2 ರಾಜ್ಯದ ಚುನಾವಣೆ; ಪ್ರಚಾರದಲ್ಲಿ ಹಿಂದೆ ಬಿದ್ದ ಕಾಂಗ್ರೆಸ್!
ಬೆಂಗಳೂರು, ಅಕ್ಟೋಬರ್ 21 : ಮಹಾರಾಷ್ಟ್ರ, ಹರ್ಯಾಣ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಜಯಸಿಗಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ.
ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆ ಮೈತ್ರಿಕೂಟ 288 ಕ್ಷೇತ್ರಗಳ ಪೈಕಿ ಸುಮಾರು 211 ಕ್ಷೇತ್ರಗಳಲ್ಲಿ ಗೆಲ್ಲಲಿವೆ. ಕಾಂಗ್ರೆಸ್-ಎನ್ಸಿಪಿ 64, ಇತರರು 13 ಸೀಟುಗಳನ್ನು ಪಡೆಯಲಿದ್ದಾರೆ.
ಹರ್ಯಾಣದಲ್ಲಿ 90 ವಿಧಾನಸಭಾ ಕ್ಷೇತ್ರಗಳಿವೆ. ಬಿಜೆಪಿ 66, ಕಾಂಗ್ರೆಸ್ 14, ಇತರರು 10 ಸೀಟುಗಳಲ್ಲಿ ಜಯಗಳಿಸಲಿದ್ದಾರೆ. ಎರಡೂ ರಾಜ್ಯಗಳಲ್ಲಿ ಮತ ಎಣಿಕೆ ಅಕ್ಟೋಬರ್ 24ರಂದು ನಡೆಯಲಿದೆ.

ಎರಡೂ ರಾಜ್ಯಗಳ ವಿಧಾನಸಭೆ ಚುನಾವಣೆ ಪ್ರಚಾರವನ್ನು ಒಮ್ಮೆ ಗಮನಿಸಬೇಕು. ಕಾಂಗ್ರೆಸ್ ಪ್ರಚಾರದ ವೈಖರಿ ನೋಡಿದರೆ ಯುದ್ಧಕ್ಕೆ ಮೊದಲೇ ಶಸ್ತ್ರತ್ಯಾಗ ಮಾಡಿದಂತಿತ್ತು. ಪಕ್ಷದ ಹಿರಿಯ ನಾಯಕರು ಸಹ ಪ್ರಚಾರದ ಬಗ್ಗೆ ಆಸಕ್ತಿ ತೋರಿಸಲಿಲ್ಲ.
ಪ್ರಚಾರದ ವಿಚಾರದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮೊದಲ ಸ್ಥಾನದಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ 18, ಹರ್ಯಾಣದಲ್ಲಿ 7 ಸೇರಿ ಒಟ್ಟು 25 ಸಮಾವೇಶ ಉದ್ದೇಶಿಸಿ ಮತಯಾಚನೆ ಮಾಡಿದ್ದಾರೆ.
ಎಐಸಿಸಿಯ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾದ ಸೋನಿಯಾ ಗಾಂಧಿ ಎರಡೂ ರಾಜ್ಯದಲ್ಲಿ ಒಂದೇ ಒಂದು ಸಮಾವೇಶ ಉದ್ದೇಶಿಸಿ ಮಾತನಾಡಿಲ್ಲ. ಹರ್ಯಾಣದಲ್ಲಿ ಅವರ ಸಮಾವೇಶ ನಿಗದಿಯಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಸೋನಿಯಾ ಬದಲು ರಾಹುಲ್ ಗಾಂಧಿ ಸಮಾವೇಶದಲ್ಲಿ ಪಾಲ್ಗೊಂಡರು.
ರಾಹುಲ್ ಗಾಂಧಿ ಎರಡೂ ರಾಜ್ಯ ಸೇರಿ ನಡೆಸಿದ ಸಮಾವೇಶಗಳು ಕೇವಲ 7. ಅವುಗಳಲ್ಲಿ ಮಹಾರಾಷ್ಟ್ರದಲ್ಲಿ5, ಹರ್ಯಾಣದಲ್ಲಿ 2. ಒಟ್ಟಾರೆ ಪ್ರಚಾರದ ವೈಖರಿ ನೋಡಿದರೆ ಕಾಂಗ್ರೆಸ್ ಚುನಾವಣೆ ಮೇಲೆ ಆಸಕ್ತಿ ಕಳೆದುಕೊಂಡ ಹಾಗಿತ್ತು.
ಸೋನಿಯಾ ಗಾಂಧಿ ಎಐಸಿಸಿ ಅಧ್ಯಕ್ಷೆಯಾಗಿ ಪುನರಾಯ್ಕೆಯಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. 2019ರ ಲೋಕಸಭಾ ಚುನಾವಣೆ ಸಮಯದಲ್ಲಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಪ್ರಿಯಾಂಕಾ ವಾದ್ರಾ ಎರಡೂ ರಾಜ್ಯದಲ್ಲಿ ಪ್ರಚಾರಕ್ಕೆ ಬರಲೇ ಇಲ್ಲ.












Click it and Unblock the Notifications