ಮೋದಿಯಿಂದ 'ಮೂಲ ಭಾರತದ ಕಲ್ಪನೆ'ಯನ್ನು ರಕ್ಷಿಸಬೇಕಿದೆ - ಸೋನಿಯಾ
ನವದೆಹಲಿ, ಜೂನ್ 6: ಇವತ್ತು ನರೇಂದ್ರ ಮೋದಿ ಸರಕಾರ ಏನಾದರೂ ಯಶಸ್ಸು, ಪ್ರಗತಿ ಅಂತ ಸಾಧಿಸಿದ್ದರೆ ಅದಕ್ಕೆ ಯುಪಿಎ ಅವಧಿಯ ಯೋಜನೆಗಳೇ ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ನರೇಂದ್ರ ಮೋದಿ ಸರಕಾರ ಯುಪಿಎ ಅವಧಿಯ ಯೋಜನೆಗಳ ಫಲ ಉಣ್ಣುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆ ಉದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ ನರೇಂದ್ರ ಮೋದಿ ಸರಕಾರದ ಮೇಲೆ ಹರಿಹಾಯ್ದರು. "ಮೋದಿ ಸರಕಾರ ಮೂರು ವರ್ಷ ಪೂರೈಸಿದೆ. ಈ ಸಂದರ್ಭದಲ್ಲಿ ದೇಶದಲ್ಲಿ ಸಾಮರಸ್ಯ ಎಲ್ಲಿದೆ? ಸಹಿಷ್ಣುತೆ ಎಲ್ಲಿದೆ? ಅದರ ಬದಲು ಪ್ರಚೋದನೆಯೇ ಜಾಸ್ತಿಯಾಗಿದೆ. ಕಾಶ್ಮೀರದಲ್ಲಿ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆರ್ಥಿಕ ಕುಸಿತ ಕಾಣಿಸಿಕೊಂಡಿದೆ. ಇಡೀ ದೇಶವನ್ನು ಸಂಕುಚಿತ ಮನಸ್ಥಿತಿಗೆ ದೂಡಲಾಗಿದೆ," ಎಂದು ನರೇಂದ್ರ ಮೋದಿ ಸರಕಾರದ ಮೇಲೆ ಸೋನಿಯಾ ವಾಗ್ದಾಳಿ ನಡೆಸಿದ್ದಾರೆ.[16ನೇ ಲೋಕಸಭೆಯ ಹಾಜರಿ ಪುಸ್ತಕ, ಯುವಕರಿಗಿಂತ ಹಿರಿಯರೇ ವಾಸಿ!]
ಶೋಷಿತ ಮತ್ತು ಬಡವರಿಗೆ ಸವಲತ್ತುಗಳನ್ನು ನೀಡುವಲ್ಲಿ ಮೋದಿ ಸರಕಾರ ವಿಫಲವಾಗಿದೆ ಎಂದು ಸೋನಿಯಾ ಗಾಂಧಿ ಇದೇ ಸಂದರ್ಭದಲ್ಲಿ ಆರೋಪಿಸಿದ್ದಾರೆ. "ಅಪನಗದೀಕರಣವನ್ನು ದೊಡ್ಡ ಯಶಸ್ಸು ಎಂದು ಬಿಂಬಿಸಲಾಯಿತು. ಆದರೆ ಎಷ್ಟರ ಮಟ್ಟಿಗೆ ನೋಟುಗಳು ಬ್ಯಾಂಕಿಗೆ ವಾಪಸ್ ಬಂದಿವೆ ಎನ್ನುವುದನ್ನು ಬಹಿರಂಗಪಡಿಸಲು ಸರಕಾರ ಸಿದ್ದವಿಲ್ಲ. ಉದ್ಯೋಗ ಸೃಷ್ಟಿಸುವಲ್ಲಿ 'ಮೇಕ್ ಇನ್ ಇಂಡಿಯಾ' ವಿಫಲವಾಗಿದೆ," ಎಂದು ಸೋನಿಯಾ ಕಿಡಿಕಾರಿದರು.[ಮತ್ತೊಂದು ಹಗರಣ ಬಯಲಿಗೆಳೆದ ಅರ್ನಬ್: ಈ ಬಾರಿ ಸೋನಿಯಾ ಅಳಿಯ]
"ಮೂರು ವರ್ಷಗಳ ಆಡಳಿತದ ಅಂತ್ಯದಲ್ಲಿ ದೇಶದಾದ್ಯಂತ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ರೈತರನ್ನು ಆತ್ಮಹತ್ಯೆಗೆ ದೂಡಲಾಗುತ್ತಿದೆ. ಮಹಿಳೆಯರು, ಆದಿವಾಸಿಗಳು, ಅಲ್ಪಸಂಖ್ಯಾತರು ತಮ್ಮ ಕಡುಕಷ್ಟದ ದಿನಗಳನ್ನು ನೋಡುತ್ತಿದ್ದಾರೆ," ಎಂದು ಸೋನಿಯಾ ಟೀಕಿಸಿದರು.
ಇನ್ನು ಗೋ ಹತ್ಯೆ ನಿಷೇಧ ಮಸೂದೆ ಬಗ್ಗೆ ಪ್ರಸ್ತಾಪಿಸಿದ ಸೋನಿಯಾ ಗಾಂಧಿ ಬೇರೆ ಬೇರೆ ಸಂಸ್ಕೃತಿ, ಆಚರಣೆಗಳನ್ನು ಪಾಲಿಸುವ ಈ ದೇಶದ ಜನರ ದಿನನಿತ್ಯದ ಬದುಕು ಮತ್ತು ಆಹಾರದ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಜತೆಗೆ "ವಿಭಿನ್ನ ಸಿದ್ದಾಂತ ಮಂಡಿಸುವ ರಾಜ್ಯಗಳ ಧ್ವನಿಯನ್ನೇ ಕೇಂದ್ರ ಸರಕಾರ ಉಡುಗುಸುತ್ತಿದೆ," ಎಂದು ಗಂಭೀರ ಆರೋಪ ಮಾಡಿದ್ದಾರೆ.