ದೆಹಲಿ ಸಿಎಂಗೆ ಮುಖಭಂಗ: ತಪ್ಪೊಪ್ಪಿಕೊಂಡ ಮಾಜಿ ಆಪ್ ಸಚಿವ
ನವದೆಹಲಿ, ಆಗಸ್ಟ್ 23: ಪಕ್ಷದ ಸಾಲು ಸಾಲು ಶಾಸಕರು, ಸಚಿವರು ಜೈಲು ಶಿಕ್ಷೆ ಅನುಭವಿಸುತ್ತಿರುವ ಬೆನ್ನಲ್ಲೇ, ಅರವಿಂದ್ ಕೇಜ್ರಿವಾಲ್ ಮತ್ತೊಂದು ಮುಜುಗರ ಎದುರಿಸಬೇಕಾಗಿದೆ. ದೆಹಲಿ ಸರಕಾರದ ಮಾಜಿ ಕಾನೂನು ಸಚಿವರೇ ಕಾನೂನು ಉಲ್ಲಂಘಿಸಿದ್ದನ್ನು ಒಪ್ಪಿಕೊಂಡಿದ್ದಾರೆ.
ದೆಹಲಿ ಬಾರ್ ಕೌನ್ಸಿಲಿಗೆ ತಾನು ನೀಡಿದ್ದು 'ಸುಳ್ಳು ಸರ್ಟಿಫಿಕೇಟುಗಳು' ಎಂದು ಒಂದು ವಾರದ ಹಿಂದೆ ಬಂಧನಕ್ಕೊಳಗಾಗಿದ್ದ ದೆಹಲಿ ಸರಕಾರದ ಮಾಜಿ ಕಾನೂನು ಸಚಿವ ಜಿತೇಂದರ್ ಸಿಂಗ್ ತೋಮರ್ ತಪ್ಪೊಪ್ಪಿಕೊಂಡಿದ್ದಾರೆ. (ಮುಂದುವರಿದ ಆಪ್ ಶಾಸಕರ ಬಂಧನ ಪರ್ವ)
ಇದುವರೆಗೆ ಪಕ್ಷದ ಎಲ್ಲಾ ಶಾಸಕರ, ಸಚಿವರ, ಕಾರ್ಯಕರ್ತರ ಬಂಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯೇ ಕಾರಣ ಎಂದು ಹೋದಲೆಲ್ಲಾ ಆರೋಪಿಸುತ್ತಿದ್ದ ದೆಹಲಿ ಮುಖ್ಯಮಂತ್ರಿಗಳಿಗೆ, ತನ್ನ ಸಹದ್ಯೋಗಿ ನೀಡಿರುವ ತಪ್ಪೊಪ್ಪಿಗೆ ತೀವ್ರ ಮುಜುಗರಕ್ಕೀಡಾಗುವಂತೆ ಮಾಡಿದೆ.
ಎರಡು ಏಜೆಂಟುಗಳಿಂದ ತಾವೊಬ್ಬ 'ವಕೀಲ' ಎಂದು ಸುಳ್ಳು ಸರ್ಟಿಫಿಕೇಟ್ ನೀಡಿದ್ದನ್ನು ತೋಮರ್ ಒಪ್ಪಿಕೊಂಡಿದ್ದಾರೆಂದು ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ದೆಹಲಿ ಮತ್ತು ಮುಂಗರ್ ನಲ್ಲಿನ ಏಜೆಂಟುಗಳಿಂದ ಬಿಎಸ್ಸಿ ಮತ್ತು ಎಲ್ ಎಲ್ ಬಿ ಸರ್ಟಿಫಿಕೇಟ್ ಪಡೆದು ಬಾರ್ ಕೌನ್ಸಿಲಿಗೆ ನೀಡಿದ್ದನ್ನು ತೋಮರ್ ವಿಚಾರಣೆಯ ವೇಳೆ ಹೇಳಿದ್ದಾರೆ .
ಎಲ್ ಎಲ್ ಬಿ ಸರ್ಟಿಫಿಕೇಟನ್ನು ಬಿಹಾರದ ತಿಲ್ಕಾ ಮಂಜಿ ಭಾಗಲ್ಪುರ ವಿವಿಯಿಂದ ಮತ್ತು ಬಿಎಸ್ಸಿ ಸರ್ಟಿಫಿಕೇಟನ್ನು ಉತ್ತರಪ್ರದೇಶದ ಆವಧ್ ವಿವಿಯಿಂದ ಪಡೆದಿರುವುದಾಗಿ ತೋಮರ್ ಒಪ್ಪಿಕೊಂಡಿದ್ದಾರೆ.
ದೆಹಲಿಯ ತ್ರಿನಗರ (ಚಾಂದ್ನಿ ಚೌಕ್) ಕ್ಷೇತ್ರವನ್ನು ಪ್ರತಿನಿಧಿಸುವ ತೋಮರ್, ಕಾನೂನು ಸಚಿವರಾಗಿ 'ಕಾನೂನು'ಪದವೀಧರ ಎಂದು ಸುಳ್ಳು ಪ್ರಮಾಣಪತ್ರಿಕೆ ನೀಡಿದ ಆರೋಪದಡಿ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು.