ಮಾಜಿ ಸಿಎಂಗಳಿಗೆ ಸರ್ಕಾರಿ ಬಂಗಲೆ ಏಕೆ? : ಸುಪ್ರೀಂ ಕೋರ್ಟ್
ನವದೆಹಲಿ, ಆಗಸ್ಟ್ 01: ಮಾಜಿ ಮುಖ್ಯಮಂತ್ರಿಗಳು ಸರ್ಕಾರಿ ಬಂಗಲೆಯಲ್ಲಿ ನೆಲೆಸುವ ಬಗ್ಗೆ ಬಂದಿದ್ದ ತಕರಾರು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸೋಮವಾರ ಮಹತ್ವದ ಆದೇಶ ನೀಡಿದೆ.
ಮಾಜಿ ಮುಖ್ಯಮಂತ್ರಿಗಳು ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಾ, ಜೀವನ ಪರ್ಯಂತ ಸರ್ಕಾರಿ ವಸತಿ ಸೌಲಭ್ಯ, ಸವಲತ್ತು ಪಡೆಯಲು ಅರ್ಹರಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.[ದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿ ಪೆಮಾ ಖಂಡು]
ನ್ಯಾಯಮೂರ್ತಿ ಅನಿಲ್.ಆರ್. ದವೆ ನೇತೃತ್ವದ ತ್ರಿಸದಸ್ಯ ಪೀಠವು 2004ರ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದೆ. ಇಂಥ ಯಾವುದೇ ಸರ್ಕಾರಿ ವಸತಿಯನ್ನು ಎರಡು ಅಥವಾ ಮೂರು ತಿಂಗಳಲ್ಲಿ ಖಾಲಿ ಮಾಡಬೇಕು. ಜೀವನ ಪರ್ಯಂತ ಸರ್ಕಾರಿ ವಸತಿ ಸವಲತ್ತು ಹೊಂದುವ ಹಕ್ಕು ಅವರಿಗೆ ಇಲ್ಲ' ಎಂದು ಆದೇಶದಲ್ಲಿ ಹೇಳಲಾಗಿದೆ.[ಉತ್ತರಪ್ರದೇಶದ ಸಿಎಂ ಅಭ್ಯರ್ಥಿಯಾಗಿ ಶೀಲಾ ದೀಕ್ಷಿತ್: ಕಾಂಗ್ರೆಸ್]

ಉತ್ತರ ಪ್ರದೇಶದ ಸರ್ಕಾರೇತರ (ಎನ್ಜಿಒ) ಸಂಘಟನೆ ಲೋಕ ಪ್ರಹರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ ಅನಿಲ್.ಆರ್. ದವೆ, ನ್ಯಾ. ಯು.ಯು. ಲಲಿತ್ ಮತ್ತು ನ್ಯಾ. ಎಲ್. ನಾಗೇಶ್ವರ ರಾವ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಸರ್ಕಾರಿ ವಸತಿ ಸೌಲಭ್ಯಗಳನ್ನು ಮಾಜಿ ಮುಖ್ಯಮಂತ್ರಿಗಳು, ಅನರ್ಹ ಸಂಘಟನೆಗಳಿಗೆ ಮಂಜೂರು ಮಾಡುವುದರ ವಿರುದ್ಧ ನಿರ್ದೇಶನ ನೀಡುವಂತೆ ಲೋಕ ಪ್ರಹರಿ ತನ್ನ ಅರ್ಜಿಯಲ್ಲಿ ಮನವಿ ಮಾಡಿತ್ತು.[ಮಾಯಾವತಿಯನ್ನು ವೇಶ್ಯೆ ಎಂದ ಬಿಜೆಪಿ ಮುಖಂಡ ಅಮಾನತು]
'ಮಾಜಿ ಮುಖ್ಯಮಂತ್ರಿಗಳ ವಸತಿ ಮಂಜೂರಾತಿ ನಿಯಮಗಳು, 1997' ಎಂಬ ಕಾನೂನನ್ನು ರಚಿಸಿ ಮಾಜಿ ಮುಖ್ಯಮಂತ್ರಿಗಳಿಗೆ ಸರ್ಕಾರಿ ವಸತಿಗಳನ್ನು ಮಂಜೂರು ಮಾಡಿಕೊಳ್ಳಲು ವ್ಯವಸ್ಥೆ ಮಾಡಿಕೊಂಡಿದೆ ಎಂದು ಲೋಕ ಪ್ರಹರಿ ಆರೋಪಿಸಿತ್ತು. 2014ರ ನವೆಂಬರ್ 27ರಂದು ವಿಚಾರಣೆ ಬಳಿಕ ತೀರ್ಪನ್ನು ಕಾಯ್ದಿರಿಸಲಾಗಿತ್ತು. ಸೋಮವಾರ(ಆಗಸ್ಟ್ 01) ರಂದು ತೀರ್ಪು ಹೊರಬಂದಿದೆ.
ಏನಿದರ ಪರಿಣಾಮ?: ಮುಲಾಯಂ ಸಿಂಗ್ ಯಾದವ್, ಮಾಯಾವತಿ ಸೇರಿದಂತೆ ಉತ್ತರಪ್ರದೇಶದ ಆರು ಮುಖ್ಯಮಂತ್ರಿಗಳು ಸರ್ಕಾರಿ ಬಂಗಲೆ ತೊರೆಯಬೇಕಾಗುತ್ತದೆ. ರಾಜನಾಥ್ ಸಿಂಗ್, ಕಲ್ಯಾಣ್ ಸಿಂಗ್, ಎನ್ ಡಿ ತಿವಾರಿ ಹಾಗೂ ರಾಮ್ ನರೇಶ್ ಯಾದವ್ ಕೂಡಾ ವಸತಿ ಸೌಲಭ್ಯದಿಂದ ವಂಚಿತರಾಗಲಿದ್ದಾರೆ. ಇದು ಇತರೆ ರಾಜ್ಯಗಳಿಗೂ ಅನ್ವಯವಾಗಲಿದೆ. (ಒನ್ ಇಂಡಿಯಾ ಸುದ್ದಿ)











Click it and Unblock the Notifications