Bengaluru: ಬೇಸಿಗೆಯ ಉರಿ ಬಿಸಿಲಿಗೆ ಜನ ಹೈರಾಣ: ಚರ್ಮ, ಕಣ್ಣಿನ ಸೋಂಕಿನಿಂದ ಆಸ್ಪತ್ರೆ ಸೇರುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ
ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತಾಪಮಾನಕ್ಕೆ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಉಷ್ಣಾಂಶ ಹೆಚ್ಚಳದಿಂದಾಗಿ ಕೇವಲ ಸೆಕೆ ಮಾತ್ರವಲ್ಲದೆ, ವಿವಿಧ ರೀತಿಯ ಅನಾರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಇದರ ಪರಿಣಾಮವಾಗಿ, ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಹೊರರೋಗಿಗಳ (OPD) ಸಂಖ್ಯೆಯಲ್ಲಿ ಶೇಕಡಾ 20ರಷ್ಟು ಹೆಚ್ಚಳವಾಗಿದೆ. ಬೆವರುಗುಳ್ಳೆ, ಚರ್ಮದ ಅಲರ್ಜಿ, ಕಣ್ಣಿನ ಸೋಂಕು ಹಾಗೂ ನಿರ್ಜಲೀಕರಣದಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆ.
ಕಳೆದ ಒಂದು ವಾರದ ಅಂಕಿ-ಅಂಶಗಳನ್ನು ಗಮನಿಸಿದರೆ, ನಗರದಲ್ಲಿ ಗರಿಷ್ಠ ತಾಪಮಾನವು 36 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ. ಮಧ್ಯಾಹ್ನದ ಬಿಸಿಲಿನ ತಾಪ ತಾಳಲಾರದೆ ಹೊರಗೆ ಓಡಾಡುವುದು ಸಾಧ್ಯವಿಲ್ಲದಂತಾಗಿದೆ. ಈ ವಿಪರೀತ ಬಿಸಿಲಿನಿಂದಾಗಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಜ್ವರ, ತಲೆನೋವು, ಸ್ನಾಯು ಸೆಳೆತ, ಸುಸ್ತು, ವಾಂತಿ-ಭೇದಿಯಂತಹ ಲಕ್ಷಣಗಳು ಎಲ್ಲೆಡೆ ನೋಡಲು ಸಿಗುತ್ತಿದೆ.

ಕಣ್ಣಿನ ಊತ ಹಾಗೂ ಚರ್ಮದ ಸೋಂಕು
ಅತಿಯಾದ ಬಿಸಿಲಿನಿಂದಾಗಿ ಕಣ್ಣುರಿ, ಕಣ್ಣಿನಲ್ಲಿ ನೀರು ಬರುವುದು, ತುರಿಕೆ ಹಾಗೂ ಕಣ್ಣು ಕೆಂಪಾಗುವಂತಹ ಸಮಸ್ಯೆಗಳು ಹೆಚ್ಚಾಗಿವೆ. ಮಿಂಟೋ, ನಾರಾಯಣ ನೇತ್ರಾಲಯ, ಶಂಕರ ಕಣ್ಣಿನ ಆಸ್ಪತ್ರೆ ಸೇರಿದಂತೆ ನಗರದ ಪ್ರಮುಖ ಕಣ್ಣಿನ ಆಸ್ಪತ್ರೆಗಳಲ್ಲಿ ರೋಗಿಗಳ ದಟ್ಟಣೆ ಶೇ 10ರಷ್ಟು ಹೆಚ್ಚಾಗಿದೆ.
ಇನ್ನು, ಚರ್ಮರೋಗ ವಿಭಾಗದಲ್ಲೂ ರೋಗಿಗಳ ಸಂಖ್ಯೆ ಮಿತಿಮೀರಿದೆ. "ಬಿಸಿಲ ಧಗೆಗೆ ಬೆವರುಗುಳ್ಳೆ, ಮೊಡವೆ, ಶಿಲೀಂಧ್ರ (Fungal) ಸೋಂಕು, ಬೊಬ್ಬೆಗಳು ಸೇರಿ ವಿವಿಧ ಚರ್ಮ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಮಕ್ಕಳಲ್ಲಿ ಚಿಕನ್ ಪಾಕ್ಸ್ ಪ್ರಕರಣಗಳೂ ದೃಢಪಡುತ್ತಿವೆ" ಎಂದು ಚರ್ಮರೋಗ ತಜ್ಞರು ತಿಳಿಸಿದ್ದಾರೆ.
ನಿರ್ಜಲೀಕರಣದ ಬಗ್ಗೆ ಇರಲಿ ಎಚ್ಚರ
"ತಾಪಮಾನ ಏರಿಕೆಯಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ನಿರ್ಜಲೀಕರಣ ಮತ್ತು ಜಠರ-ಕರುಳಿನ ಸಮಸ್ಯೆಗಳು ಹೆಚ್ಚಾಗುತ್ತಿವೆ. ಅಧಿಕ ಜ್ವರ, ವಾಂತಿಯಂತಹ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ತಕ್ಷಣವೇ ವೈದ್ಯರ ಸಹಾಯ ಪಡೆಯಬೇಕು" ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಬೇಸಿಗೆಯ ಅನಾರೋಗ್ಯ ತಡೆಯಲು ವೈದ್ಯರ ಪ್ರಮುಖ ಸಲಹೆಗಳು
ಬಿಸಿಲಿನಿಂದ ಪಾರಾಗಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ವೈದ್ಯರು ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲು ಸೂಚಿಸಿದ್ದಾರೆ:
1. ಬಾಯಾರಿಕೆ ಇಲ್ಲದಿದ್ದರೂ ಆಗಾಗ ಸಾಕಷ್ಟು ನೀರು ಕುಡಿಯುತ್ತಿರಬೇಕು.
2. ರಸ್ತೆ ಬದಿಯಲ್ಲಿ ಮಾರಾಟ ಮಾಡುವ ತೆರೆದಿಟ್ಟ ಆಹಾರ ಹಾಗೂ ಕತ್ತರಿಸಿದ ಹಣ್ಣುಗಳನ್ನು ಸೇವಿಸಬಾರದು.
3. ಮಜ್ಜಿಗೆ, ಎಳನೀರು, ಹಣ್ಣಿನ ರಸದಂತಹ ದ್ರವರೂಪದ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು.
4. ಕಾಯಿಸಿ, ಆರಿಸಿದ ಶುದ್ಧವಾದ ನೀರನ್ನೇ ಕುಡಿಯುವುದು ಸೂಕ್ತ.
5. ಆಹಾರ ಸೇವಿಸುವ ಮುನ್ನ ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು.
6. ತಾಜಾ ಹಾಗೂ ಪೌಷ್ಟಿಕಾಂಶಯುಕ್ತ ಮನೆಯಲ್ಲೇ ತಯಾರಿಸಿದ ಆಹಾರಕ್ಕೆ ಆದ್ಯತೆ ನೀಡಬೇಕು.
7. ಬಿಸಿಲಿಗೆ ಹೋಗುವಾಗ ಸಡಿಲವಾದ ಹಾಗೂ ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಬೇಕು.
ಬೇಸಿಗೆಯ ಸಮಯದಲ್ಲಿ ಆರೋಗ್ಯವೇ ನಮ್ಮ ಮೊದಲ ಆದ್ಯತೆಯಾಗಬೇಕು. ಬಿಸಿಲಿಗೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವ ಮೂಲಕ ರೋಗಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಬಹುದು.












Click it and Unblock the Notifications