ರಫೇಲ್ ಡೀಲ್ ಬಗ್ಗೆ ತನಿಖೆಗೆ ಶಿವಸೇನಾ ಕೂಡಾ ಆಗ್ರಹ
ನವದೆಹಲಿ, ಜನವರಿ 02: ಲೋಕಸಭೆಯಲ್ಲಿ ಬುಧವಾರದಂದು ರಫೇಲ್ ಒಪ್ಪಂದ ಕುರಿತಂತೆ ಭಾರಿ ಚರ್ಚೆ, ಗದ್ದಲ ಉಂಟು ಮಾಡುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಈ ಒಪ್ಪಂದದ ಸತ್ಯಾಸತ್ಯತೆಯನ್ನು ಬಹಿರಂಗ ಪಡಿಸಬೇಕು ಇದಕ್ಕಾಗಿ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ
ವಿಪಕ್ಷಗಳ ಆಗ್ರಹಕ್ಕೆ ತಕ್ಕ ಉತ್ತರ ನೀಡುತ್ತಿದ್ದ ಬಿಜೆಪಿಗೆ ಮಿತ್ರಪಕ್ಷ ಶಿವಸೇನೆ ಆಘಾತ ನೀಡಿತು. ವಿಪಕ್ಷಗಳ ಬೇಡಿಕೆಗೆ ಶಿವಸೇನೆ ಕೂಡಾ ದನಿಗೂಡಿಸಿತು. ರಫೆಲ್ ಯುದ್ಧ ವಿಮಾನ ಉತ್ತಮವಾಗಿದೆ, ಆದರೆ, ಒಪ್ಪಂದ ಸರಿಯಿಲ್ಲ ಎಂದು ಶಿವಸೇನೆ ಹೇಳಿದೆ.
ರಫೆಲ್ ಡೀಲ್ ಬಗ್ಗೆ ನಡೆದ ಬಿರುಸಿನ ಚರ್ಚೆಯಲ್ಲಿ ಪಾಲ್ಗೊಂಡ ಶಿವಸೇನಾ ಮುಖಂಡ ಅರವಿಂದ್ ಸಾವಂತ್ ಅವರು ಮಾತನಾಡಿ, ಸರ್ಕಾರವು ಈ ಒಪ್ಪಂದ ಪಾರದರ್ಶಕವಾಗಿದೆ ಎಂದು ಹೇಳುತ್ತಿದೆ. ಹಾಗಿದ್ದರೆ, ಜೆಪಿಸಿಗೆ ಕೊಡಲು ಯಾಕೆ ಹಿಂದೇಟು ಹಾಕುತ್ತಿದೆ ಎಂದು ಪ್ರಶ್ನಿಸಿದರು.

ಜಂಟಿ ಸಂಸದೀಯ ತನಿಖೆ ಬಗ್ಗೆ ಬಿಜೆಪಿಗೆ ಭಯವೇಕೆ? ಸರ್ಕಾರವು ಭ್ರಷ್ಟವಾಗಿಲ್ಲವೆಂದರೆ ಯಾರಿಗೆ ಹೆದರುತ್ತಿದ್ದಾರೆ. ಸತ್ಯ ಹೊರಕ್ಕೆ ಬರಲಿ ಎಂದು ಅರವಿಂದ್ ಹೇಳಿದರು.
ಎನ್ಡಿಎ ಮಿತ್ರಪಕ್ಷವಾಗಿರುವ ಶಿವಸೇನಾ ಇತ್ತೀಚೆಗೆ ನರೇಂದ್ರ ಮೋದಿ ಅವರ ಸರ್ಕಾರದ ವಿರುದ್ಧ ತನ್ನ ದನಿಯೆತ್ತುತ್ತಾ ಬಂದಿದೆ. ಬೋಫೋರ್ಸ್ ಪಿರಂಗಿ ಉತ್ತಮವಾಗಿದೆ ಆದರೆ, ಡೀಲ್ ಮಾಡುವಾಗ ಅವ್ಯವಹಾರ ನಡೆದಿದೆ ಎನ್ನಲಾಯಿತು, ರಾಜೀವ್ ಗಾಂಧಿ ಸರ್ಕಾರದ ಮೇಲೆ ಕಪ್ಪುಚುಕ್ಕೆ ಬಿದ್ದಿತು.
ಈಗ ಇದೇ ರೀತಿ ರಫೆಲ್ ಬಗ್ಗೆ ಒಳ್ಳೆ ಮಾತುಗಳಿವೆ, ಅರುಣ್ ಜೇಟ್ಲಿ ಅವರ ಮಾತುಗಳನ್ನು ಕೇಳಿದರೆ ಇನ್ನೂ ಗೊಂದಲವಾಗುತ್ತದೆ. ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಜೆಪಿಸಿ ತನಿಖೆ ನಡೆಸಬಾರದು ಎಂದು ಹೇಳಿಲ್ಲ. ಅಲ್ಲದೆ, ಬರೀ ಕಾಗದ ಮೇಲಿರುವ ಕಂಪನಿ(ಅನಿಲ್ ಅಂಬಾನಿ ಸಂಸ್ಥೆ) ಕೂಡಾ ಈ ಒಪ್ಪಂದದ ಭಾಗವಾಗಿದ್ದು ಹೇಗೆ? ಎಂಬುದು ತಿಳಿಯಬೇಕಿದೆ ಎಂದರು.












Click it and Unblock the Notifications