬೇಕಾದ ಕದನ. ಇನ್ನೆರಡು ವರ್ಷದಲ್ಲಿ ಎದುರಾಗಲಿರುವ ಲೋಕಸಭೆ ಚುನಾವಣೆಯ ನೇತೃತ್ವ ರಾಹುಲ್ ಗಾಂಧಿಗೆ ವಹಿಸಬೇಕೋ ಬೇಡವೋ ಎಂಬುದು ಕಾಂಗ್ರೆಸ್ ನ ಆಂತರಿಕ ವಿಚಾರ.
ಆದರೆ, ದಿನದಿನಕ್ಕೂ ರಾಹುಲ್ ವಿಚಾರ ಗೊಂದಲದ ಕೊರಕಲಿನ ಕಡೆಗೆ ಆಗುತ್ತಿದೆ. ಒಂದು ಕಡೆ ಪಕ್ಷದ ಸಾಂಪ್ರದಾಯಿಕವಾದ ಬೇಡಿಕೆಯಂತೆ ಕಾಂಗ್ರೆಸ್ ಗೆ ಗಾಂಧಿ ಕುಟುಂಬದ ಮುಖವೊಂದು ಬೇಕೇಬೇಕು. ಇನ್ನೊಂದು ಕಡೆ ರಾಹುಲ್ ರಂಥ 'ದುರ್ಬಲ ನಾಯಕ'ರನ್ನು ಮುಂದೆ ಇಟ್ಟುಕೊಂಡು ಸದ್ಯದ ಸವಾಲಿನ ಸ್ಥಿತಿ ಎದುರಿಸಲು ಸಾಧ್ಯವೇ ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ.
ಕಳೆದ ಲೋಕಸಭಾ ಚುನಾವಣೆ ನಂತರ ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್ ಒಂದಾದ ಮೇಲೆ ಒಂದು ಚುನಾವಣೆ ಸೋಲುತ್ತಲೇ ಇದೆ. ದೇಶದ ಯಾವ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಎಂದು ಹುಡುಕಬೇಕು ಎಂಬ ಸ್ಥಿತಿಗೆ ಬಂದಿದೆ. ರಾಹುಲ್ ಗಾಂಧಿಗೆ ಎಷ್ಟು ಅವಕಾಶ ನೀಡಲಾಯಿತು ಅನ್ನೋದು ವಿಷಯವೇ ಅಲ್ಲ. ಏಕೆಂದರೆ ಎಲ್ಲ ಸಲವೂ ಅವರು ನಿರಾಶೆ ಮಾಡಿದ್ದಾರೆ.

ಭೇಟಿ ತಂದ ಮುಜುಗರ
ಚೀನಾದ ರಾಜತಾಂತ್ರಿಕರೊಬ್ಬರನ್ನು ಭೇಟಿ ಮಾಡಿದ ರಾಹುಲ್ ರಿಂದ ಕಾಂಗ್ರೆಸ್ ಮುಜುಗರ ಅನುಭವಿಸಬೇಕಾಯಿತು.
ಅದಕ್ಕೂ ಮುನ್ನ ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ರೈತರ ಪ್ರತಿಭಟನೆಗಳು ನಡೆಯುತ್ತಿದ್ದರೆ ದಿಢೀರನೆ ರಾಹುಲ್ ನಾಪತ್ತೆಯಾಗಿಬಿಟ್ಟರು. ಆ ಎರಡು ರಾಜ್ಯದಲ್ಲೂ ಬಿಜೆಪಿ ಅಧಿಕಾರದಲ್ಲಿದೆ. ಹಾಗಿದ್ದರೂ ಹೋರಾಟದಲ್ಲಿ ಯಾವುದೇ ಪಾತ್ರ ವಹಿಸಲಿಲ್ಲ.

ಇಟಲಿಯಲ್ಲಿ ರಜಾ ದಿನ
ಮಧ್ಯಪ್ರದೇಶ ಮಂಡ್ಸೌರ್ ನಲ್ಲಿ ಐವರು ರೈತರು ಮೃತಪಟ್ಟಿದ್ದರು. ಅಲ್ಲಿಗೆ ಹೋಗಲು ರಾಹುಲ್ 'ನಾಟಕೀಯ' ಪ್ರಯತ್ನವೊಂದನ್ನು ಮಾಡಿದರು. ಆದರೆ ಆ ನಂತರ ವಿಪರೀತ ಸುಸ್ತಾದವರಂತೆ ಹತ್ತಿರಹತ್ತಿರ ಒಂದು ತಿಂಗಳು ರಜಾದ ಮೇಲೆ ಇಟಲಿಗೆ ಹೋಗಿಬಿಟ್ಟರು.

ಪಕ್ಷ ಅನಾಥ, ರಾಹುಲ್ ರಜಾ
ಕಾಂಗ್ರೆಸ್ ನ ಹಿರಿಯ ನಾಯಕರಿಗೆ ಇರುವ ಅಸಮಾಧಾನವೇ ಅದು. ಯಾವಾಗೆಲ್ಲ ದೇಶದಲ್ಲಿ ಗಂಭೀರವಾದ ಚರ್ಚೆ ಆರಂಭ ಆಗಿರುತ್ತದೋ, ಯಾವಾಗೆಲ್ಲ ಮೋದಿ ಸರಕಾರದ ವಿರುದ್ಧ ಧ್ವನಿ ಎತ್ತಲು ಅವಕಾಶ ಸಿಗುತ್ತದೋ ಆಗ ರಾಹುಲ್ ಗಾಂಧಿ ಪಕ್ಷವನ್ನು 'ಅನಾಥ'ವನ್ನಾಗಿ ಮಾಡಿ, ರಜಾದ ಮೇಲೆ ತೆರಳುತ್ತಾರೆ.

ಸೋನಿಯಾ ಗಾಂಧಿಗೇ ಅಸಮಾಧಾನ
ವರದಿಗಳು ಹಾಗೂ ಮೂಲಗಳನ್ನೇ ನಂಬುವುದಾದರೆ ಪಕ್ಷದ ಅಧ್ಯಕ್ಷೆ- ತಾಯಿ ಸೋನಿಯಾ ಗಾಂಧಿಗೆ ರಾಹುಲ್ ನ ಇಂಥ ಬದ್ಧತೆ ಇಲ್ಲದ ನಡವಳಿಕೆ ಬಗ್ಗೆ ಅಸಮಾಧಾನ ಇದೆಯಂತೆ. ಪದೇಪದೇ ವೈಫಲ್ಯ ಕಾಣುತ್ತಿರುವುದರಿಂದ ಕಾಂಗ್ರೆಸ್ ನ ಮುಳುಗುವ ಹಡಗಿಗೆ ಹೋಲಿಸಲಾಗುತ್ತಿದೆ. ಇದು ಆತಂಕಕ್ಕೆ ಕಾರಣವಾಗಿದೆ.

ಮತ್ತೆ ಹಳೆ ನಾಯಕರ ದಂಡು, ಸೋನಿಯಾ ನಾಯಕತ್ವ
ನ್ಯೂಸ್ 18 ವರದಿ ಪ್ರಕಾರ, ಮುಂದಿನ ಲೋಕಸಭಾ ಚುನಾವಣೆಗೂ ರಾಹುಲ್ ನಾಯಕತ್ವ ನೀಡುವುದು ಅನುಮಾನ. ಮತ್ತೆ ಹಳೆ ರಣತಂತ್ರಕ್ಕೆ ಮೊರೆ ಹೋಗಿ, ಸೋನಿಯಾ ನೇತೃತ್ವದಲ್ಲೇ ಹಿರಿಯ ನಾಯಕರ ದಂಡಿನೊಂದಿಗೆ ಚುನಾವಣೆ ಎದುರಿಸುವ ಇರಾದೆ ಇದೆ.

ಮತ್ತೆ ಬಂದರು ಹಿರಿಯ ನಾಯಕರು
ಪಕ್ಷದ ಸಂವಹನ ಸಮಿತಿಯಲ್ಲಿ ಮತ್ತೆ ಹಿರಿಯ ನಾಯಕರಾದ ಪಿ.ಚಿದಂಬರಂ, ಆನಂದ್ ಶರ್ಮಾ, ಗುಲಾಬಿ ನಬಿ ಆಜಾದ್ ಅಂಥವರು ಕಾಣಿಸಿಕೊಂಡಿದ್ದಾರೆ. ರಾಹುಲ್ ಮತ್ತು ಅವರ ತಂಡವನ್ನು ಪಕ್ಕಕ್ಕೆ ಸರಿಸುತ್ತಿರುವ ಸ್ಪಷ್ಟ ಇಶಾರೆ ಇದು.

ಮುಂದಿನ ಚುನಾವಣೆವರೆಗೆ ಸೋನಿಯಾ ನೇತೃತ್ವ
ಪಕ್ಷದ ಹಿರಿಯ ನಾಯಕರು ಹಾಗೂ ಕಾರ್ಯಕರ್ತರಿಗೆ ಸೋನಿಯಾ ಗಾಂಧಿ ಅವರೇ ಮುಂದಿನ ಚುನಾವಣೆವರೆಗೆ ಮುನ್ನಡೆಸಲಿ ಎಂಬ ನಿರೀಕ್ಷೆ ಇದೆ. ಏಕೆಂದರೆ ರಾಹುಲ್ ಗೆ ಈ ಅಕ್ಟೋಬರ್ ನಲ್ಲಿ ಕಾಂಗ್ರೆಸ್ ಚುಕ್ಕಾಣಿ ನೀಡುವ ಸಾಧ್ಯತೆ ಇದೆ. ಅದು ಬಹಳ ಮಂದಿಗೆ ಅಪಥ್ಯವಾಗಿದೆ.

ರಾಹುಲ್ ಪದತ್ಯಾಗ ಮಾಡಿದರೆ ಕಾಂಗ್ರೆಸ್ ಗೆ ಅನುಕೂಲ
ರಾಹುಲ್ ಸದ್ಯಕ್ಕಿರುವ ಸ್ಥಾನದಿಂದ ಕೆಳಗೆ ಇಳಿದರೂ ಅದು ಕಾಂಗ್ರೆಸ್ ನ ಉಳಿಸಿಕೊಳ್ಳಲು ಒಂದು ದಾರಿಯಾಗುತ್ತದೆ. ಏಕೆಂದರೆ ಮೋದಿ ವಿರುದ್ಧ ಕಾಂಗ್ರೆಸ್ ನಾಯಕರಾಗಿ ರಾಹುಲ್ ನ ಬಿಂಬಿಸಲು ಸಹ ಕಷ್ಟ. ಸದ್ಯದ ಮಟ್ಟಿಗೆ ರಾಹುಲ್ ರನ್ನು ಪಕ್ಕಕ್ಕೆ ಸರಿಸಿ, ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ಉದ್ದೇಶವಿದೆ. ಆ ನಂತರದ ಹಂತದಲ್ಲಿ ರಾಹುಲ್ ರನ್ನು ಕರೆತರಬಹುದು ಎಂಬುದು ಲೆಕ್ಕಾಚಾರ.

ಕಾಂಗ್ರೆಸ್ ಅಷ್ಟೇ ಅಲ್ಲ, ದೇಶಕ್ಕೇ ಸಂಭ್ರಮ
ಒಂದು ವೇಳೆ ರಾಹುಲ್ ರನ್ನು ಅಧಿಕಾರದಿಂದ ಇಳಿಸಿದರೆ ಇದು ಕಾಂಗ್ರೆಸ್ ಗೆ ಸಂತಸ ಅಂತಲ್ಲ್, ಇಡೀ ದೇಶಕ್ಕೇ ಸಂಭ್ರಮ. ಏಕೆಂದರೆ ಎನ್ ಡಿಎ ವಿರುದ್ಧ ವಿಪಕ್ಷಕ್ಕೂ ಪ್ರಬಲ ನಾಯಕತ್ವ ಸಿಗುತ್ತದೆ. ನಿಧಾನವಾಗಿ ಹಲವು ಕಡೆಯಿಂದ 'ಸರ್ವಾಧಿಕಾರ'ಕ್ಕೆ ತಿರುಗುತ್ತಿರುವ ಕೇಂದ್ರ ಸರಕಾರದ ವಿರುದ್ಧ ಧ್ವನಿ ಎತ್ತಲು ಪ್ರಬಲ ನಾಯಕತ್ವ ಬೇಕಿದೆ.
ಒನ್ಇಂಡಿಯಾ ನ್ಯೂಸ್












Click it and Unblock the Notifications