Sajjan Jindal: ತಮ್ಮ ಮೇಲಿನ ಅತ್ಯಾಚಾರ ಆರೋಪ ಆಧಾರ ರಹಿತ ಎಂದ ಖ್ಯಾತ ಉದ್ಯಮಿ ಸಜ್ಜನ್ ಜಿಂದಾಲ್
ಜೆಎಸ್ಡಬ್ಲ್ಯು ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ಅವರು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ಆರೋಪವನ್ನು "ಸುಳ್ಳು ಮತ್ತು ಆಧಾರರಹಿತ" ಎಂದು ಕರೆದಿದ್ದಾರೆ. ಜಿಂದಾಲ್ ಅವರು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತಾರೆ ಎಂದು ಹೇಳಿಕೆ ನೀಡಲಾಗಿದೆ. ಆದರೆ ತನಿಖೆ ನಡೆಯುತ್ತಿರುವುದರಿಂದ ಅವರು ಹೆಚ್ಚೇನೂ ಹೇಳಲು ಆಗದು ಎಂದಿದ್ದಾರೆ.
30 ವರ್ಷದ ವೈದ್ಯರೊಬ್ಬರು ಸಜ್ಜನ್ ಜಿಂದಾಲ್ ವಿರುದ್ಧ ಆರೋಪ ಮಾಡಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಮುಂಬೈನಲ್ಲಿ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಲಾಗಿದೆ. ದೂರು ನೀಡಿ ಹಲವು ತಿಂಗಳು ಕಳೆದರೂ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.

ಎಫ್ಐಆರ್ನಲ್ಲಿ, 2021 ರಲ್ಲಿ ಐಪಿಎಲ್ ಪಂದ್ಯದ ವೇಳೆ ದುಬೈನಲ್ಲಿ ಸಜ್ಜನ್ ಜಿಂದಾಲ್ ಅವರನ್ನು ಭೇಟಿಯಾಗಿದ್ದಾಗಿ ಮಹಿಳೆ ಹೇಳಿಕೊಂಡಿದ್ದಾರೆ. ಜಿಂದಾಲ್, ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಎಫ್ಐಆರ್ನಲ್ಲಿ, ಜಿಂದಾಲ್ ತನ್ನ ಮೇಲೆ ಜನವರಿ 24, 2022 ರಂದು ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಏನಿದು ಪ್ರಕರಣ
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಪೊಲೀಸ್ ಠಾಣೆಯಲ್ಲಿ 30 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಜೆಎಸ್ಡಬ್ಲ್ಯೂ ಗ್ರೂಪ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ವಿರುದ್ಧ ಅತ್ಯಾಚಾರ ಮತ್ತು ಕ್ರಿಮಿನಲ್ ಬೆದರಿಕೆಯ ಪ್ರಕರಣವನ್ನು ದಾಖಲಿಸಲಾಗಿದೆ. ಇದಕ್ಕೆ ಭಾನುವಾರ ಪ್ರತಿಕ್ರಿಯೆ ನೀಡಿದ ಅವರು, ಆರೋಪ ಆಧಾರ ರಹಿತ ಎಂದಿದ್ದಾರೆ.
ದೂರುದಾರರ ಪ್ರಕಾರ, ಆರೋಪಿಯು ಜನವರಿ 24, 2022 ರಂದು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಮತ್ತು ಆಕೆ 2023ರ ಫೆಬ್ರವರಿ 16 ರಂದು ಪೊಲೀಸರನ್ನು ಸಂಪರ್ಕಿಸಿದ್ದಳು. ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಜನವರಿ 24, 2022 ಕ್ಕಿಂತ ಮೊದಲು ಅವನು ತನ್ನನ್ನು ಬಲವಂತವಾಗಿ ಚುಂಬಿಸಿದನೆಂದು ಹೇಳಲಾದ ಒಂದೆರಡು ಘಟನೆಗಳನ್ನು ಅವರು ಉಲ್ಲೇಖಿಸಿದ್ದಾರೆ.
ಡಿಸೆಂಬರ್ 5 ರಂದು ಮಹಿಳೆ ಬಾಂಬೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಪೊಲೀಸರು ತನ್ನ ದೂರಿನ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದರು. ಡಿಸೆಂಬರ್ 12 ರಂದು, ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಬಿಕೆಸಿ ಪೊಲೀಸರು ಹೈಕೋರ್ಟ್ಗೆ ತಿಳಿಸಿದರು.
ಮರುದಿನ ಡಿಸೆಂಬರ್ 13 ರಂದು ಎಫ್ಐಆರ್ ದಾಖಲಿಸಲಾಯಿತು. ಒಂದು ದಿನದ ನಂತರ, ಮಹಿಳೆಯ ಹೇಳಿಕೆಯನ್ನು ದಾಖಲಿಸಲಾಗಿದೆ ಮತ್ತು ಐಪಿಸಿ ಸೆಕ್ಷನ್ 376 (ಅತ್ಯಾಚಾರ), 354 ಮಹಿಳೆಯ ಮೇಲೆ ಹಲ್ಲೆ ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.
ನ್ಯಾಯಮೂರ್ತಿಗಳಾದ ಪ್ರಕಾಶ್ ಡಿ ನಾಯ್ಕ್ ಮತ್ತು ನಿತಿನ್ ಆರ್ ಬೋರ್ಕರ್ ಅವರ ಪೀಠವು ಪೊಲೀಸರ ಸಲ್ಲಿಕೆಯನ್ನು ಗಮನಿಸಿ "ತ್ವರಿತ" ತನಿಖೆಗೆ ನಿರ್ದೇಶನ ನೀಡಿತು. ಈ ಸಂದರ್ಭಗಳಲ್ಲಿ, ನಾವು ಈ ಅರ್ಜಿಯನ್ನು ವಿಲೇವಾರಿ ಮಾಡುತ್ತೇವೆ. ಶಾಸನಬದ್ಧ ಮಿತಿಗಳಲ್ಲಿ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು, ಎಂದು ಪೀಠ ಹೇಳಿದೆ.












Click it and Unblock the Notifications