ಶ್ಯಾಮ್ ಪ್ರಸಾದ್ ಮುಖರ್ಜಿ ಪುಣ್ಯತಿಥಿ: ಬಿಜೆಪಿಯಿಂದ ಶ್ರದ್ಧಾಂಜಲಿ
ನವದೆಹಲಿ, ಜೂನ್ 23: ಭಾರತೀಯ ಜನಸಂಘವನ್ನು ಸ್ಥಾಪಿಸಿದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ನಿಧನರಾಗಿ ಇಂದಿಗೆ 65 ವರ್ಷ. ಅವರು ನಿಧನರಾದ ದಿನವನ್ನು(ಜೂನ್ 23) ಬಿಜೆಪಿ ನಾಯಕರು ಬಲಿದಾನ ದಿನವನ್ನಾಗಿ ಆಚರಿಸಿ, ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವುದು ವಾಡಿಕೆ.
ಈ ಬಾರಿಯೂ ಬಿಜೆಪಿಯ ಹಲವು ನಾಯಕರು ಮುಖರ್ಜಿ ಅವರ ಪುಣ್ಯತಿಥಿಯನ್ನು ಸ್ಮರಿಸಿದ್ದಾರೆ. ಭಾರತೀಯ ಜನಸಂಘವೇ ನಂತರ ಭಾರತೀಯ ಜನತಾಪಕ್ಷ(ಬಿಜೆಪಿ)ವಾಗಿ ಬದಲಾಗಿ, ಇದೀಗ ದೇಶದ ಬಹುಪಾಲು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
'ಮಿಷನ್-150' ನಂತರ 'ಮಿಷನ್-300' ಬಿಜೆಪಿಯ ಹೊಸ ಗುರಿ
1901 ಜುಲೈ 06 ರಂದು ಕೋಲ್ಕತ್ತದ ಬಂಗಾಳಿ ಕುಟುಂಬದಲ್ಲಿ ಜನಿಸಿದ ಮುಖರ್ಜಿ ಅವರ ತಂದೆ, ಅಶುತೋಶ್ ಮುಖರ್ಜಿ ಮತ್ತು ತಾಯಿ ಜೊಗಮಾಯಾ ದೇವಿ ಮುಖರ್ಜಿ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲೂ ತಮ್ಮ ಛಾಪು ಮೂಡಿಸಿದ ಮುಖರ್ಜಿ, ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ದೊಂದಿಗೆ ಗುರುತಿಸಿಕೊಂಡವರು.
1953, ಜೂನ್ 23 ರಂದು ಅವರು ಹೃದಯಾಘಾತದಿಂದ ಮೃತರಾದರು ಎಂದು ಘೋಷಿಸಲಾಗಿತ್ತಾದರೂ, ಅವರ ಸಾವಿನ ಕುರಿತು ಇಂದಿಗೂ ಅನುಮಾನವಿದೆ.
|
ಮಹಾನ್ ರಾಷ್ಟ್ರೀಯವಾದಿ
ಮಹಾನ್ ರಾಷ್ಟ್ರೀಯವಾದಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ ಅವರ ಪುಣ್ಯತಿಥಿಯಂದು ನನ್ನ ನಮನಗಳು. ಅವರು ಈ ದೇಶದ ಅಭಿವೃದ್ಧಿಗಾಗಿ ಹೋರಾಡಿದ ಅಪ್ರತಿಮ ಸಂಸದೀಯಪಟು, ದ್ರಷ್ಟಾರ, ಶಿಕ್ಷಣ ತಜ್ಞ ಮತ್ತು ಸಮಾಜ ಸುಧಾರಕ. ಎಂದಿದ್ದಾರೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು.
|
ಅವರ ಆದರ್ಶ ನಮಗೆ ದಾರಿದೀಪವಾಗಲಿ
ಮಹಾನ್ ರಾಷ್ಟ್ರೀಯವಾದಿ, ರಾಷ್ಟ್ರ ಶಿಲ್ಪಿ, ಸಂಸದೀಯಪಟು ಮತ್ತು ನಮ್ಮೆಲ್ಲರ ಮಾರ್ಗದರ್ಶಿ, ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿಯಂದು ನನ್ನ ನಮನಗಳು. ಈ ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುವ ಅವರ ಆಸೆ ಈಡೇರಲಿ, ಅವರ ಆದರ್ಶ ಕೋಟ್ಯಂತರ ಜನರಿಗೆ ದಾರಿದೀಪವಾಗಲಿ ಎಂದು ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸಚಿವ ಪೊನ್ ರಾಧಾಕೃಷ್ಣನ್ ಪ್ರಣಾಮ ಸಲ್ಲಿಸಿದ್ದಾರೆ.
|
ಹೃದಯಪೂರ್ವಕ ಶ್ರದ್ಧಾಂಜಲಿ
ಈ ದೇಶದ ಹಿತಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ ಈ ಸಂದರ್ಭದಲ್ಲಿ ನಾವು ತಲೆಬಾಗಿ ನಮಿಸೋಣ. ಅವರ ಪುಣ್ಯತಿಥಿಯಂದು ಅವರ ಬಲಿದಾನವನ್ನು ನೆನೆದು ಹೃದಯಪೂರ್ವಕ ಶ್ರದ್ಧಾಂಜಲಿ ಅರ್ಪಿಸುತ್ತೇನೆ ಎಂದಿದ್ದಾರೆ ಅನಂತಕುಮಾರ್ ಹೆಗಡೆ.
|
ಕೋಟ್ಯಂತರ ಜನರಿಗೆ ಸ್ಫೂರ್ತಿ
ಬಲಿದಾನ ದಿನದಂದು ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ತ್ಯಾಗವನ್ನು ನೆನೆಯೋಣ. ಅವರ ತ್ಯಾಗ ಈ ದೇಶದ ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗಲಿ ಎಂದಿದ್ದಾರೆ ಸಂಸದೆ ಶೋಭಾ ಕರಂದ್ಲಾಜೆ.
|
ಕೊನೆ ಉಸಿರಿರುವವರೆಗೂ ಸೇವೆ
ನಿಜವಾದ ರಾಷ್ಟ್ರವಾದಿ, ಶಿಕ್ಷಣ ತಜ್ಞರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ತಮ್ಮ ಕೊನೆಯ ಉಸಿರಿರುವವರೆಗೂ ಭಾರತ ಮಾತೆಯ ಸೇವೆ ಮಾಡಿದವರು. ಭಾರತ ಜನಸಂಘದ ಸಂಸ್ಥಾಪಕರಾದ ಅವರನ್ನು ಅವರ ಪುಣ್ಯತಿಥಿಯಂದು ನೆನಪಿಸಿಕೊಳ್ಳುತ್ತೇನೆ ಎಂದಿದ್ದಾರೆ ಚಿಕ್ಕಮಗಳೂರು ಶಾಸಕ ಸಿಟಿ ರವಿ.