ಅಗ್ನಿಪಥ ಯೋಜನೆ ರದ್ದುಗೊಳಿಸಿ, ನಿಯಮಿತ ನೇಮಕಾತಿ ಆರಂಭಿಸಿ: ಸಿಪಿಐ(ಎಂ)
ನವದೆಹಲಿ, ಜೂನ್ 16: ಭಾರತದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅಪಚಾರ ಮಾಡುವ 'ಅಗ್ನಿಪಥ್' ಯೋಜನೆಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ)ನ ಪೊಲಿಟ್ ಬ್ಯೂರೋ ಬಲವಾದ ಅಸಮ್ಮತಿ ವ್ಯಕ್ತಪಡಿಸಿದೆ.
ನಾಲ್ಕು ವರ್ಷಗಳ ಅವಧಿಗೆ 'ಒಪ್ಪಂದದ ಮೇರೆಯ ಸೈನಿಕ'ರನ್ನು ನೇಮಕ ಮಾಡುವ ಮೂಲಕ ವೃತ್ತಿಪರ ಸಶಸ್ತ್ರ ಪಡೆಗಳನ್ನು ಕಟ್ಟಲಾಗುವುದಿಲ್ಲ. ಈ ಯೋಜನೆಯು ಪಿಂಚಣಿ ಹಣವನ್ನು ಉಳಿಸಲು, ನಮ್ಮ ವೃತ್ತಿಪರ ಸಶಸ್ತ್ರ ಪಡೆಗಳ ಗುಣಮಟ್ಟ ಮತ್ತು ದಕ್ಷತೆಯನ್ನು ತೀವ್ರವಾಗಿ ಇಳಿಸುತ್ತದೆ ಎಂದು ಸಿಪಿಐ(ಎಂ) ಹೇಳಿದೆ.
ಕಳೆದ ಎರಡು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಯಾವುದೇ ನೇಮಕಾತಿ ನಡೆದಿಲ್ಲ. ಈ ಯೋಜನೆಯು ಸಶಸ್ತ್ರ ಪಡೆಗಳಿಗೆ ನಿಯಮಿತ ಸೈನಿಕರನ್ನು ನೇಮಿಸುವುದಿಲ್ಲ. ಅದರ ಬದಲಿಗೆ ಅಂಥ ಗುತ್ತಿಗೆ ಸೈನಿಕರಿಗೆ ನಾಲ್ಕು ವರ್ಷಗಳ ನಂತರ ಉದ್ಯೋಗದ ಇತರ ಯಾವುದೇ ನಿರೀಕ್ಷೆಗಳು ಇಲ್ಲದಂತೆ ಅವರನ್ನು ಬಿಟ್ಟುಬಿಡುತ್ತದೆ.
ಇದು ಅವರು ಖಾಸಗಿ ಸಶಸ್ತ್ರ ಪಡೆಗಳಿಗೆ ಸೇವೆ ಸಲ್ಲಿಸುವ ಅಪಾಯಕಾರಿ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಈಗಾಗಲೇ ತೀವ್ರ ಒತ್ತಡದಲ್ಲಿರುವ ನಮ್ಮ ಸಾಮಾಜಿಕ ಹಂದರಕ್ಕೆ ಅನಾಹುತಕಾರಿ ಪರಿಣಾಮ ಉಂಟು ಮಾಡುತ್ತದೆ.
ಅಗ್ನಿಪಥ್ ನೇಮಕಾತಿ ಯೋಜನೆಯ ವಿರುದ್ಧ ಪ್ರತಿಭಟನೆ: ಛಾಪ್ರಾದಲ್ಲಿ ರೈಲಿಗೆ ಬೆಂಕಿ
ಈ ಯೋಜನೆಯ ವಿರುದ್ಧ ಆಕ್ರೋಶ
ಉದ್ಯೋಗ ಭದ್ರತೆಯ ಕನಿಷ್ಠ ರಕ್ಷಣೆಯಿಲ್ಲದೆ ನಮ್ಮ ಯುವಕರು ಪರಮ ತ್ಯಾಗಕ್ಕೆ ಸಿದ್ಧರಾಗಬೇಕೆಂದು ಕರೆ ನೀಡುವುದು ಅಪರಾಧವಾಗುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಸ್ವಯಂಪ್ರೇರಿತ ಪ್ರತಿಭಟನೆಗಳು ಈ ಯೋಜನೆಯ ವಿರುದ್ಧ ಆಕ್ರೋಶವನ್ನು ಪ್ರತಿಬಿಂಬಿಸುತ್ತವೆ.
ಈ ‘ಅಗ್ನಿಪಥ್' ಯೋಜನೆಯನ್ನು ತಕ್ಷಣವೇ ರದ್ದುಪಡಿಸಬೇಕು ಮತ್ತು ಸಶಸ್ತ್ರ ಪಡೆಗಳಿಗೆ ನಿಯಮಿತ ನೇಮಕಾತಿಯನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಆಗ್ರಹಿಸಿದೆ.
ರೈಲಿಗೆ ಬೆಂಕಿ ಹಚ್ಚಿ ಆಕ್ರೋಶ
ಅಗ್ನಿಪಥ್ ಯೋಜನೆ ವಿರೋಧಿಸಿ ವಿವಿಧ ರಾಜ್ಯಗಳಲ್ಲಿ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಹಾರ, ರಾಜಸ್ಥಾನದಲ್ಲಿ ಈ ಯೋಜನೆಯ ವಿರುದ್ಧ ಜನರು ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ. ಜೊತೆಗೆ ಉದ್ಯೋಗ ಭದ್ರತೆ ಮತ್ತು ಪಿಂಚಣಿಗೆ ಒತ್ತಾಯಿಸುತ್ತಿದ್ದಾರೆ. ಛಾಪ್ರಾದಲ್ಲಿ ಪ್ರತಿಭಟನಾಕಾರರು ರೈಲಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ಎರಡು ವರ್ಷಗಳ ನಂತರ ಸೇನೆಗೆ ನೇಮಕಾತಿ
ಅಗ್ನಿಪಥ ಯೋಜನೆಯಡಿ ನೇಮಕಗೊಳ್ಳುವ ಜನರಲ್ಲಿ ಶೇಕಡಾ 75 ರಷ್ಟು ಜನರಿಗೆ ಸೇವಾ ವಿಸ್ತರಣೆಯನ್ನು ನೀಡಲಾಗುವುದಿಲ್ಲ ಅಥವಾ ಯಾವುದೇ ರೀತಿಯ ಪಿಂಚಣಿ ಪ್ರಯೋಜನವನ್ನು ಪಡೆಯುವುದಿಲ್ಲ. ಎರಡು ವರ್ಷಗಳ ನಂತರ ಸೇನೆಗೆ ನೇಮಕಾತಿ ಆರಂಭವಾಗಿದ್ದು, ನಂತರವೂ ಭವಿಷ್ಯದ ಬಗ್ಗೆ ಖಚಿತತೆ ಇಲ್ಲ ಎನ್ನುತ್ತಾರೆ ಪ್ರತಿಭಟನಾಕಾರರು. 4 ವರ್ಷಗಳ ನಂತರ ಸೇವೆ ವಿಸ್ತರಣೆಯಾಗದಿದ್ದರೆ ನಾವು ಏನು ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ. ಸರ್ಕಾರದ ಈ ಯೋಜನೆಗೆ ಪ್ರತಿಭಟನಾಕಾರರು ವಿರೋಧ ವ್ಯಕ್ತಪಡಿಸಿದ್ದಾರೆ.
ಅಗ್ನಿಪಥ್ ನೇಮಕಾತಿ ಯೋಜನೆ
ಅಗ್ನಿಪಥ್ ಅಥವಾ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೂನ್ 14ಕ್ಕೆ ಚಾಲನೆ ನೀಡಿದರು. ಭಾರತೀಯ ಸಶಸ್ತ್ರ ಪಡೆಗಳಿಗೆ ನೇಮಕಾತಿಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರುವ ಯೋಜನೆಯಾಗಿದ್ದು, ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗೆ 46,000 ಸೈನಿಕರನ್ನು ಸೇರಿಸಿಕೊಳ್ಳುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದೆ.
ವೈದ್ಯಕೀಯ ಮತ್ತು ವಿಮೆ ಪ್ರಯೋಜನ
ಹೊಸ ಯೋಜನೆಯಡಿಯಲ್ಲಿ, 17.5 ವರ್ಷದಿಂದ 21 ವರ್ಷದೊಳಗಿನ ಸುಮಾರು 45,000 ಜನರನ್ನು ಸೇವೆಗಳಿಗೆ ಸೇರಿಸಿಕೊಳ್ಳಲಾಗುವುದು ಮತ್ತು ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾರೆ. ಈ ನಾಲ್ಕು ವರ್ಷಗಳ ಅಧಿಕಾರಾವಧಿಯು ಆರು ತಿಂಗಳ ತರಬೇತಿಯನ್ನು ಒಳಗೊಂಡಿರುತ್ತದೆ. ಈ ಅವಧಿಯಲ್ಲಿ ಅವರಿಗೆ 30,000 ರು ನಿಂದ 40,000 ರು ಮತ್ತು ಭತ್ಯೆಗಳ ನಡುವೆ ಮಾಸಿಕ ವೇತನವನ್ನು ನೀಡಲಾಗುತ್ತದೆ. ಅವರು ವೈದ್ಯಕೀಯ ಮತ್ತು ವಿಮೆ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ.
ನಾಲ್ಕು ವರ್ಷಗಳ ನಂತರ, ಈ ಸೈನಿಕರಲ್ಲಿ ಕೇವಲ ಶೇ 25 ರಷ್ಟು ಮಾತ್ರ ಸೇವೆಯಲ್ಲಿ ಉಳಿಯಲಿದ್ದಾರೆ ಹಾಗೂ ಅವರನ್ನು ಸಾಮಾನ್ಯ ಕೇಡರ್ಗೆ ಸೇರಿಸಲಾಗುತ್ತದೆ. ಜೊತೆಗೆ ಪೂರ್ಣ 15 ವರ್ಷಗಳ ಕಾಲ ಅಧಿಕಾರಿಯೇತರ ಶ್ರೇಣಿಯಲ್ಲಿ ಸೇವೆ ಸಲ್ಲಿಸಬಹುದಾಗಿದೆ.
Recommended Video