ಶಶಿ ತರೂರ್: ಆನ್ಲೈನಿನಲ್ಲಿ ಉದಯಿಸುತ್ತಿರುವ ಪ್ರಧಾನಮಂತ್ರಿ!
ಮಾಜಿ ಕೇಂದ್ರ ಸಚಿವ ಹಾಗೂ ತಿರುವನಂತಪುರಂ ಸಂಸದ ಶಶಿ ತರೂರ್ 2019ರಲ್ಲಿ ಯುಪಿಎ ಪ್ರಧಾನಿ ಮಂತ್ರಿ ಅಭ್ಯರ್ಥಿಯಾಗಬೇಕು ಎಂದು ಆಂದೋಲನವೊಂದು ಆರಂಭವಾಗಿದೆ.
ಬೆಂಗಳೂರು, ಮಾರ್ಚ್ 17: ಮಾಜಿ ಕೇಂದ್ರ ಸಚಿವ ಹಾಗೂ ತಿರುವನಂತಪುರಂ ಸಂಸದ ಶಶಿ ತರೂರ್ 2019ರಲ್ಲಿ ಯುಪಿಎ ಪ್ರಧಾನಿ ಮಂತ್ರಿ ಅಭ್ಯರ್ಥಿಯಾಗಬೇಕು ಎಂದು ಆಂದೋಲನವೊಂದು ಆರಂಭವಾಗಿದೆ.
ವಿಶೇಷ ಎಂದರೆ ಈ ಆಂದೋಲನ ಸಾಮಾಜಿಕ ಜಾಲತಾಣದಲ್ಲಿಈಗ ಸುದ್ದಿ - ಗದ್ದಲ ಮಾಡುತ್ತಿದೆ. 'ಚೇಂಜ್ ಡಾಟ್ ಆರ್ಗ್' ನಲ್ಲಿ ಪೌಲ್ ತ್ರಿವೆಂಡ್ರಂ ಎಂಬುವವರು ಈ ಕುರಿತು ಪಿಟಿಷನ್ ಹಾಕಿದ್ದಾರೆ.[ಖರ್ಗೆಗೆ ಕೊಕ್, ಚುನಾವಣೆಯಲ್ಲಿ ಮುಗ್ಗರಿಸಿದ ರಾಹುಲ್ ವಿಪಕ್ಷ ನಾಯಕ!]
ಆದರೆ "ನಾನು ಈ ಪಿಟಿಷನಿಗೆ ಬೆಂಬಲವನ್ನೂ ಸೂಚಿಸುತ್ತಿಲ್ಲ, ಅನುಮೋದನೆಯನ್ನೂ ನೀಡುತ್ತಿಲ್ಲ," ಎಂದು ಈಗಾಗಲೇ ಶಶಿ ತರೂರ್ ಫೇಸ್ಬುಕ್ಕಿನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಆಂದೋಲನಕ್ಕೆ 16,000 ಸಹಿ
2019ರಲ್ಲಿ ಶಶಿ ತರೂರ್ ಕಾಂಗ್ರೆಸಿನ ಪ್ರಧಾನ ಮಂತ್ರಿ ಅಬ್ಯರ್ಥಿಯಾಗಬೇಕು ಎಂಬ ಆಂದೋಲನ ಕೆಲ ದಿನಗಳ ಹಿಂದೆ ಆರಂಭವಾಗಿದೆ. ಈ ಸುದ್ದಿ ಬರೆಯುವ ಹೊತ್ತಿಗೆ ಆಂದೋಲನಕ್ಕೆ ಅಂತರ್ಜಾಲದಲ್ಲಿ 16,000 ಸಹಿಗಳು ಬಿದ್ದಿವೆ.

ಬೆಂಬಲವೂ ಇಲ್ಲ ಅನುಮೋದನೆಯೂ ಇಲ್ಲ
ಈ ಆಂದೋಲನದ ಕುರಿತು ಶುಕ್ರವಾರ ಶಶಿ ತರೂರ್ ತಮ್ಮ ಫೇಸ್ಬುಕ್ಕಿನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಈ ಆಂದೋಲನ ನನ್ನ ಗಮನಕ್ಕೆ ಬಂದಿದೆ. ನನಗೆ ಈ ಆಂದೋಲನದಿಂದ ಅಚ್ಚರಿಯಾಗಿದೆ. 'ಕಾಂಗ್ರೆಸಿನಲ್ಲಿ ಈಗಾಗಲೇ ನಾಯಕರು ಯಾರೆಂದು ನಿಶ್ಚಯವಾಗಿದೆ. ಈ ಬಗ್ಗೆ ಯಾವುದೇ ಚರ್ಚೆ ಇಲ್ಲ,' ಎಂದು ಹೇಳಿದ್ದಾರೆ.[ಅನಾರೋಗ್ಯ ಪೀಡಿತ ಅಮ್ಮನಿಗಾಗಿ ರಾಹುಲ್ ವಿದೇಶಕ್ಕೆ]

ನನ್ನ ಮೇಲೆ ಇಟ್ಟ ನಂಬಿಕೆಗೆ ಧನ್ಯವಾದಗಳು
"ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಈ ಪಿಟಿಷನ್ ಹಾಕಿದವರಿಗೆ ನಾನು ಧನ್ಯವಾದ ಹೇಳುತ್ತೇನೆ. ಇದಕ್ಕೆ ಸಹಿ ಹಾಕಿದವರಿಗೂ ಧನ್ಯವಾದಗಳನ್ನು ಹೇಳುತ್ತೇನೆ. ಆದರೆ ನಾನು ಈ ಆಂದೋಲನಕ್ಕೆ ಬೆಂಬಲ ನೀಡುತ್ತಿಲ್ಲ," ಎಂದು ತರೂರ್ ಹೇಳಿದ್ದಾರೆ.
"ನಾನು ಕಾಂಗ್ರೆಸ್ ಪಕ್ಷದ ಸಂಸತ್ ಸದಸ್ಯ ಅಷ್ಟೆ. ಇದಕ್ಕಿಂತ ಹೆಚ್ಚೇನೂ ಇಲ್ಲ. ಕಾಂಗ್ರೆಸಿನಲ್ಲಿ ನಾಯಕತ್ವ ಈಗಾಗಲೇ ನಿಶ್ಚಯವಾಗಿದೆ. ಇದರಲ್ಲಿ ಚರ್ಚೆಗೆ ಅವಕಾಶ ಇಲ್ಲ. ಒಂದೊಮ್ಮೆ ಬದಲಾವಣೆ ಬೇಕಾದಾಗ ಕಾಂಗ್ರೆಸಿನ ಸಂಪ್ರದಾಯದಂತೆ ಅವರೇ ಬದಲಾವಣೆ ಮಾಡುತ್ತಾರೆ," ಎಂದು ಶಶಿ ತರೂರ್ ಹೇಳಿದ್ದಾರೆ. ಜತೆಗೆ ಪಿಟಿಷನ್ ಹಿಂದಕ್ಕೆ ತೆಗೆದುಕೊಳ್ಳುವಂತೆ ಅವರು ಮನವಿ ಮಾಡಿಕೊಡಿದ್ದಾರೆ.

ಆಂದೋಲನದ ಸೂತ್ರದಾರ
"ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಆಳವಾದ ಜ್ಞಾನ ಇದ್ದು ಅರ್ಹತೆ ಇರುವ ವ್ಯಕ್ತಿ ಶಶಿ ತರೂರ್. ಭಾರತೀಯರೊಂದಿಗೆ, ವಿಶ್ವದ ನಾಯಕರೊಂದಿಗೂ ಏಕಕಾಲದಲ್ಲಿ ಸಂಪರ್ಕ ಇಟ್ಟುಕೊಳ್ಲುವ ಸಾಮರ್ಥ್ಯ ಅವರಿಗಿದೆ. ಹೀಗಾಗಿ ನಾವು 2019ರಲ್ಲಿ ಡಾ. ಶಶಿ ತರೂರ್ ಯುಪಿಎ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಬೇಕು ಎಂದು ಆಂದೋಲನ ಆರಂಭಿಸಿದ್ದೇವೆ," ಎಂದು 'ಚೇಂಜ್ ಡಾಟ್ ಆರ್ಗ್' ನಲ್ಲಿ ಪಿಟಿಷನ್ ಹಾಕಿರುವ ತಿರುವನಂತಪುರಂನ ಪೌಲ್ ತ್ರಿವೆಂಡ್ರಂ ಹೇಳಿದ್ದಾರೆ.

ನಾಯಕತ್ವದಲ್ಲಿ ಬದಲಾವಣೆ
ಹಲವು ಚುನಾವಣೆಗಳ ಸೋಲಿನ ನಂತರ ಕಾಂಗ್ರೆಸ್ ನಾಯಕತ್ವದಲ್ಲಿ ಬದಲಾವಣೆಗಳಾಗಬೇಕು ಎಂಬ ಕೂಗು ಬಲವಾಗಿ ಕೇಳಿ ಬರುತ್ತಿದೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ಮಣ್ಣು ಮುಕ್ಕಿದ ನಂತರ ಕಾಂಗ್ರೆಸ್ ನ ಹೈಕಮಾಂಡಿನಲ್ಲಿ ಬದಲಾವಣೆಗಳಾಗಬೇಕು ಎಂಬ ಒತ್ತಡ ದಿನೇ ದಿನೇ ಹೆಚ್ಚಾಗುತ್ತಿದೆ. ಇದೇ ವೇಳೆಗೆ ಅಂತರ್ಜಾಲದಲ್ಲಿ ಇಂಥಹದ್ದೊಂದು ಆಂದೋಲನ ಆರಂಭವಾಗಿದೆ. ಮುಂದೇನಾಗುತ್ತದೋ ಕಾದು ನೋಡಬೇಕು.












Click it and Unblock the Notifications