ಹಿಂದೂಗಳು ಅಲ್ಪಸಂಖ್ಯಾತ ಮಾನ್ಯತೆ ಅರ್ಜಿ ತಿರಸ್ಕೃತ
ನವದೆಹಲಿ, ನವೆಂಬರ್ 10: ದೇಶದ 8 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಆದರೆ, ಸರಿಯಾದ ಮಾನ್ಯತೆ ಸಿಕ್ಕಿಲ್ಲ. ಹೀಗಾಗಿ, ಅಧಿಕೃತ ಮಾನ್ಯತೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಯನ್ನು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಆದರೆ, ಈ ಬಗ್ಗೆ ಏನಾದರೂ ತಕರಾರು ಇದ್ದರೆ ಅದನ್ನು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೆ ಅರ್ಜಿ ಸಲ್ಲಿಸಿ ಎಂದು ಅರ್ಜಿದಾರರಿಗೆ ಜಸ್ಟೀಸ್ ರಂಜನ್ ಗೋಗಾಯಿ ಅವರಿದ್ದ ನ್ಯಾಯಪೀಠ ನಿರ್ದೇಶಿಸಿತು.

ಅರುಣಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಲಕ್ಷದ್ವೀಪ, ಮಿಜೋರಾಂ, ನಾಗಾಲ್ಯಾಂಡ್, ಮೇಘಾಲಯ, ಮಣಿಪುರ ರಾಜ್ಯಗಳಲ್ಲಿರುವ ಹಿಂದೂಗಳನ್ನು ಅಲ್ಪಸಂಖ್ಯಾತರನ್ನಾಗಿ ಗುರುತಿಸಿ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ್ ಎಂಬವರು ಪಿಐಎಲ್ ಸಲ್ಲಿಸಿದ್ದರು.
ಮುಸ್ಲಿಂ, ಕೈಸ್ತ, ಸಿಖ್, ಬೌದ್ಧ ಧರ್ಮ, ಪಾರ್ಸಿ, ಧರ್ಮದ ಸಮುದಾಯಗಳನ್ನು 1993 ರಲ್ಲಿ ಕೇಂದ್ರ ಸರ್ಕಾರ ನೋಟಿಫಿಕೇಶನ್ ಹೊರಡಿಸಿ ಅಲ್ಪಸಂಖ್ಯಾತರ ಮಾನ್ಯತೆ ನೀಡಿತ್ತು. 2014ರಲ್ಲಿ ಈ ಪಟ್ಟಿಗೆ ಜೈನ ಧರ್ಮವನ್ನು ಸೇರಿಸಲಾಗಿದೆ. ಆದರೆ, 2011ರ ಜನಗಣತಿಯ ಪ್ರಕಾರ ಈ 8 ರಾಜ್ಯಗಳಲ್ಲಿ ಅಲ್ಪಸಂಖ್ಯಾತರೆನಿಸಿಕೊಂಡಿರುವ ಮುಸ್ಲಿಂ, ಕ್ರೈಸ್ತರ ಸಂಖ್ಯೆ ಅಧಿಕವಾಗಿದೆ.
2011ರ ಜನಗಣತಿಯ ಪ್ರಕಾರ ಲಕ್ಷದ್ವೀಪದಲ್ಲಿ ಶೇ.2.5, ಮಿಜೊರಾಂ ಶೇ.2.75, ನಾಗಾಲ್ಯಾಂಡ್ ಶೇ.8.75, ಮೇಘಾಲಯ ಶೇ.11.53, ಜಮ್ಮು ಕಾಶ್ಮೀರ ಶೇ. 28.44, ಅರುಣಾಚಲ ಪ್ರದೇಶ ಶೇ.29, ಮಣಿಪುರ ಶೇ. 31.39 ಮತ್ತು ಪಂಜಾಬ್ನಲ್ಲಿ ಶೇ.38.40 ರಷ್ಟು ಹಿಂದೂಗಳು ವಾಸಿಸುತ್ತಿದ್ದಾರೆ.ಬಹುಸಂಖ್ಯಾತರು ಎಂದು ಗುರುತಿಸಿಕೊಂಡ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು, ಇದರಿಂದಾಗಿ ಸರ್ಕಾರಿ ಲಾಭಗಳು ತಲುಪಬೇಕಾದ ಜನರಿಗೆ ತಲುಪುತ್ತಿಲ್ಲ. ಹೀಗಾಗಿ, ಈ 8 ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತರ ಮಾನ್ಯತೆ ನೀಡಿ ಎಂದು ಬಿಜೆಪಿ ಮುಖಂಡ ಅಶ್ವಿನಿ ಕುಮಾರ್ ಅವರು ತಮ್ಮ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು.











Click it and Unblock the Notifications