ಹೆಚ್ಚು ನೋಟಾ ಬಂದರೆ ಚುನಾವಣೆ ರದ್ದು; ಕೇಂದ್ರದ ಉತ್ತರ ಕೇಳಿದ ಸುಪ್ರೀಂ
ನವದೆಹಲಿ, ಮಾರ್ಚ್ 15: ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗಿಂತ ನೋಟಾಗೆ ಗರಿಷ್ಠ ಮತ ಬಂದರೆ, ಆ ನಿರ್ದಿಷ್ಟ ಕ್ಷೇತ್ರದ ಚುನಾವಣೆಯನ್ನು ರದ್ದುಗೊಳಿಸಿ ಮರು ಚುನಾವಣೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿ ಸಂಬಂಧ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಹಾಗೂ ಚುನಾವಣಾ ಆಯೋಗದಿಂದ ಪ್ರತಿಕ್ರಿಯೆ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ, ನ್ಯಾಯಾಧೀಶ ಎ.ಎಸ್. ಬೋಪಣ್ಣ ಹಾಗೂ ವಿ. ರಾಮಸುಬ್ರಹ್ಮಣಿಯನ್ ಅವರನ್ನೊಳಗೊಂಡ ಪೀಠವು ಕಾನೂನು ಸಚಿವಾಲಯ ಹಾಗೂ ಚುನಾವಣಾ ಆಯೋಗಕ್ಕೆ ನೋಟಾ ಮತ ಸಂಬಂಧ ಅರ್ಜಿಗೆ ಉತ್ತರ ನಿರೀಕ್ಷಿಸಿದೆ.
ದೆಹಲಿ ಚುನಾವಣೆ; ಅಚ್ಚರಿಗೆ ಕಾರಣವಾದ 'ನೋಟಾ' ಮತಗಳ ಸಂಖ್ಯೆ
ಸೋಮವಾರ ನ್ಯಾಯಪೀಠವು ವಕೀಲ ಹಾಗೂ ಬಿಜೆಪಿ ಮುಖಂಡ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದು, ಚುನಾವಣೆಯಲ್ಲಿರುವ ಅಭ್ಯರ್ಥಿಗಳಿಗಿಂತ ನೋಟಾ ಮತಗಳು ಹೆಚ್ಚು ಬಂದರೆ, ಆ ಚುನಾವಣೆಯನ್ನು ರದ್ದುಗೊಳಿಸಬೇಕು. ಜೊತೆಗೆ ಮೊದಲು ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಮರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಸುಪ್ರೀಂ ಕೋರ್ಟ್ಗೆ ಮನವಿ ಮಾಡಲಾಗಿತ್ತು.
ಹಿರಿಯ ವಕೀಲರಾದ ಮನೇಕಾ ಗುರುಸ್ವಾಮಿ ಅಶ್ವಿನಿ ಉಪಾಧ್ಯಾಯ ಪರ ವಾದ ಮಂಡಿಸಿದರು. ಅಭ್ಯರ್ಥಿಯನ್ನು ತಿರಸ್ಕರಿಸುವ ಹಾಗೂ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಹಕ್ಕು ಜನರಿಗೆ ತಮ್ಮ ಅಸಮಾಧಾನ ವ್ಯಕ್ತಪಡಿಸುವ ಅಧಿಕಾರ ನೀಡುತ್ತದೆ. ಮತದಾರರು ಸ್ಪರ್ಧಿಸುವ ಅಭ್ಯರ್ಥಿ, ಆತನ ಹಿನ್ನೆಲೆ ಅಥವಾ ಕಾರ್ಯಕ್ಷಮತೆ ಬಗ್ಗೆ ಅತೃಪ್ತರಾಗಿದ್ದರೆ, ಅಂಥ ಅಭ್ಯರ್ಥಿಯನ್ನು ತಿರಸ್ಕರಿಸಲು ಅವರು ನೋಟಾ ಆರಿಸಿಕೊಳ್ಳುತ್ತಾರೆ. ಇದರಿಂದ ಅರ್ಹ ಅಭ್ಯರ್ಥಿಗಳು ಅಧಿಕಾರಕ್ಕೆ ಬರಲು ನೆರವಾಗುತ್ತದೆ ಎಂದು ವಾದಿಸಿದ್ದರು.