ಮೋದಿ ಸರಕಾರದ ವಿರುದ್ಧ ರಣಕಹಳೆ ಊದಿದ ಸೋನಿಯಾ ಗಾಂಧಿ
Recommended Video
ನವದೆಹಲಿ, ಫೆಬ್ರವರಿ 08 : "ಭಾರತದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕಿದ್ದರೆ, ಸಹಿಷ್ಣುತೆ ಮರುಕಳಿಸಬೇಕಿದ್ದರೆ, ಎಲ್ಲರನ್ನು ಒಳಗೊಂಡ ಜಾತ್ಯತೀಯ ಸಮಾಜ ನಿರ್ಮಾಣವಾಗಬೇಕಿದ್ದರೆ, ದೇಶ ಆರ್ಥಿಕ ಪ್ರಗತಿಯತ್ತ ಸಾಗಬೇಕಿದ್ದರೆ ಭಾರತೀಯ ಜನತಾ ಪಕ್ಷ ಸೋಲಲೇಬೇಕು" ಎಂದು ಸೋನಿಯಾ ಗಾಂಧಿ ಸಾರಿದ್ದಾರೆ.
ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿಯಾಗಿರುವ ಸೋನಿಯಾ ಗಾಂಧಿ ಅವರು ಪಕ್ಷವನ್ನು ಗುರುವಾರ ಉದ್ದೇಶಿಸಿ, 2019ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಸದೆಬಡಿಯಬೇಕಿದ್ದರೆ, ಬಿಜೆಪಿಯೇತರ ಪಕ್ಷಗಳ ಮಹಾ ಮೈತ್ರಿಕೂಟವನ್ನು ಹುಟ್ಟುಹಾಕಬೇಕು ಎಂದು ನಾಯಕರಿಗೆ ಸ್ಪಷ್ಟ ಸೂಟನೆಯನ್ನು ನೀಡಿದ್ದಾರೆ.
ಸಂಸತ್ ನಲ್ಲಿ ಕಾಂಗ್ರೆಸ್ ನ ಕಂಡಾಪಟ್ಟೆ ತರಾಟೆಗೆ ತೆಗೆದುಕೊಂಡ ಮೋದಿ
ಡಿಸೆಂಬರ್ ನಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆ ಮತ್ತು ಫೆಬ್ರವರಿ ಮೊದಲ ವಾರದಲ್ಲಿ ಹೊರಬಿದ್ದ ರಾಜಸ್ತಾನ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಬದಲಾವಣೆಯ ಗಾಳಿ ಬೀಸಿರುವುದು ಸ್ಪಷ್ಟವಾಗಿದೆ. ಬಿಜೆಪಿಯನ್ನು ಮಟ್ಟಹಾಕಬೇಕಿದ್ದರೆ ಎಲ್ಲ ವಿರೋಧ ಪಕ್ಷಗಳು ಒಂದಾಗಲೇಬೇಕು ಎಂದು ಅವರು ನುಡಿದರು.
ರಾಹುಲ್ ಗಾಂಧಿಯೇ ನನಗೂ ಬಾಸ್ ಎಂದ ಸೋನಿಯಾಗಾಂಧಿ
ನಾನು ಈ ಕುರಿತು ಕಾಂಗ್ರೆಸ್ ಅಧ್ಯಕ್ಷರು (ರಾಹುಲ್ ಗಾಂಧಿ), ಇತರ ನಾಯಕರು ಮತ್ತು ನಮ್ಮಂತೆಯೇ ಯೋಚಿಸುವ ಇತರ ಪಕ್ಷಗಳ ನಾಯಕರೊಂದಿಗೆ ಮಾತನಾಡುತ್ತೇನೆ. ನಾವೆಲ್ಲ ಒಗ್ಗಟ್ಟಾಗಿ ಬಿಜೆಪಿಯನ್ನು ಸೋಲಿಸಲೇಬೇಕು ಮತ್ತು ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲೇಬೇಕು ಎಂದು ಪಕ್ಷದ ನಾಯಕರಿಗೆ ಕರೆ ನೀಡಿದರು.
ಕಾಂಗ್ರೆಸ್ಸಿನಿಂದ ಪಾಠ ಕಲಿಯಬೇಕಿಲ್ಲ ಎಂದಿದ್ದ ಮೋದಿ
ಬುಧವಾರ ಸಂಸತ್ತಿನಲ್ಲಿ ನೂರಾಐವತ್ತು ನಿಮಿಷಗಳ ಕಾಲ ಸುದೀರ್ಘ ಭಾಷಣ ಮಾಡಿದ್ದ ನರೇಂದ್ರ ಮೋದಿಯವರು, ಪ್ರಜಾಪ್ರಭುತ್ವದ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರಿಂದ ನಾವು ಪಾಠ ಕಲಿಯಬೇಕಿಲ್ಲ. ಪ್ರಜಾಪ್ರಭುತ್ವವನ್ನು ಕಾಂಗ್ರೆಸ್ ನಾಯಕರೂ ಸ್ಥಾಪಿಸಿಲ್ಲ. ಅದು 12ನೇ ಶತಮಾನದಲ್ಲಿ ಕರ್ನಾಟಕದ ಕ್ರಾಂತಿಯೋಗಿ ಬಸವಣ್ಣನವರೇ ಆರಂಭಿಸಿದ್ದು ಎಂದು ಚಪ್ಪಾಳೆ ಗಿಟ್ಟಿಸಿದ್ದರು.
ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ
ಇತ್ತೀಚೆಗೆ ನಡೆದಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆಯನ್ನು ಹಾಡಿಹೊಗಳಿದ ಸೋನಿಯಾ ಗಾಂಧಿಯವರು, ಮುಂಬರುವ ಲೋಕಸಭೆ ಚುನಾವಣೆಗೆ ಸರ್ವಸನ್ನದ್ಧರಾಗಲು ಆಗ್ರಹಿಸಿದರು. ಗುಜರಾತ್ ಮತ್ತು ರಾಜಸ್ತಾನದಲ್ಲಿ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ತೋರಿದೆ. ಕರ್ನಾಟಕದಲ್ಲಿಯೂ ಕಾಂಗ್ರೆಸ್ ಪ್ರಭುತ್ವ ಮೆರೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಜಸ್ತಾನದಲ್ಲಿ ಬಿಜೆಪಿಗೆ ಮಣ್ಣು ಮುಕ್ಕಿಸಿದ ಕಾಂಗ್ರೆಸ್
ನರೇಂದ್ರ ಮೋದಿಯವರ ನಾಡಿನಲ್ಲಿ, ಕಳೆದ 20 ವರ್ಷಗಳಲ್ಲಿಯೇ ಕಾಂಗ್ರೆಸ್ ಮತ್ತು ಅಂಗಪಕ್ಷಗಳು ಅತ್ಯುತ್ತಮ ಸಾಧನೆ ತೋರಿದ್ದು, 182 ಸ್ಥಾನಗಳಲ್ಲಿ 80 ಸ್ಥಾನಗಳನ್ನು ಕಬಳಿಸಿದೆ. ಅಲ್ಲದೆ, ಬಿಜೆಪಿ ಅಧಿಕಾರದಲ್ಲಿರುವ ರಾಜಸ್ತಾನದಲ್ಲಿ ಎರಡು ಲೋಕಸಭೆ ಮತ್ತು ಒಂದು ವಿಧಾನಸಭೆ ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಮುಂದಿನ ವರ್ಷ ರಾಜಸ್ತಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಿದೆ.
ಬಿಜೆಪಿ ವೈಫಲ್ಯವನ್ನು ಜನರಿಗೆ ತಿಳಿಸಬೇಕು
ನರೇಂದ್ರ ಮೋದಿ ಸರಕಾರದ ವೈಫಲ್ಯಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವುದಲ್ಲದೆ, ನಮ್ಮ ಪಕ್ಷದಲ್ಲಿಯೂ ಧನಾತ್ಮಕ ಮತ್ತು ನಂಬಿಕಾರ್ಹ ವಾತಾವರಣವನ್ನು ನಿರ್ಮಾಣ ಮಾಡಬೇಕಿದೆ. ಅಲ್ಲದೆ, ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಬೇಕಿದೆ. 2004ರಂತೆ ಅವಧಿಗಿಂತ ಮೊದಲೇ ಲೋಕಸಭೆ ಚುನಾವಣೆ ಘೋಷಿಸಿದರೂ ಅಚ್ಚರಿಯಿಲ್ಲ ಎಂದು ಸೋನಿಯಾ ನುಡಿದರು.
ಎಡಪಕ್ಷಗಳನ್ನು ಮೈತ್ರಿಕೂಟಕ್ಕೆ ಸೆಳೆದಿದ್ದ ಸೋನಿಯಾ
ಅಂದು ಆಳ್ವಿಕೆಯಲ್ಲಿದ್ದ ಎನ್ಡಿಎ ಸರಕಾರ 6 ತಿಂಗಳು ಮೊದಲೇ ಚುನಾವಣೆಯನ್ನು ಘೋಷಿಸಿದ್ದರೂ, ಎಡ ಪಕ್ಷಗಳನ್ನು ತಮ್ಮ ಮೈತ್ರಿಕೂಟಕ್ಕೆ ತರಲು ಯಶಸ್ವಿಯಾಗಿದ್ದ ಸೋನಿಯಾ ಗಾಂಧಿಯವರು ಬಿಜೆಪಿ ಮತ್ತು ಅಂಗಪಕ್ಷಗಳನ್ನು ಸೋಲಿಸಿ ದೇಶದ ಚುಕ್ಕಾಣಿ ಹಿಡಿದಿದ್ದರು. ನಂತರ 10 ವರ್ಷಗಳ ಕಾಲ ಡಾ. ಮನಮೋಹನ ಸಿಂಗ್ ಅವರ ನಾಯಕತ್ವದಲ್ಲಿ ದೇಶವನ್ನು ಆಳಿದ್ದರು.
ಮೋದಿ ವಿರೋಧಿ ಅಲೆ ಪ್ರಾರಂಭ
2014ರ ಸೋಲು ತಾತ್ಕಾಲಿಕ ಮಾತ್ರ. ಈಗಾಗಲೆ ನರೇಂದ್ರ ಮೋದಿ ವಿರೋಧಿ ಅಲೆ ಪ್ರಾರಂಭವಾಗಿದ್ದು, ಅವರ ಆಡಳಿತದಿಂದ ಜನ ಭ್ರಮನಿರಸನಗೊಂಡಿದ್ದಾರೆ ಎಂದು ಸೋನಿಯಾ ಟೀಕಾಪ್ರಹಾರ ಮಾಡಿದರು. 2014ರಲ್ಲಿ ನಡೆದ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿಹೋಗಿತ್ತು. ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಕೇವಲ 44 ಸೀಟುಗಳನ್ನು ಮಾತ್ರ ಗೆದ್ದು ಹೀನಾಯವಾಗಿ ಸೋತಿತ್ತು.
ನಮ್ಮ ಸಾಮರ್ಥ್ಯ ಮತ್ತೆ ಸಾಬೀತುಪಡಿಸಬೇಕು
ದೇಶದೆಲ್ಲೆಡೆ ಎದ್ದಿರುವ ಅಸಮಾಧಾನದ ಲಾಭವನ್ನು ನಾವು ಪಡೆಯಬೇಕು. ನಮ್ಮ ಸಾಮರ್ಥ್ಯವನ್ನು ನಾವು ಮತ್ತೆ ಸಾಬೀತುಪಡಿಸಬೇಕು. 2004ರಲ್ಲಿ ಆದಂತೆ, ಭಾರತೀಯ ಜನತಾ ಪಕ್ಷ ಮತ್ತು ಮೈತ್ರಿಕೂಟವನ್ನು ಸಡೆಬಡಿದು, ಪ್ರಜಾತಾಂತ್ರಿಕ, ಜಾತ್ಯತೀತ, ಪ್ರಗತಿಪರ ಸರಕಾರವನ್ನು ಮರುಸ್ಥಾಪಿಸಬೇಕು ಎಂದು ಪಕ್ಷದ ನಾಯಕರಲ್ಲಿ ಅವರು ಸ್ಫೂರ್ತಿಯನ್ನು ತುಂಬಿದರು.
ಗರಿಷ್ಠ ಪ್ರಚಾರ, ಕನಿಷ್ಠ ಆಡಳಿತ
ಗರಿಷ್ಠ ಪ್ರಚಾರ, ಕನಿಷ್ಠ ಆಡಳಿತ - ಇದೇ ಮೋದಿ ಸರಕಾರದ ಮಂತ್ರವಾಗಿದೆ. ಅವರ ಆಡಳಿತದಲ್ಲಿ ಶಾಸಕಾಂಗ, ನ್ಯಾಯಾಂಗ, ಮಾಧ್ಯಮ ಮತ್ತು ನಾಗರಿಕ ಸಮಾಜ ಸಾಕಷ್ಟು ದೌರ್ಜನ್ಯಕ್ಕೆ ಒಳಗಾಗಿದೆ. ತನಿಖಾ ಸಂಸ್ಥೆಗಳನ್ನು ಕಡಿವಾಣವಿಲ್ಲದ ಹೋರಿಯಂತೆ ರಾಜಕೀಯ ಪಕ್ಷಗಳ ಮೇಲೆ ಹರಿಯಬಿಡಲಾಗುತ್ತಿದೆ, ಭಯದ ವಾತಾವರಣ ಸೃಷ್ಟಿ ಮಾಡುತ್ತಿದೆ. ಮಹಿಳೆಯರು, ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಕ್ರೌರ್ಯ ಮೇರೆ ಮೀರುತ್ತಿದೆ ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು.
10% ಹೇಳಿಕೆ ಬಗ್ಗೆ 100% ತಲೆಕೆಡಿಸಿಕೊಂಡಿರುವ ಕಾಂಗ್ರೆಸ್
ಕರ್ನಾಟಕದಲ್ಲಿಯೂ ಇದನ್ನೇ ನೋಡಲಿದ್ದೇವೆ
ಇದನ್ನು ನಾವು ಉತ್ತರ ಪ್ರದೇಶ ಮತ್ತು ಗುಜರಾತ್ ನಲ್ಲಿ ಸಾಕಷ್ಟು ನೋಡಿದ್ದೇವೆ. ಅನುಮಾನವೇ ಇಲ್ಲ, ಇದನ್ನು ಕರ್ನಾಟಕದಲ್ಲಿಯೂ ನೋಡಲಿದ್ದೇವೆ ಎಂದು ಮಾರ್ಮಿಕವಾಗಿ ನುಡಿದ ಅವರು, ಪ್ರಜಾಪ್ರಭುತ್ವದಲ್ಲಿ ಒಡೆದು ಆಳುವ ನೀತಿ ಅಪರಾಧವಾಗಿದೆ ಎಂದು ವ್ಯಾಖ್ಯಾನಿಸಿದರು. ಇದೇ ವರ್ಷ ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಸತ್ಯದ ಮೇಲೆ ಸುಳ್ಳಿನ ಸವಾರಿ
ಅತಿಯಾದ ದುರಂಕಾರ ಮತ್ತು ಅಪ್ರಾಮಾಣಿಕತೆಯಿಂದಾಗಿ ನರೇಂದ್ರ ಮೋದಿ ಸರಕಾರ, ಸತ್ಯದ ಮೇಲೆ ಸುಳ್ಳಿನ ಸವಾರಿ ಮಾಡುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ವೇದ್ಯವಾಗಿದೆ ಎಂದು ಸೋನಿಯಾ ಗಾಂಧಿಯವರು ಆಕ್ರೋಶವನ್ನು ಹೊರಹಾಕಿದರು. ಮೋದಿಯವರು ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ, ಬರೀ ಭಾಷಣ ಬಿಗಿಯುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದರು ಸಭಾತ್ಯಾಗ ಮಾಡಿದ್ದರು.