Biparjoy: 1977ರ ನಂತರ ಅತ್ಯಧಿಕ ಜೀವಿತಾವಧಿಯ ಚಂಡಮಾರುತ ಇದು: ಐಎಂಡಿ
ಬೆಂಗಳೂರು, ಜೂನ್ 26: ತಿಂಗಳ ಆರಂಭದಲ್ಲಿ ಅರಬ್ಬಿ ಸಮುದ್ರದಲ್ಲಿ ಅಬ್ಬರಿಸಿದ್ದ 'ಬಿಪರ್ಜಾಯ್ ಚಂಡಮಾರುತ' ಜೀವಿತಾವಧಿ ಕುರಿತು ಮಹತ್ವದ ಮಾಹಿತಿಯೊಂದನ್ನು ಭಾರತೀಯ ಹವಾಮಾನ ಇಲಾಖೆ (IMD) ಬಹಿರಂಗಪಡಿಸಿದೆ.
ಜೂನ್ ಆರಂಭದಲ್ಲಿ ಗುಜರಾತ್ ರಾಜ್ಯ, ಅರಬ್ಬಿ ಸಮುದ್ರದ ಕರಾವಳಿ ಭಾಗದ ಪ್ರದೇಶಗಳಲ್ಲಿ ಅಪಾರ ಹಾನಿಗೆ ಕಾರಣವಾದ ಬಿಪರ್ಜೋಯ್ ಚಂಡಮಾರುತ (Biparjoy Cyclone) 1977ರ ನಂತರದಲ್ಲಿ ಹಿಂದೂ ಮಹಾಸಾಗರದಲ್ಲಿ ಅತೀ ಹೆಚ್ಚು ಅವಧಿಯವರೆಗೆ ಕಂಡು ಬಂದ ಚಂಡಮಾರುತ ಆಗಿದೆ. ಈ ಅಂಶಗಳನ್ನು ಐಎಂಡಿ ಅಧಿಕೃತಪಡಿಸಿದೆ.

ಅರಬ್ಬಿ ಸಮುದ್ರದ ಮೇಲೆ ಸೃಷ್ಟಿಯಾಗಿದ್ದ ಈ ವರ್ಷದ ಮೊದಲ ಚಂಡಮಾರುತ ಈ ಬಿಪರ್ಜಾಯ್. ಜೂನ್ 6 ರಂದು ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ ಹುಟ್ಟಿಕೊಂಡ ಈ ಸೈಕ್ಲೋನ್ ಜೂನ್ 15 ರಂದು ಸೌರಾಷ್ಟ್ರ ಮತ್ತು ಕಚ್ ಮೇಲೆ ಭೂಮಿಗೆ ಅಪ್ಪಳಿಸಿತ್ತು. ಬಳಿಕ ಜೂನ್ 18 ರಂದು ದುರ್ಬಲಗೊಂಡಿತ್ತು.
13 ದಿನ 03 ಗಂಟೆ ಸಕ್ರಿಯವಾಗಿದ್ದ ಬಿಪರ್ಜಾಯ್
ಈ ಚಂಡಮಾರುತ ಒಟ್ಟು 13 ದಿನಗಳು ಮತ್ತು ಮೂರು ಗಂಟೆಗಳ ಜೀವಿತಾವಧಿ ಹೊಂದಿತ್ತು. ಅರೇಬಿಯನ್ ಸಮುದ್ರದ ಮೇಲೆ ಆರು ದಿನಗಳು ಮತ್ತು ಮೂರು ಗಂಟೆಗಳ ತೀವ್ರ ಚಂಡಮಾರುತದ ಸರಾಸರಿ ಜೀವಿತಾವಧಿಗಿಂತ ಎರಡು ಪಟ್ಟು ಹೆಚ್ಚಿನ ಅವಧಿ ಈ ಬಿಪರ್ಜಾಯ್ನದ್ದಾಗಿತ್ತು.
ಉತ್ತರ ಹಿಂದೂ ಮಹಾಸಾಗರದ ಮೇಲೆ ದೀರ್ಘಾವಧಿಯ ಚಂಡಮಾರುತವು ಬಂಗಾಳಕೊಲ್ಲಿಯಲ್ಲಿ ಅಭಿವೃದ್ಧಿ ಹೊಂದಿತ್ತು. ಅದನ್ನ ಬಿಟ್ಟರೆ ಅರಬ್ಬಿ ಸಮುದ್ರದ ಮೇಲೆ 1977 ರಲ್ಲಿ ನವೆಂಬರ್ 8-23 ಮಧ್ಯೆ ಒಟ್ಟು 14 ದಿನ, ಆರು ಗಂಟೆಗಳ ಜೀವಿತಾವಧಿಯ ಚಂಡು ಮಾರುತ ಸೃಷ್ಟಿಯಾಗಿತ್ತು. ಅದಾದ ನಂತರ ಬಿಪರ್ಜಾಯ್ ದೀರ್ಘಾವಧಿಯ ಚಂಡಮಾರುತವಾಗಿದೆ.

ಇತ್ತೀಚಿನ ವರ್ಷಗಳ ಅಂಕಿ ಅಂಶ ನೋಡುವುದಾದರೆ, ಅರೇಬಿಯನ್ ಸಮುದ್ರದ ಮೇಲಿನ ಅತ್ಯಂತ ತೀವ್ರವಾದ ಚಂಡಮಾರುತದ ಕ್ಯಾರ್ (ಅಕ್ಟೋಬರ್ 2019) ಒಂಬತ್ತು ದಿನಗಳು ಮತ್ತು 15 ಗಂಟೆಗಳ ಜೀವಿತಾವಧಿ ಹೊಂದಿತ್ತು. ಅದೇ ರೀತಿ ಬಂಗಾಳ ಕೊಲ್ಲಿಯಲ್ಲಿ ಸಮುದ್ರದ ಮೇಲೆ 9 ದಿನಗಳ ಜೀವಿತಾವಧಿಯ ಚಂಡಮಾರುತದ ಗಜ (ನವೆಂಬರ್ 2018) ನಿರ್ಮಾಣಗೊಂಡಿತ್ತು.
ಒಟ್ಟು 2,525 ಕಿಲೋ ಮೀಟರ್ ಸಾಗಿದ್ದ ಬಿಪರ್ಜಾಯತ್ ತನ್ನ ಸಂಚಾರ ವೇಳೆ ಒಂಬತ್ತು ಬಾರಿ ಧಿಕ್ಕು ಬದಲಿಸಿತ್ತು.
ಹೀಗಾಗಿ ಇದು ಹವಾಮಾನಶಾಸ್ತ್ರಜ್ಞರ ಊಹೆಗೂ ನಿಲುಕುವುದು ಸವಾಲಾಗಿ ಪರಿಣಮಿಸಿತ್ತು. ಜೂನ್ 11 ರಂದು ಅತ್ಯಂತ ತೀವ್ರವಾದ ಸೈಕ್ಲೋನಿಕ್ ಚಂಡಮಾರುತವಾಗಿ ತೀವ್ರಗೊಂಡಿತ್ತು. ಆದರೆ ನಾಲ್ಕು ದಿನಗಳ ನಂತರ ಭೂಮಿಗೆ ಅಪ್ಪಳಿಸಿ ಭಾರಿ ಮಳೆ ಸುರಿಯಲು ಕಾರಣವಾಗಿತ್ತು.
ಕೋಟಿಗಟ್ಟಲೇ ಸೈಕ್ಲೋನ್ ಎಚ್ಚರಿಕೆ SMS
ಅರಬ್ಬಿ ಸಮುದ್ರಕ್ಕೆ ಹೊಂದಿಕಜೊಂಡಿರುವ ಪಶ್ಚಿಮ ಕರಾವಳಿಯ ವಿವಿಧ ರಾಜ್ಯಗಳ ಕರಾವಳಿ ಭಾಗಕ್ಕೆ ಬಿಪರ್ಜಾಯ್ ಪ್ರಭಾವ ಉಂಟಾಯಿತು. ಈ ಸಂಬಂಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅಲರ್ಟ್ ಆಗಿದ್ದಲ್ಲದೇ, ಐಎಂಡಿ ಅಗತ್ಯ ಎಚ್ಚರಿಕೆ ಸಹ ನೀಡಿತ್ತು.
ಪ್ರೋಟೊಕಾಲ್ ಆಧಾರದಲ್ಲಿ 32.67 ಕೋಟಿ ಎಚ್ಚರಿಕೆ ಸಂದೇಶ, ಸಾಗರ ಮಾಹಿತಿ ಸೇವೆಗಳ ಭಾರತೀಯ ರಾಷ್ಟ್ರೀಯ ಕೇಂದ್ರ (INCOIS) ಮೂಲಕ ಮೀನುಗಾರರಿಗೆ 5.63 ಕೋಟಿ ಮೊಬೈಲ್ ಎಚ್ಚರಿಕೆ ಸಂದೇಶಗಳು ರವಾನೆಯಾಗಿವೆ. ನೋಂದಾಯಿತ ಬಳಕೆದಾರರಿಗೆ ಮುಖ್ಯವಾಗಿ ಕರಾವಳಿ ರಾಜ್ಯಗಳು ಮತ್ತು ಕೇಂದ್ರ ಮತ್ತು ರಾಜ್ಯ ಮಟ್ಟದ ವಿಪತ್ತು ನಿರ್ವಾಹಕರಿಗೆ 2.7 ಲಕ್ಷ SMS ಗಳನ್ನು ಕಳುಹಿಸಲಾಗಿದೆ.












Click it and Unblock the Notifications