ಜೆಎನ್ಯು ವಿದ್ಯಾರ್ಥಿ ಮೇಲೆ ಐದು ರಾಜ್ಯಗಳಲ್ಲಿ ದೇಶದ್ರೋಹದ ಪ್ರಕರಣ
ನವದೆಹಲಿ, ಜನವರಿ 27: ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಲ್ಲಿ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪಿಎಚ್ಡಿ ವಿದ್ಯಾರ್ಥಿ ಶರ್ಜೀಲ್ ಇಮಾಮ್ ವಿರುದ್ಧ ಐದು ರಾಜ್ಯಗಳಲ್ಲಿ ದೇಶದ್ರೋಹದ ಪ್ರಕರಣ ದಾಖಲಾಗಿದೆ.
ಜ. 16ರಂದು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಸಿಎಎ ವಿರೋಧಿ ಭಾಷಣದ ವೇಳೆ ಜೆಎನ್ಯು ಪಿಎಚ್ಡಿ ವಿದ್ಯಾರ್ಥಿ ಶರ್ಜೀಲ್, ಪ್ರಚೋದನಾಕಾರಿ ಮತ್ತು ದೇಶವಿರೋಧಿ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕಾಗಿ ಅಸ್ಸಾಂ ಮತ್ತು ಉತ್ತರ ಪ್ರದೇಶಗಳಲ್ಲಿ ದೇಶದ್ರೋಹದ ಪ್ರಕರಣ ದಾಖಲಿಸಲಾಗಿತ್ತು. ಇದೇ ಪ್ರಕರಣವನ್ನು ಅರುಣಾಚಲ ಪ್ರದೇಶ, ದೆಹಲಿ ಮತ್ತು ಮಣಿಪುರಗಳಲ್ಲಿಯೂ ದಾಖಲಿಸಲಾಗಿದೆ.
ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ಇಮಾಮ್ ತಲೆಮರೆಸಿಕೊಂಡಿದ್ದು, ದೆಹಲಿ ಮತ್ತು ಉತ್ತರ ಪ್ರದೇಶ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

ಬಿಹಾರದಲ್ಲಿ ತೀವ್ರ ಹುಡುಕಾಟ
ಇಮಾಮ್ ಪತ್ತೆಗೆ ದೆಹಲಿ ಪೊಲೀಸರು ತಂಡವೊಂದನ್ನು ಬಿಹಾರಕ್ಕೆ ಕಳುಹಿಸಿದ್ದಾರೆ. ಇಮಾಮ್ ಊರಾದ ಕಾಕೋದಲ್ಲಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಹುಡುಕಾಟ ನಡೆಸಲಾಗಿದೆ. ಈ ಸಂಬಂಧ ಇಮಾಮ್ನ ಮೂವರು ಸಂಬಂಧಿಕರನ್ನು ಭಾನುವಾರ ಬಂಧಿಸಿ ನಾಲ್ಕು ಗಂಟೆ ಬಳಿಕ ಬಿಡುಗಡೆ ಮಾಡಲಾಗಿದೆ.
|
ಎರಡು ಬಾರಿ ಪ್ರಚೋದನಾಕಾರಿ ಭಾಷಣ
'ಬಿಹಾರದ ನಿವಾಸಿ ಮತ್ತು ಜೆಎನ್ಯು ವಿದ್ಯಾರ್ಥಿಯಾಗಿರುವ ಶರ್ಜೀಲ್ ಇಮಾಮ್, ಸಿಎಎ ಹಾಗೂ ಎನ್ಆರ್ಸಿ ವಿರುದ್ಧದ ಪ್ರತಿಭಟನೆಯಲ್ಲಿ ಪ್ರಚೋದನಾಕಾರಿ ಮತ್ತು ಕೆರಳಿಸುವ ಮಾತುಗಳನ್ನಾಡಿದ್ದಾರೆ ಎನ್ನುವುದು ಗಮನಕ್ಕೆ ಬಂದಿದೆ. ಅಂತಹ ಭಾಷಣವನ್ನು ಅವರು ಡಿ. 13ರಂದು ಜಾಮಿಯಾದಲ್ಲಿ ಮಾಡಿದ್ದರು. ಬಳಿಕ ಸರ್ಕಾರದ ವಿರುದ್ಧ ಮತ್ತೊಂದು ಪ್ರಚೋದಾನಾಕಾರಿ ಹೇಳಿಕೆ ನೀಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ' ಎಂದು ದೆಹಲಿ ಅಪರಾಧ ವಿಭಾಗದ ಡಿಸಿಪಿ ರಾಜೇಶ್ ಡಿಯೋ ಹೇಳಿದ್ದಾರೆ.

ಧಾರ್ಮಿಕ ಸೌಹಾರ್ದಕ್ಕೆ ಧಕ್ಕೆ
ಶರ್ಜೀಲ್ ಇಮಾಮ್ ಆಡಿರುವ ಮಾತುಗಳು, ಸಮಾಜದ ವಿಭಿನ್ನ ಧಾರ್ಮಿಕ ಸಮುದಾಯಗಳ ನಡುವಿನ ಧಾರ್ಮಿಕ ಸೌಹಾರ್ದಕ್ಕೆ ಧಕ್ಕೆ ತರುವಂತೆ ಮತ್ತು ದೇಶದ ಏಕತೆ ಹಾಗೂ ಸಮಗ್ರತೆಗೆ ಹಾನಿ ಮಾಡುವಂತೆ ಇವೆ ಎಂದು ಅವರು ತಿಳಿಸಿದ್ದಾರೆ. ದೆಹಲಿ ಪೊಲೀಸರು ಇಮಾಮ್ ವಿರುದ್ಧ ಐಪಿಸಿ ಸೆಕ್ಷನ್ 124 ಎ, 153 ಎ ಮತ್ತು 505ರ ಅಡಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಮಣಿಪುರದಲ್ಲಿ ಐಪಿಸಿ ಸೆಕ್ಷನ್ 121, 121ಎ, 124 ಎ, 120 ಬಿ, 153 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅರುಣಾಚಲ ಪ್ರದೇಶದಲ್ಲಿ 124ಎ, 153ಎ ಮತ್ತು 153ಬಿ ಅಡಿ ಪ್ರಕರಣ ದಾಖಲಾಗಿದೆ.
|
ಇಮಾಮ್ ಹೇಳಿದ್ದು ಏನು?
ದೆಹಲಿಯ ಶಹೀನ್ ಬಾಗ್ ಪ್ರತಿಭಟನೆಗೆ ಬೆಮಬಲ ನೀಡಿದ್ದ ಇಮಾಮ್, ಕೇಂದ್ರ ಸರ್ಕಾರದ ನೀತಿಯನ್ನು ಹಿಮ್ಮೆಟ್ಟಿಸಲು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಬೇಕು ಎಂದು ಹೇಳಿದ್ದರು. 'ನಮ್ಮ ಜತೆ ಐದು ಲಕ್ಷ ಜನರಿದ್ದರೆ ನಾವು ಭಾರತದಿಂದಲೇ ಈಶಾನ್ಯವನ್ನು ಕತ್ತರಿಸಿ ಹಾಕಬಹುದು. ಶಾಶ್ವತವಾಗಿ ಅಲ್ಲದಿದ್ದರೂ ಒಂದೆರಡು ತಿಂಗಳವರೆಗೆ... ಹಳಿಗಳು ಮತ್ತು ರಸ್ತೆಗಳ ಮೇಲೆ ಕಲ್ಲು ಮಣ್ಣನ್ನು ಹಾಕಿ. ಒಮ್ಮೆ ಅಸ್ಸಾಂ ಬೇರ್ಪಟ್ಟರೆ ಮಾತ್ರವೇ ಅವರು ನಮ್ಮ ಮಾತನ್ನು ಕೇಳುತ್ತಾರೆ. ಈಶಾನ್ಯ ಭಾಗವನ್ನು ಭಾರತದ ಇತರೆ ಭಾಗಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆಯು ಮುಸ್ಲಿಂ ಪ್ರಾಬಲ್ಯ ಹೊಂದಿರುವುದರಿಂದ ನಾವು ಇದನ್ನು ಮಾಡಬಹುದು' ಎಂದು ಹೇಳಿದ್ದು ವಿಡಿಯೋಗಳಲ್ಲಿ ದಾಖಲಾಗಿತ್ತು.












Click it and Unblock the Notifications