ಮತ್ತೆ ಎದ್ದುಕೂತ ಹಳೆ ಪ್ರಕರಣ: ಸಿಎಂ ಗಾದಿ ಕಳೆದುಕೊಳ್ತಾರಾ ನಿತೀಶ್?
ಬಿಹಾರ ಸಿಎಂ ನಿತೀಶ್ ಅವರ ವಿಧಾನ ಪರಿಷತ್ ಸದಸ್ಯತ್ವ ಔಚಿತ್ಯ ಪ್ರಶ್ನೆ ಮಾಡಿರುವ ಅರ್ಜಿ ವಿಚಾರಣೆ. ಅಡ್ವೊಕೇಟ್ ಎಂ.ಎಲ್. ಶರ್ಮಾ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ಸುಪ್ರೀಂ ಕೋರ್ಟ್.
ನವದೆಹಲಿ, ಆಗಸ್ಟ್ 1: ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿಧಾನ ಪರಿಷತ್ ಸದಸ್ವತ್ಯದ ಔಚಿತ್ಯವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನಿರ್ಧರಿಸಿದ್ದು, ಇದು ನಿತೀಶ್ ಕುಮಾರ್ ಅವರನ್ನು ಸಂದಿಗ್ಧತೆಗೆ ಸಿಲುಕಿಸಿದೆ.
1991ರಲ್ಲಿ ಬಿಹಾರದ ಬಾರ್ಹ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮೇಲೆ ಅಲ್ಲಿನ ಕಾಂಗ್ರೆಸ್ ನಾಯಕ ಸೀತಾರಾಂ ಸಿಂಗ್ ಎಂಬುವರ ಕೊಲೆ ನಡೆದಿತ್ತು. ಆ ಪ್ರಕರಣದಲ್ಲಿ, ನಿತೀಶ್ ಅವರ ಹೆಸರು ಬಂದಿತ್ತು.

ನಿತೀಶ್ ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ, ನಿತೀಶ್ ಕುಮಾರ್ ಅವರ ಸದ್ಯಕ್ಕೆ ಹೊಂದಿರುವ ವಿಧಾನ ಪರಿಷತ್ ಸದಸ್ಯತ್ವದ ಔಚಿತ್ಯವನ್ನು ಪ್ರಶ್ನೆ ಮಾಡಬೇಕೆಂದು ಅಡ್ವೊಕೇಟ್ ಎಂ.ಎಲ್. ಶರ್ಮಾ ಎಂಬುವರು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ಮಂಗಳವಾರ (ಆಗಸ್ಟ್ 1) ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಅಮಿತಾವ ರಾಯ್ ಹಾಗೂ ಎ.ಎಂ. ಖಾನ್ವಿಕಾರ್ ಅವರುಳ್ಳ ಪೀಠ ಪ್ರಕರಣವನ್ನು ವಿಚಾರಣೆಗೆ ಸ್ವೀಕರಿಸಿದೆ.
ನಿತೀಶ್ ಕುಮಾರ್ ಅವರೊಬ್ಬ ಪ್ರಭಾವಿ ರಾಜಕಾರಣಿಯಾಗಿರುವುದರಿಂದ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ತನಿಖಾಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಬೇಕೆಂದು ಅರ್ಜಿದಾರರ ವಾದಿಸಿದ್ದಾರೆ.












Click it and Unblock the Notifications